ಮಂಗಳೂರು : ಮಳೆಗಾಲದಲ್ಲಿ ವಿದ್ಯುತ್ ಅವಡದಿಂದ ಉಂಟಾಗುವ ಪ್ರಾಣ ಹಾನಿ, ನೋವಿಗೆ ಸಂಬಂಧಿಸದ ಮೆಸ್ಕಾಂ ಅಧಿಕಾರಿಗಳೇ ಹೊಣೆ. ಆಯಾ ವ್ಯಾಪ್ತಿಯ ಕಾರ್ಯನಿರ್ವಾಹಕ ಎಂಜಿನಿಯರ್ಗಳನ್ನು ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ವಿಧಾನಸಭೆಯ ಸ್ಪೀಕರ್ ಯು. ಟಿ. ಖಾದರ್ ಹೇಳಿದರು.
ವಿದ್ಯುತ್ ಆಘಾತದಿಂದಾಗಿ ಜಿಲ್ಲೆಯಲ್ಲಿ ಸಂಭವಿಸಿರುವ ಮೂರು ಸಾವುಗಳ ಹಿನ್ನೆಲೆಯಲ್ಲಿ ಬಿಜೈ ಮೆಸ್ಕಾಂ ಆಡಳಿತ ಕಚೇರಿಯಲ್ಲಿ ಅಧಿಕಾರಿಗಳ ಜತೆಗೆ ನಡೆಸಿದ ಸಭೆಯಲ್ಲಿ ಅವರು ಮಾತನಾಡಿದರು.
ಪ್ರಾಕೃತಿಕ ವಿಕೋಪಗಳು ಸಹಜ. ಆದರೆ, ಮುಂಜಾಗ್ರತಾ ಕ್ರಮಗಳ ಬಗ್ಗೆ ಅಧಿಕಾರಿಗಳು ಎಚ್ಚರ ವಹಿಸಬೇಕು. ಪ್ರಾಣ ಹಾನಿಯಿಂದ ಸಂಭವಿಸುವಂತಹ ಅಪಾಯಕಾರಿ ಸ್ಥಳಗಳನ್ನು ಗುರುತಿಸಿ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು. ಈ ಬಗ್ಗೆ ಯಾವುದೇ ರೀತಿ ನಿರ್ಲಕ್ಷ್ಯ ಇರಬಾರದು. ಅಪಾಯ ಸಂಭವಿಸಿದ ಬಳಿಕ ನಮ್ಮ ಮೇಲೆ ಪ್ರಕರಣ ದಾಖಲಿಸಬೇಡಿ ಎಂದರೆ ಆಗುವುದಿಲ್ಲ ಎಂದು ಆಕ್ರೋಶ ಹೊರಹಾಕಿದರು.
ವಿದ್ಯುತ್ ಕಂಬಗಳ ಮೇಲೆ ಬೀಳಬಹುದಾದ ಮರಗಳ ಗೆಲ್ಲುಗಳನ್ನು ತೆರುವುಗೊಳಿಸುವುದು, ಕಂಬಗಳು ಶಿಥಿಲಗೊಂಡು ಬೀಳುವ ಸ್ಥಿತಿಯಲ್ಲಿದ್ದರೆ ಅವುಗಳನ್ನು ನಿರಂತರ ಪರಿಶೀಲನೆ ಮೂಲಕ ಮೆಸ್ಕಾಂ, ಪಿಡಬ್ಲ್ಯೂಡಿ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು ಪರಸ್ಪರ ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕು ಎಂದರು.
ವಿದ್ಯುತ್ ಕಂಬ ಅಥವಾ ತಂತಿಗಳ ಮೇಳೆ ಮರ ಬೀಳುವ ಸ್ಥಿತಿಯಲ್ಲಿದ್ದರೆ, ಅವುಗಳನ್ನು ತೆರವುಗೊಳಿಸಲು ವಿಳಂಬ ಮಾಡಬಾರದು. ಈಗ ಎಲ್ಲ ಅಗತ್ಯ ಸಾಧನೆ, ಸಲಕರಣೆಗಳಿದ್ದರೂ, ಈ ರೀತಿ ಮುಂಚಿತವಾಗಿ ತೆರವುಗೊಳಿಸುವ ಕಾರ್ಯ ಯಾವ ಕಾರಣಕ್ಕೆ ಆಗುತ್ತಿಲ್ಲ. ಅಪಾಯಕಾರಿ ಸ್ಥಳಗಳನ್ನು ಗುರುತಿಸಿ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ವಿದ್ಯುತ್ ತಂತಿಗಳು ತುಂಡಾಗಿ ಬಿದ್ದಾಗ ಹಾಗೂ ಮಳೆಗಾಲದಲ್ಲಿ ವಿದ್ಯುತ್ ಪರಿವರ್ತಕ ಬಳಿ ಜನರು ಸುಳಿದಾಡದಂತೆ ಜಾಗ್ರತೆ ಸಂದೇಶ ನೀಡುವ ಕೆಲಸ ಮೆಸ್ಕಾಂನಿಂದ ಆಗಬೇಕು ಎಂದರು.
ಮೆಸ್ಕಾಂನಲ್ಲಿ ಅತಿಯಾಗಿ ಕಾಡುವ ಸಮಸ್ಯೆಗಳ ಮಾಹಿತಿ ನೀಡುವಂತೆ ಯು. ಟಿ.ಖಾದರ್ ಅವರು ಸಭೆಯಲ್ಲಿ ತಿಳಿಸಿದರು.
ಜಿಲ್ಲೆಯಲ್ಲಿ ಶೇ 50 ರಷ್ಟು ಲೈನ್ಮ್ಯಾನ್ಗಳ ಕೊರತೆ ಇದೆ. ಜಿಲ್ಲೆಗೆ ನಿಯೋಜನೆ ಆಗುವ ಹೊರ ಜಿಲ್ಲೆಗಳ ಲೈನ್ಮ್ಯಾನ್ಗಳು ಕೆಲ ಸಮಯದಲ್ಲೇ ವರ್ಗಾವಣೆ ಪಡೆದು ತೆರಳುತ್ತಾರೆ. ನೇಮಕಾತಿ ಪ್ರಕ್ರಿಯೆ ಆಗಬೇಕಾಗಿದೆ ಎಂದು ಮೆಸ್ಕಾಂ ಹಿರಿಯ ಅಧಿಕಾರಿ ಮಾಹಿತಿ ನೀಡಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್, ಅರಣ್ಯ ಇಲಾಖೆಯ ಮಂಗಳೂರು ವಿಭಾಗದ ಉಪ ಸಂಕ್ಷಣಾಧಿಕಾರಿ ಆ್ಯಂಟನಿ ಮರಿಯಪ್ಪ, ಮೆಸ್ಕಾಂ ವ್ಯವಸ್ಥಾಕ ನಿರ್ದೇಶಕಿ ಪದ್ಮಾವತಿ ಇದ್ದರು.