ಹಾಸನ: ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ 25 ವರ್ಷಗಳ ಬಳಿಕ ದಳ ಕೋಟೆಗೆ ಲಗ್ಗೆ ಹಾಕಿದ್ದಾರೆ. ಜೆಡಿಎಸ್ ಗೌಡರ ಪಾಳೀಯಕ್ಕೆ ಭರ್ಜರಿ ಶಾಕ್ ನೀಡಿರುವ ಶ್ರೇಯಸ್ ಹೋರಾಟ ಕಡೆಗೂ ಫಲ ಕೊಟ್ಟಿದೆ. ಹಾಸನ ಕಳೆದುಕೊಂಡ ದಳಪತಿಗಳ ವಿಲವಿಲ ಪರದಾಡುವ ಸ್ಥಿತಿ ಬಂದಿದೆ. ಪೆನ್ ಡ್ರೈವ್ ಹಗರಣದಿಂದಾಗಿ ಜೆಡಿಎಸ್ ಗೆ ಹೀನಾಯ ಸೋಲು ಉಂಟಾಗಿರುವುದು ಜೀರ್ಣಸಿಕೊಳ್ಳುವುದಕ್ಕೆ ಆಗುತ್ತಿಲ್ಲ.
ಮೈತ್ರಿ ಅಭ್ಯರ್ಥಿ ಜೆಡಿಎಸ್ ಪ್ರಜ್ವಲ್ ರೇವಣ್ಣ ಅವರು 589829, ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ 632090 ಮತ ಗಳಿಸಿದ್ದಾರೆ. 42,261 ಮತಗಳಿಂದ ಶ್ರೇಯಸ್ ಪಟೇಲ್ ಮುನ್ನಡೆ ಗಳಿಸಿದ್ದಾರೆ. 8098 ನೋಟಾ ಮತಗಳು ಬಿದ್ದಿವೆ. ಜೆಡಿಎಸ್ ಶಾಸಕರಾಗಿರುವ ಹಾಸನದ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ಗೆ ಲೀಡ್ ಸಿಕ್ಕಿದೆ.
ಗೃಹಮಂಡಳಿ ಅಧ್ಯಕ್ಷ ಹಾಗೂ ಕಾಂಗ್ರೆಸ್ ಶಾಸಕ ಕೆ.ಎಂ.ಶಿವಲಿಂಗೇಗೌಡ ಕ್ಷೇತ್ರದಲ್ಲಿ ಜೆಡಿಎಸ್ಗೆ ಆರಂಭದಿಂದಲೂ ಮುನ್ನಡೆ ಸಿಕ್ಕಿತ್ತು. ಈ ಮೂಲಕ ಕಾಂಗ್ರೆಸ್ ಅಭ್ಯರ್ಥಿ, ಜೆಡಿಎಸ್ ಭದ್ರಕೋಟೆಯನ್ನು ಬೇಧಿಸಿದ್ದಾರೆ.
ಹಾಸನದಲ್ಲಿ ಗೌಡರ ಕುಟುಂಬದ ಪಾರುಪತ್ಯಕ್ಕೆ ಟಕ್ಕರ್ ಕೊಡಲಾಗಿದೆ. ಕೈ ಅಭ್ಯರ್ಥಿ ಶ್ರೇಯಸ್ ಪಟೇಲ್ ಜಯಭೇರಿ ಸಾಧಿಸಿದ್ದಾರೆ. 1999 ರಲ್ಲಿ ದೇವೇಗೌಡರನ್ನು ಆಗಿನ ಪ್ರಭಾವಿ ನಾಯಕ ಪುಟ್ಟಸ್ವಾಮಿಗೌಡರು ಸೋಲಿಸಿದ್ದರು. ಇದೀಗ ಪುಟ್ಟಸ್ವಾಮಿಗೌಡರ ಮೊಮ್ಮಗ ಶ್ರೇಯಸ್ ಪಟೇಲ್, ದೇವೇಗೌಡರ ಮೊಮ್ಮಗನಿಗೆ ಸೋಲಿನ ರುಚಿ ತೋರಿಸಿಕೊಟ್ಟಿದ್ದಾರೆ.