ಚಿಕ್ಕಮಗಳೂರು: ಮಂಗಗಳಿಗೆ ಬಾಳೆ ಹಣ್ಣಿನಲ್ಲಿ ಮತ್ತು ಬರುವ ಔಷಧವನ್ನು ಇಟ್ಟು 30 ಮಂಗಗಳನ್ನು ಕ್ರೂರವಾಗಿ ಹತ್ಯೆ ಮಾಡಿ ರಸ್ತೆ ಪಕ್ಕದಲ್ಲಿಯೇ ಬೀಸಾಡಿರುವ ಕೃತ್ಯವು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ ತಾಲೂಕು ದ್ಯಾವಣ ಗ್ರಾಮದ ಬಳಿ ನಡೆದಿದೆ. ಕೃತ್ಯದ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಬಾಳೆ ಹಣ್ಣಿನಲ್ಲಿ ಪ್ರಜ್ಞೆ ತಪ್ಪುವ ಔಷಧ ಇಟ್ಟು ಮಂಗಗಳ ಪ್ರಜ್ಞೆ ತಪ್ಪಿಸಿರುವ ಕಿಡಿಗೇಡಿಗಳು ಬಳಿಕ ಮಂಗಗಳ ತಲೆಗೆ ಹಲ್ಲೆ ಮಾಡಿ ಹತ್ಯೆ ಮಾಡಿದ್ದಾರೆ. 30 ಮಂಗಗಳನ್ನು ಹತ್ಯೆ ಮಾಡಿರುವ ದುಷ್ಕರ್ಮಿಗಳು ಮಂಗಗಳ ಕಳೇಬರಗಳನ್ನು ರಸ್ತೆ ಬದಿ ಎಸೆದು ಹೋಗಿದ್ದಾರೆ. ಮಂಗಗಳು ಸಾವನಪ್ಪಿರುವುದನ್ನು ಕಂಡ ಗ್ರಾಮಸ್ಥರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಬಂದು ಪರಿಶೀಲನೆ ನಡೆಸಿದ್ದಾರೆ.
ಮರಿ ಮಂಗಗಳೂ ಸೇರಿದಂತೆ ಒಟ್ಟು 30 ಮಂಗಗಳ ಹತ್ಯೆ ಮಾಡಲಾಗಿದೆ. ಯಾವ ಕಾರಣಕ್ಕೆ ಮಂಗಗಳನ್ನು ಹತ್ಯೆ ಮಾಡಲಾಗಿದೆ ಎಂದು ತಿಳಿದು ಬಂದಿಲ್ಲ. ಮಂಗಗಳ ಹತ್ಯೆ ಮಾಡಿರುವ ಆರೋಪಿಗಳನ್ನು ಬಂಧನ ಮಾಡಿ ಶಿಕ್ಷೆ ನೀಡಬೇಕು ಎಂದು ಪೊಲೀಸರು ಮತ್ತು ಅರಣ್ಯ ಇಲಾಖೆ ಅಧಿಕಾರಿಗಳನ್ನು ಒತ್ತಾಯಿಸಲಾಗಿದೆ.