ಮಂಗಳೂರು: ಸುರತ್ಕಲ್ ಬಂಟರ ಸಂಘವನ್ನು ಹಿರಿಯರು ಉತ್ಸಾಹದಿಂದ ಕಟ್ಟಿದ್ದಾರೆ. ಇದನ್ನು ಉಳಿಸಿ ಬೆಳೆಸಲು ಇಂದಿನ ಯುವಜನತೆ ಮುಂದಾಗಬೇಕು. ಸಮಾಜಮುಖಿ ಚಿಂತನೆ ಜತೆ ಸಂಘ ಮುನ್ನಡೆದಲ್ಲಿ ಸಮಾಜದ ಅಭಿವೃದ್ಧಿ ಸಾಧ್ಯ ಎಂದು ಮುಂಬೈ ವಿ.ಕೆ. ಸಮೂಹ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಕರುಣಾಕರ ಎಂ. ಶೆಟ್ಟಿ ಮಧ್ಯಗುತ್ತು ಹೇಳಿದರು.
ಬಂಟರ ಸಂಘದ ವತಿಯಿಂದ ನಡೆದ ಅಭಿನಂದನೆ, ಸಹಾಯಹಸ್ತ ಮತ್ತು ವಿದ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಬಂಟರ ಯಾನೆ ನಾಡವರ ಮಾತೃಸಂಘದ ಅಧ್ಯಕ್ಷ ಮಾಲಾಡಿ ಅಜಿತ್ ಕುಮಾರ್ ರೈ ಅವರು ಮಾತನಾಡಿ, “ಹಣ ಎಲ್ಲರಲ್ಲೂ ಇರುತ್ತದೆ. ಆದರೆ, ಅದನ್ನು ಯೋಗ್ಯರಿಗೆ ದಾನ ಮಾಡಲು ಋಣಾನುಬಂಧ ಬೇಕು. ಸುರತ್ಕಲ್ ಬಂಟರ ಸಂಘದ ವತಿಯಿಂದ ನಡೆಯುವ ಎಲ್ಲ ಕಾರ್ಯಕ್ರಮಗಳು ಯಶಸ್ವಿಯಾಗಿ ನೆರವೇರುತ್ತಿವೆ. ಸುರತ್ಕಲ್ ಬಂಟರ ಸಂಘ ಇನ್ನು ಮುಂದೆಯೂ ಇದೇ ರೀತಿ ಸಮಾಜಮುಖಿ ಕಾರ್ಯಕ್ರಮ ಹಮ್ಮಿಕೊಳ್ಳಲಿ” ಎಂದರು.
ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಜೊತೆ ಕಾರ್ಯದರ್ಶಿ ಚಂದ್ರಹಾಸ್ ಶೆಟ್ಟಿ ರಂಗೋಲಿ ಮಾತನಾಡಿ, “ಸುರತ್ಕಲ್ ಬಂಟರ ಸಂಘ ಸದಾ ಕ್ರಿಯಾಶೀಲವಾಗಿದ್ದು ಸುತ್ತಮುತ್ತಲಿನ ಸಂಘಗಳ ಮಧ್ಯೆ ವಿಭಿನ್ನವಾಗಿ ಗುರುತಿಸಿಕೊಂಡಿದೆ. ಇಂಥ ಸಂಘ ಇತರ ಸಂಘಟನೆಗಳಿಗೆ ಮಾದರಿ” ಎಂದರು.
ಸುರತ್ಕಲ್ ಬಂಟರ ಸಂಘದ ನೂತನ ಕಟ್ಟಡ ಸಮಿತಿ ಅಧ್ಯಕ್ಷ ಕರುಣಾಕರ ಶೆಟ್ಟಿ ಮಧ್ಯಗುತ್ತು ಅವರನ್ನು ವೇದಿಕೆಯಲ್ಲಿ ಸನ್ಮಾನಿಸಲಾಯಿತು.
ಇದೇ ಸಂದರ್ಭದಲ್ಲಿ ಬಂಟರ ಸಂಘ ಸುರತ್ಕಲ್ ಆರ್ಥಿಕ ಸಹಾಯದೊಂದಿಗೆ ನೂತನವಾಗಿ ನಿರ್ಮಾಣಗೊಂಡ ಮನೆಯ ಕೀಲಿ ಕೈಅನ್ನು ಸೂರಜ್ ಶೆಟ್ಟಿ ಕಾಟಿಪಳ್ಳ ಅವರಿಗೆ ಹಸ್ತಾಂತರ ಮಾಡಲಾಯಿತು. ಭಿನ್ನ ಸಾಮರ್ಥ್ಯ ಹಾಗೂ ವಿಕಲಚೇತನರಿಗೆ ಸಹಾಯಹಸ್ತ ವಿತರಿಸಲಾಯಿತು. ಡಾ.ಪಿ.ವಿ. ಶೆಟ್ಟಿ ಮುಂಬೈ ಅವರಿಂದ ಪ್ರತೀ ವರ್ಷ ನೀಡಲ್ಪಡುವ 1 ಲಕ್ಷ ರೂಪಾಯಿ ನಿರಂತರ ವಿದ್ಯಾರ್ಥಿ ವೇತನ ವಿತರಣೆ ಮಾಡಲಾಯಿತು.
ಸುರತ್ಕಲ್ ಬಂಟರ ಸಂಘದ ಅಧ್ಯಕ್ಷ ಲೋಕಯ್ಯ ಶೆಟ್ಟಿ ಮುಂಚೂರು ಅಧ್ಯಕ್ಷತೆ ವಹಿಸಿದ್ದರು. ಬೆಂಗಳೂರು ಯುವ ಬಂಟರ ಸಂಘದ ಅಧ್ಯಕ್ಷ ರವೀಂದ್ರನಾಥ ಮಾರ್ಲ, ಮಾಜಿ ಅಧ್ಯಕ್ಷ ಎಂ ದೇವಾನಂದ ಶೆಟ್ಟಿ, ಉಲ್ಲಾಸ್ ಶೆಟ್ಟಿ ಪೆರ್ಮುದೆ, ನಿಕಟಪೂರ್ವ ಅಧ್ಯಕ್ಷ ಸುಧಾಕರ್ ಎಸ್. ಪೂಂಜಾ, ಮಹಿಳಾ ವೇದಿಕೆ ಅಧ್ಯಕ್ಷೆ ಭವ್ಯಾ ಶೆಟ್ಟಿ, ಉಪಾಧ್ಯಕ್ಷ ಪುಷ್ಪರಾಜ್ ಶೆಟ್ಟಿ ಕುಡುಂಬೂರು, ಪ್ರಧಾನ ಕಾರ್ಯದರ್ಶಿ ಲೀಲಾಧರ ಶೆಟ್ಟಿ ಕಟ್ಲ, ಕೋಶಾಧಿಕಾರಿ ಅವಿನಾಶ್ ಶೆಟ್ಟಿ, ಸಂಘಟನಾ ಕಾರ್ಯದರ್ಶಿ ಪುಷ್ಪರಾಜ ಶೆಟ್ಟಿ ಮಧ್ಯ, ಸಾಂಸ್ಕ್ರತಿಕ ಕಾರ್ಯದರ್ಶಿ ಜಯರಾಮ ಶೆಟ್ಟಿ, ಜೊತೆ ಕಾರ್ಯದರ್ಶಿ ಸುಜೀರ್ ಶೆಟ್ಟಿ ಸೂರಿಂಜೆ, ಕ್ರೀಡಾ ಕಾರ್ಯದರ್ಶಿ ಶಿಶೀರ್ ಶೆಟ್ಟಿ ಪೆರ್ಮುದೆ ಇದ್ದರು.
ಸಮಾರಂಭದಲ್ಲಿ ವಿದ್ಯಾನಿಧಿಗೆ ದೇಣಿಗೆ ನೀಡಿದ ಶ್ರೀಮತಿ ಶೆಟ್ಟಿ, ಶ್ರೀಕಾಂತ್ ಶೆಟ್ಟಿ, ಶ್ರೀಕೃಷ್ಣ ಶೆಟ್ಟಿ, ರಾಜೇಶ್ವರಿ ದೇವೇಂದ್ರ ಶೆಟ್ಟಿ ದಂಪತಿ, ಸುಜಾತಾ ಲೀಲಾಧರ ಶೆಟ್ಟಿ ದಂಪತಿ ಗೌರವಿಸಲಾಯಿತು.
ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದವರಿಗೆ, ಸನ್ಮಾನ, ನಿರಂತನ ವಿದ್ಯಾರ್ಥಿ ವೇತನ ಮತ್ತು ವಿದ್ಯಾರ್ಥಿ ವೇತನೆ ವಿತರಿಸಲಾಯಿತು. ಸಹಾಯ ಹಸ್ತ, ನೂತನ ಮನೆಯ ಕೀಯನ್ನು ಸೂರಜ್ ಶೆಟ್ಟಿಗೆ ಮಾಲಾಡಿ ಅಜಿತ್ ಕುಮಾರ್ ರೈ ಹಸ್ತಾಂತರಿಸಿದರು.
ಸಂಘದ ಪ್ರಧಾನ ಕಾರ್ಯದರ್ಶಿ ಲೀಲಾಧರ್ ಶೆಟ್ಟಿ ಅತಿಥಿಗಳನ್ನು ಸ್ವಾಗತಿಸಿದರು. ಉಪಾಧ್ಯಕ್ಷ ಪುಷ್ಪರಾಜ್ ಶೆಟ್ಟಿ ಕುಡುಂಬೂರು ಪ್ರಾಸ್ತಾವಿಕ ಮಾತನಾಡಿದರು. ರಾಜೇಶ್ವರಿ ಡಿ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.
ಸಾಂಸ್ಕೃತಿಕ ಸ್ಪರ್ಧೆಯ ಫಲಿತಾಂಶ: ನೃತ್ಯ ಸ್ಪರ್ಧೆಯಲ್ಲಿ ಪ್ರಥಮ ಸುರತ್ಕಲ್ ಗ್ರಾಮ, ದ್ವಿತೀಯ ಕಾಟಿಪಳ್ಳ -ಕೃಷ್ಣಾಪುರ ಗ್ರಾಮ, ತೃತೀಯ ಬಹುಮಾನವನ್ನು ಬಾಳ ಗ್ರಾಮ ಮತ್ತು ಇಡ್ಯಾ ಗ್ರಾಮ ಹಂಚಿಕೊಂಡಿತು. ಪ್ರಹಸನ ಸ್ಪರ್ಧೆಯಲ್ಲಿ ಪ್ರಥಮ ಇಡ್ಯ ಗ್ರಾಮ, ದ್ವಿತೀಯ ಸುರತ್ಕಲ್ ಗ್ರಾಮ, ತೃತೀಯ ಬಹುಮಾನವನ್ನು ಚೇಳಾರು ಗ್ರಾಮ ಪಡೆದುಕೊಂಡಿದೆ. ತೀರ್ಪುಗಾರರಾಗಿ ನರೇಶ್ ಕುಮಾರ್ ಸಸಿಹಿತ್ಲು, ಸೂರಜ್ ಶೆಟ್ಟಿ ಬಜಪೆ, ಶ್ರೀ ಶೈಲಾ ಮೂಲ್ಕಿ ಸಹಕರಿಸಿದರು.