ಸಕಲೇಶಪುರ: ಶಿರಾಡಿ ಘಾಟ್ ಹೆದ್ದಾರಿ ದೊಡ್ಡತಪ್ಲು ಭಾಗದಲ್ಲಿ ಭಾರಿ ಪ್ರಮಾಣದಲ್ಲಿ ಭೂ ಕುಸಿತ ಉಂಟಾಗಿದ್ದು, ಎರಡು ಕಾರು, ಟ್ಯಾಂಕರ್, ಟಿಪ್ಪರ್ ಮಣ್ಣಿನ ಅಡಿಯಲ್ಲಿ ಸಿಕ್ಕು ಹಾಕಿಕೊಂಡಿವೆ. ಗುಡ್ಡ ಕುಸಿತದಿಂದಾಗಿ ವಾಹನಗಳ ಸಂಚಾರಕ್ಕೆ ತಾತ್ಕಾಲಿಕವಾಗಿ ನಿಷೇಧ ಹಾಕಲಾಗಿದ್ದು, ಮಂಗಳೂರು- ಬೆಂಗಳೂರು ಸಂಚಾರಕ್ಕೆ ಸಮಸ್ಯೆ ಉಂಟಾಗಿದೆ.
ಗುಡ್ಡ ಕುಸಿದಿಂದಾಗಿ ಮಣ್ಣಿನಡಿ ಹಲವು ವಾಹನಗಳು ಸಿಕ್ಕು ಹಾಕಿಕೊಂಡಿದ್ದು, ರಸ್ತೆಯಲ್ಲಿ ನಿಲ್ಲಿಸಿದ್ದ ಟಿಪ್ಪರ್ ಮತ್ತು ಟ್ಯಾಂಕರ್ ಮಣ್ಣು ಕುಸಿತದಿಂದ ಪಲ್ಟಿಯಾಗಿ ಬಿದ್ದುಕೊಂಡಿವೆ. ಎರಡು ಕಾರು, ಟ್ಯಾಂಕರ್, ಟಿಪ್ಪರ್ ಸೇರಿ ಕೆಲವು ವಾಹನ ವಾಹನಗಳಿಗೆ ಹಾನಿ ಆಗಿದೆ. ವಾಹನ ಸವಾರರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ವಾಹನಗಳನ್ನು ಬಿಟ್ಟು ಪ್ರಯಾಣಿಕರು ಜೀವ ಉಳಿಸಿಕೊಂಡಿದ್ದಾರೆ. ರಾಷ್ಟ್ರೀಯ ಹೆದ್ದಾರಿ 75 ರ ಶಿರಾಡಿ ಘಾಟ್ ಬಳಿಯಲ್ಲಿ 15 ದಿನಗಳಿಂದ ಭೂಮಿ ಕುಸಿಯುತ್ತಿದ್ದು ಮಣ್ಣಿನ ರಾಶಿ ರಸ್ತೆ ಮೇಲೆ ಬೀಳುತ್ತಿದೆ. ಅವಘಡದಲ್ಲಿ ಸಿಕ್ಕು ಹಾಕಿಕೊಂಡಿದ್ದ ಪ್ರಯಾಣಿಕರನ್ನು ರಕ್ಷಣೆ ಮಾಡಲಾಗಿದೆ. ಮಣ್ಣನ್ನು ತೆರವು ಮಾಡುವ ಕೆಲಸ ನಡೆಯುತ್ತಿದೆ.
ಭೂ ಕುಸಿತವು ಮತ್ತಷ್ಟು ಮಣ್ಣು ಕುಸಿದರೆ ದೊಡ್ಡ ಪ್ರಮಾಣದ ಹಾನಿ ಉಂಟಾಗುವ ಸಾಧ್ಯತೆ ಇದೆ. ಮಣ್ಣು ತೆರವು ಕಾರ್ಯಾಚರಣೆ ನಡೆಯುತ್ತಿದೆ. ಸಕಲೇಶಪುರ ಆಸುಪಾಸಿನಲ್ಲಿ ವಿಪರೀತ ಎನ್ನುವಷ್ಟು ಅಲ್ಲಲ್ಲಿ ಭೂ ಕುಸಿತ, ರಸ್ತೆ ಕುಸಿತ ಉಂಟಾಗಿದೆ.