ಮಂಗಳೂರು: ಸರಕಾರಿ ನೌಕರರ ಮಕ್ಕಳು ಅತ್ಯಧಿಕ ಅಂಕ ಗಳಿಸಿ ಓದಿನಲ್ಲಿ ಮುಂದೆ ಇರುವುದು ಸಂತಸದ ವಿಷಯವಾಗಿದ್ದು, ಇದರ ಜತೆಗೆ ಸರಕಾರಿ ನೌಕರರು ರಾಜ್ಯ, ರಾಷ್ಟ್ರ. ಅಂತರರಾಷ್ಟ್ರ ಮಟ್ಟದ ಕ್ರೀಡೆಗಳಲ್ಲಿ ಪಾಲ್ಗೊಂಡು ತಮ್ಮ ಪಾರಮ್ಯ ಮೆರೆಯುವ ಮೂಲಕ ಎಲ್ಲರಿಗಿಂತ ಸಾಧನೆಯಲ್ಲಿ ಮುಂದಿರುವುದು ಸಂತಸದ ಸಂಗತಿ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಕಾರ್ಯದರ್ಶಿ ಡಾ. ನೆಲ್ಕುದ್ರಿ ಸದಾನಂದ ಹೇಳಿದರು.
ಮಂಗಳೂರಿನ ನಂದಿನಿ ಸಭಾಂಗಣದಲ್ಲಿ ಮಂಗಳವಾರ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯ ಸರ್ಕಾರಿ ನೌಕರರ ಸಂಘ ವತಿಯಿಂದ ನಡೆದ 2023-24 ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿಯಲ್ಲಿ ಅತ್ಯಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಹಾಗೂ ಕ್ರೀಡೆಯಲ್ಲಿ ಸಾಧನೆ ಮಾಡಿದ ನೌಕರರರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಉತ್ತಮ ಅಂಕ ದಾಖಲೆ ಮಾಡುವ ಜತೆಗೆ ಇದೇ ರೀತಿಯಲ್ಲಿ ಮಕ್ಕಳು ಉತ್ತಮ ಸಂಸ್ಕಾರವನ್ನು ಕಲಿತು ಉತ್ತಮ ಪ್ರಜೆಗಾಳಗಬೇಕು. ನೈತಿಕವಾಗಿ ಕುಟುಂಬದ ಜತೆಗೆ ಬೆರೆತು ಎಲ್ಲರೊಂದಿಗೂ ಹೊಂದಿಕೊಂಡು ಹೋಗಬೇಕು. ಸಮಾಜದಲ್ಲಿ ಸತ್ಪ್ರಜೆಗಳಾಗಬೇಕು ಎಂದರು.
ಸಮಾರಂಭದಲ್ಲಿ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ತರಗತಿಯಲ್ಲಿ ಅತ್ಯಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಪ್ರದಾನ ಮಾಡಲಾಯಿತು. ರಾಜ್ಯ ಮಟ್ಟದಲ್ಲಿ ನಡೆದ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಚಿನ್ನ ಮತ್ತು ಬೆಳ್ಳಿ ಪದಕ ಗೆದ್ದ ಸರಕಾರಿ ನೌಕರರನ್ನು ಸನ್ಮಾನಿಸಲಾಯಿತು.
ಸಮಾರಂಭದಲ್ಲಿ,ರಾಜ್ಯ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ್. ಟಿ., ರಾಜ್ಯ ಉಪಾಧ್ಯಕ್ಷ ಸಿದ್ದೇಶ್, ದ.ಕ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಎಚ್ ಗಣೇಶ್ ರಾವ್, ನಿಕಟ ಪೂರ್ವ ಜಿಲ್ಲಾಧ್ಯಕ್ಷ ಪಿ.ಕೆ. ಕೃಷ್ಣ , ಜಿಲ್ಲಾ ಖಜಾಂಚಿ ನವೀನ್ ಕುಮಾರ್ ಎಂ ಎಸ್ ಹಾಗೂ ತಾಲೂಕು ಅಧ್ಯಕ್ಷರು ಪದಾಧಿಕಾರಿಗಳು ಇದ್ದರು.
ಸಭಾ ಕಾರ್ಯಕ್ರಮದ ಮೊದಲು ಸರಕಾರಿ ನೌಕರರಿಗೆ ಒತ್ತಡ ನಿರ್ವಹಣೆ ಕುರಿತು ಡಾ. ಬಿಂದು ಉದಯಕುಮಾರ್ ಅವರಿಂದ ಕಾರ್ಯಾಗಾರ ನಡೆಯಿತು.