ಮಂಗಳೂರು: ಹೋಮಿಯೋಪಥಿ ಪದ್ಧತಿ ಉಳಿಸಿ ಬೆಳೆಸುವ ಹೊಣೆ ವೈದ್ಯ ಸಮೂಹದ ಮೇಲಿದೆ. ಹೋಮಿಯೋಪತಿ ವೈದ್ಯ ಪದ್ದತಿ ಇಷ್ಟ ಪಡುವ ರೋಗಿಗಳಿಗೆ ಯಾವುದೇ ರೀತಿಯ ಮೋಸ ಆಗದಂತೆ ಹೋಮಿಯೋಪತಿ ವೈದ್ಯರು ನ್ಯಾಯ ನೀಡುವ ಕೆಲಸ ಮಾಡಬೇಕು ಎಂದು ವಿಧಾನಸಭೆಯ ಸ್ಪೀಕರ್ ಯು. ಟಿ. ಖಾದರ್ ಹೇಳಿದರು.
ದಕ್ಷಿಣ ಕನ್ನಡ ಜಿಲ್ಲಾ ಭಾರತೀಯ ಹೋಮಿಯೊಪಥಿಕ್ ಮೆಡಿಕಲ್ ಸಂಘವು ಇಲ್ಲಿ ಭಾನುವಾರ ಆಯೋಜಿಸಿದ್ದ ರಾಷ್ಟ್ರೀಯ ಸಮಾವೇಶ ಮತ್ತು ತಾಂತ್ರಿಕ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಹೋಮಿಯೊಪಥಿ ಮತ್ತು ಆಯುರ್ವೇದ ಪದ್ಧತಿ ರೋಗಿಗಳ ಕೊನೆ ಆಯ್ಕೆ ಆಗಿದೆ. ಇಂತಹ ಮನಃಸ್ಥಿತಿಯನ್ನು ದೂರ ಮಾಡಲು ತಾವು ಚಿಕಿತ್ಸೆ ನೀಡುವ ಪದ್ಧತಿ ಬಗ್ಗೆ ವಿಶ್ವಾಸ ಮೂಡಿಸುವ ಕಾರ್ಯ ವೈದ್ಯರಿಂದ ಆಗಬೇಕು ಎಂದರು.
ಎಲ್ಲ ವೈದ್ಯ ಪದ್ಧತಿಗೂ ತನ್ನದೇ ಆದ ವಿಶಿಷ್ಟ ಮಹತ್ವ ಇದೆ. ಹೋಮಿಯೊಪಥಿಗೆ ರೋಗ ಗುಣಪಡಿಸುವ ಶಕ್ತಿ ಇದೆ. ಇದೊಂದು ಹಳೆಯ ವೈದ್ಯ ಪದ್ದತಿ ಆಗಿದ್ದು, ರೋಗಿಗಳಲ್ಲಿ ವಿಶ್ವಾಸ ಮೂಡಿಸುವ ಹಾಗೂ ಜನರ ಬಳಿಗೆ ಈ ಚಿಕಿತ್ಸಾ ಪದ್ದತಿಯನ್ನು ತೆಗೆದುಕೊಂಡು ಹೋಗುವ ಹೊಣೆಗಾರಿಕೆ ಇದೆ ಎಂದರು.
ಹೋಮಿಯೊಪಥಿಗೂ ಮಹತ್ವ ಸಿಗುವ ನಿಟ್ಟಿನಲ್ಲಿ ಪ್ರಯತ್ನ ಮಾಡಬೇಕಾಗಿದೆ. ಜಿಲ್ಲಾ ಮಟ್ಟದಲ್ಲಿ ವೈದ್ಯರ ಕೊರತೆ ಇರುವುದು ಗಮನಕ್ಕೆ ಬಂದಿದೆ. ಇದನ್ನು ಸರಿಪಡಿಸಲು ಸರಕಾರದ ಮಟ್ಟದಲ್ಲಿ ಪ್ರಯತ್ನಿಸಲಾಗುವುದು ಎಂದು ಖಾದರ್ ಹೇಳಿದರು.
ಐಎಚ್ಎಂಎ ರಾಷ್ಟ್ರೀಯ ಅಧ್ಯಕ್ಷ ಡಾ. ಉವೈಸೆ ಕೆ.ಎಂ, ಕರ್ನಾಟಕ ಆಯುಷ್ ಇಲಾಖೆ ಹೋಮಿಯೋಪಥಿ ಉಪನಿರ್ದೇಶಕ ಡಾ.ಅಶ್ವತ್ಥನಾರಾಯಣ, ಜಿಲ್ಲಾ ಆಯುಷ್ ಅಧಿಕಾರಿ ಡಾ.ಮೊಹಮ್ಮದ್ ಇಕ್ಬಾಲ್, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ವಿವೇಕ್ ಆಳ್ವ, ಫಾದರ್ ಮುಲ್ಲರ್ ಸಂಸ್ಥೆಗಳ ಫಾದರ್ ಫಾಸ್ಟಿನ್ ಲೋಬೊ, ಸಂಚಾಲಕ ಡಾ.ಅವಿನಾಶ್ ವಿ.ಎಸ್, ಸಂಘದ ಪ್ರಧಾನ ಕಾರ್ಯದರ್ಶಿ ಧೀರಜ್ ಪ್ರೇಮ್ ಕುಮಾರ್ ಇದ್ದರು.
ಚೆನ್ನೈನ ಡಾ ವೆಂಕಟರಾಮನ್ ಮತ್ತು ಯುರೋಪ್ ಡಾ.ವಿನೀತ್ ಸಿದ್ದಾರ್ಥ್ ಅವರು ವಿಷಯ ಮಂಡಿಸಿದರು. ಸಮಾವೇಶದಲ್ಲಿ ದೇಶದ ವಿವಿಧ ರಾಜ್ಯಗಳಿಂದ 640 ಮಂದಿ ವೈದ್ಯರು ಪಾಲ್ಗೊಂಡಿದ್ದರು. ಸಂಘದ ನೂತನ ವೆಬ್ಸೈಟ್ ಬಿಡುಗಡೆ ಮಾಡಲಾಯಿತು.
ಸಮ್ಮೇಳನದ ಅಧ್ಯಕ್ಷ ಡಾ.ಪ್ರವೀಣ್ ರಾಜ್ ಆಳ್ವ ಸ್ವಾಗತಿಸಿದರು. ಸಮ್ಮೇಳನದ ಸಂಚಾಲಕ ಡಾ.ಪ್ರವೀಣ್ ಕುಮಾರ್ ರೈ ವಂದಿಸಿದರು.