ಮಂಗಳೂರು: ಪಾಲಿಕೆ ವ್ಯಾಪ್ತಿಯ ಜಂಕ್ಷನ್, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಒಳಪಡುವ ಕೆಪಿಟಿ ಹಾಗೂ ನಂತೂರು ಜಂಕ್ಷನ್ ರಸ್ತೆಗಳು ಸಂಪೂರ್ಣವಾಗಿ ಹದಗೆಟ್ಟಿದ್ದು, ಸುಗಮ ಸಂಚಾರಕ್ಕೆ ಅಡ್ಡಿಯಾಗುತ್ತಿರುವುದನ್ನು ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಅವರು ಮಂಗಳವಾರ ಭೇಟಿ ನೀಡಿ ಪರಿಶೀಲನೆ ಮಾಡಿದರು.
ವಾಹನ ದಟ್ಟಣೆಯಿಂದ ಕೂಡಿರುವ ಈ ಜಂಕ್ಷನ್ ಗಳಲ್ಲಿ ಬೃಹತ್ ಗಾತ್ರದ ಹೊಂಡ ಗುಂಡಿಗಳಿಂದಾಗಿ ವಾಹನಗಳು ಸಂಚಾರಕ್ಕೆ ತೊಂದರೆ ಪಡುವ, ಬೈಕ್ ಸವಾರರು ಅತ್ಯಂತ ಅಪಾಯಕಾರಿಯಾಗಿ ಈ ರಸ್ತೆಗಳಲ್ಲಿ ಸಂಚರಿಸಬೇಕಾದ ಪರಿಸ್ಥಿತಿ ಇರುವುದನ್ನು ಗಮನಿಸಿ ತುರ್ತು ದುರಸ್ತಿ ಕಾಮಗಾರಿ ಕೈಗೊಂಡು ರಸ್ತೆಯನ್ನು ವಾಹನ ಸಂಚಾರಕ್ಕೆ ಯೋಗ್ಯವನ್ನಾಗಿಸಲು ಸೂಚಿಸಿದರು.
ನಂತೂರು ಜಂಕ್ಷನ್ ರಸ್ತೆಯಲ್ಲಿ ಪೇವರ್ ಫಿನಿಶ್ ಜತೆಗೆ ಗುಂಡಿಗಳನ್ನು ಮುಚ್ಚುವಂತೆ ನಿರ್ದೇಶನ ನೀಡಿದ ಜಿಲ್ಲಾಧಿಕಾರಿ, ಕೆಪಿಟಿ ಜಂಕ್ಷನ್ ಸುತ್ತಲಿನ ರಸ್ತೆಯನ್ನು ಎರಡು ದಿನಗಳಿಗೊಮ್ಮೆ ತಾತ್ಕಾಲಿಕ ವ್ಯವಸ್ಥೆ ಮೂಲಕ ಸಂಚಾರಕ್ಕೆ ಯೋಗ್ಯವನ್ನಾಗಿಸುವಂತೆ ಸಲಹೆ ನೀಡಿದರು.
ಸುರತ್ಕಲ್ ರಸ್ತೆ ಹಾಗೂ ನಗರದ ಕೆಲ ಹೆದ್ದಾರಿಗಳಲ್ಲಿ ಸರ್ವಿಸ್ ರಸ್ತೆಗಳಲ್ಲಿ ಮಳೆ ನೀರು ಹರಿಹೋಗದೆ ಸಮಸ್ಯೆ ಉಂಟಾಗುತ್ತಿರುವಲ್ಲಿಯೂ ಕ್ರಮ ವಹಿಸುವಂತೆ ಸೂಚನೆ ನೀಡಿದರು. ಪಂಪ್ ವೆಲ್ ಹಾಗೂ ಇತರ ರಸ್ತೆಗಳಲ್ಲಿನ ಗುಂಡಿಗಳನ್ನು ಮುಚ್ಚಿ ಸಂಚಾರ ಯೋಗ್ಯವಾಗಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು.
ಕೆಪಿಟಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮೂಲಕ ನಿರ್ಮಿಸಲುದ್ದೇಶಿ ಸಲಾಗಿರುವ ಮೇಲ್ಸೇತುವೆ ಕಾಮಗಾರಿಗೆ ಡಿಪಿಆರ್ ಸಿದ್ಧವಾಗಿದ್ದು, ಕೆಲ ದಿನಗಳಲ್ಲೇ ಕಾಮಗಾರಿ ಆರಂಭಿಸಲಿದ್ದಾರೆ. ಹಾಗಾಗಿ ಸದ್ಯ ರಸ್ತೆಯ ಗುಂಡಿ ಹೊಂಡಗಳನ್ನು ತಾತ್ಕಾಲಿಕ ನೆಲೆಯಲ್ಲಿ ದುರಸ್ತಿ ಕಾರ್ಯ ನಡೆಸಲು ತೀರ್ಮಾನಿಸಲಾಗಿದೆ ಎಂದು ಪಾಲಿಕೆ ಆಯುಕ್ತ ಆನಂದ್ ಹೇಳಿದರು.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಯೋಜನಾ ನಿರ್ದೇಶಕ ಅಬ್ದುಲ್ಲ ಜಾವೇದ್ ಆಝ್ಮಿ, ಪಾಲಿಕೆ ಉಪ ಆಯುಕ್ತ ಗಿರೀಶ್ ನಂದನ್, ಪಾಲಿಕೆ ಕಾರ್ಯನಿರ್ವಾಹಕ ಎಂಜಿನಿಯರ್ ನರೇಂದ್ರ ಶೆಣೈ, ಮಂಗಳೂರು ಸಂಚಾರ ವಿಭಾಗದ ಎಸಿಪಿ ನಝ್ಮಾ ಫಾರೂಕಿ ಇದ್ದರು.