ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆಯಿಂದಾಗಿ ವ್ಯಾಪಕ ಹಾನಿ ಉಂಟಾಗುತ್ತಿದ್ದರು, ಜಿಲ್ಲಾ ಉಸ್ತುವಾರಿ ಸಚಿವರೇ ಕಾಣ್ತಾ ಇಲ್ಲ. ಮಂಗಳೂರಿಗೆ ಉಸ್ತುವಾರಿ ಮಂತ್ರಿ ಬಾರದೇ 15 ದಿನಗಳ ಮೇಲಾಗಿದೆ ಅವರ ಹೈಕಮಾಂಡ್ ಜಿಲ್ಲಾ ಮಂತ್ರಿಗಳಿಗೆ ಸ್ಥಳದಲ್ಲಿರಲು ಹೇಳಿದ್ದು, ಆದರೆ ರಾಜ್ಯದ ಎಲ್ಲೂ ಜಿಲ್ಲಾ ಮಂತ್ರಿಗಳು ಜನರ ಜತೆಗೆ ಕಾಣುತ್ತಿಲ್ಲ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ ಕಿಡಿಕಾರಿದರು.
ಬುಧವಾರ ಬಂಟ್ವಾಳದ ಬಡ್ಡಕಟ್ಟೆ, ಜಕ್ರಿಬೆಟ್ಟು ಕಿಂಡಿ ಅಣೆಕಟ್ಟು, ನಾವೂರು ಮನೆಗಳ ಮುಳುಗಡೆ, ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿದ ಅವರು, ಮಳೆಯಿಂದಾಗಿ ರಾಜ್ಯದಲ್ಲಿ ದೊಡ್ಡ ರೀತಿ ಹಾನಿ ಉಂಟಾಗಿದೆ. ಸಾವಿನ ಜತೆಗೆ ಹಲವು ರೀತಿಯಲ್ಲಿ ರಾಜ್ಯದಲ್ಲಿ ಹಾನಿ ಉಂಟಾಗಿದೆ. ನಾನು ಕಂದಾಯ ಮಂತ್ರಿ ಆಗಿದ್ದ ವೇಳೆ ರಾಜ್ಯ ಹಾಗೂ ಕೇಂದ್ರ ಸರಕಾರದಿಂದ ಸಮಾನ ಅನುದಾನ ಕೊಡ್ತಾ ಇದ್ದೆ ಎಂದರು.
ಹಿಂದೆ ನಮ್ಮ ಕಾಂಗ್ರೆಸ್ ಮಿತ್ರರು ಗಂಜಿ ಕೇಂದ್ರ ತೆರೀತಾ ಇದ್ದರು, ಅದನ್ನು ನಾನು ಬದಲಾಯಿಸಿ ಕಾಳಜಿ ಕೇಂದ್ರ ಮಾಡಿ ಮನೆ ಊಟ ಕೊಟ್ಟಿದ್ದೆ. ಆದರೆ, ಈಗ ಅಂತಹ ವಾತಾವರಣ ಎಲ್ಲಿ ಕೂಡ ಕಾಣಿಸುತ್ತಿಲ್ಲ. ಜಿಲ್ಲೆಗೆ ಉಸ್ತುವಾರಿ ಮಂತ್ರಿ ಭೇಟಿ ನೀಡದೇ 2 ವಾರಗಳಾಗಿವೆ. ದಕ್ಷಿಣ ಕನ್ನಡ ಜಿಲ್ಲೆಯನ್ನು ಮರೆತಿರುವ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಜಿಲ್ಲೆಯ ಜನರಿಗೆ ಅನ್ಯಾಯ ಮಾಡುತ್ತಿದ್ದಾರೆ. ರಮಾನಾಥ್ ರೈ ಅವರು ಅವತ್ತು ಪರಿಹಾರದ ವಿಚಾರದಲ್ಲಿ ಜಗಳ ಮಾಡಿದ್ದರು, ಸರ್ಕಾರ ಐದು ಲಕ್ಷ ಪರಿಹಾರ ನೀಡಿದರೂ ನಮ್ಮ ಸರಕಾರದ ಬಗ್ಗೆ ಅಪಸ್ವರ ಎತ್ತಿದ್ದರು ಎಂದು ಆಕ್ರೋಶ ಹೊರಹಾಕಿದರು.
ಈಗ ಮೋದಿ ಅವರ ಸರಕಾರ 1.25 ಲಕ್ಷ ಕೊಡ್ತಾ ಇದೆ ಆದರೆ ರಾಜ್ಯ ಸರ್ಕಾರ ಏನ್ ಕೊಡ್ತಾ ಇದೆ? ನಿಮಗೆ ನಾಚೀಕೆ ಇಲ್ವಾ? ಹಾಗಿದ್ರೆ ಪ್ರವಾಹದ ವಿಚಾರದಲ್ಲಿ ರಾಜ್ಯ ಸರ್ಕಾರದ ಪಾತ್ರ ಏನು? ಈ ಸರ್ಕಾರ ಬದುಕಿದೆ ಅಂತ ಜನರಿಗೆ ಗೊತ್ತೇ ಆಗ್ತಿಲ್ಲ, ಇದನ್ನು ಜನ ಗಮನಿಸುತ್ತಾ ಇದ್ದಾರೆ. ರಾಜ್ಯ ಸರ್ಕಾರ ಸಮರೋಪಾದಿಯಲ್ಲಿ ಪರಿಹಾರ ವಿತರಿಸಬೇಕು ಮುಖ್ಯಮಂತ್ರಿ ನವದೆಹಲಿ ಪ್ರವಾಸ ಬಿಟ್ಟು ರಾಜ್ಯಕ್ಕೆ ಬರಲಿ. ನಿಮ್ಮ ಅಕ್ರಮಗಳಿಗೆ ಸ್ಪಷ್ಡನೆ ಕೊಡಲು ನೀವು ದೆಹಲಿಗೆ ಹೋಗಿ ಹೈಕಮಾಂಡ್ ಮುಖಂಡರ ಓಲೈಕೆಯಲ್ಲಿ ಕಾಲ ಕಳೆಯುತ್ತಿದ್ದಿರಿ, ಮೊದಲು ರಾಜ್ಯದ ಜನರ ಸಮಸ್ಯೆ ಆಲಿಸಿ, ರಾಜ್ಯಾದ್ಯಂತ ಅಪಾರ ಹಾನಿ ಆಗಿದೆ, ಬೆಳೆ ಹಾನಿ ಆಗಿದೆ ರಾಜ್ಯ ಸರ್ಕಾರ ಸಮಾರೋಪದಿಯಲ್ಲಿ ಕೆಲಸ ಮಾಡಬೇಕಿದೆ. ಮೊದಲು ನಿದ್ದೆಯಿಂದ ಎದ್ದು ಕೆಲಸ ಮಾಡಬೇಕು ಎಂದು ವಾಗ್ದಾಳಿ ನಡೆಸಿದರು.
ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು, ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್, ಸತೀಶ್ ಕುಂಪಲ್ ಸೇರಿದಂತೆ ಹಲವು ಬಿಜೆಪಿ ಮುಖಂಡರು ಇದ್ದರು.