ಮಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಸಂಸ್ಕೃತಿ ಬಂದಿರುವುದು ದುರದುಷ್ಟಕರ. ಅಪ್ಪ ಮಕ್ಕಳಿಂದ ಪಕ್ಷದಿಂದ ಮುಕ್ತ ಮಾಡುವ ನಿಟ್ಟಿನಲ್ಲಿ ನಾವೆಲ್ಲರೂ ಕೆಲಸ ಮಾಡುತ್ತಿದ್ದೇವೆ ಎಂದು ಮಾಜಿ ಸಚಿವ ಈಶ್ವರಪ್ಪ ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಬಿಎಸ್ವೈ ಹಾಗೂ ಅವರ ಪುತ್ರರ ವಿರುದ್ದ ಮತ್ತೇ ಗುಡುಗಿದರು.
ರಘುಪತಿ ಭಟ್ ಅವರ ಪರವಾಗಿ ಅವರು ಮತ ಯಾಚಿಸಿ, ಬಿಜೆಪಿ ದೇಶದಲ್ಲಿ ಒಂದು ಸಿದ್ದಾಂತ ಇಟ್ಟುಕೊಂಡು ಕೆಲಸ ಮಾಡುತ್ತಿದೆ. ಆದರೆ ಕರ್ನಾಟಕದಲ್ಲಿ ಇದಕ್ಕೆ ತಿಲಾಂಜಲಿ ಇಡಲಾಗುತ್ತಿದೆ. ಕರ್ನಾಟಕದಲ್ಲಿ ಹಿಂದುತ್ವ ಹಿಂದೆ ಸರಿದು ಜಾತೀಯತೆಗೆ ಸರಿಯುತ್ತಿರುವ ಸಂದರ್ಭ, ಪಕ್ಷ, ಹಿಂದುತ್ವ ಎಂದು ಬಯಸುವ ಎಲ್ಲ ಕಾರ್ಯಕರ್ತರು ರಘುಪತಿ ಭಟ್ ಪರ ಕೆಲಸ ಮಾಡಬೇಕು. ಬಿಜೆಪಿ ಶುದ್ಧೀಕರಣ ಆಗಬೇಕು. ರಘುಪತಿ ಭಟ್ ಗೆಲ್ಲುತ್ತಾರೆ. ಹಿಂದುತ್ವಕ್ಕೆ ಆಗುತ್ತಿರುವ ಅವಮಾನ, ರಘುಪತಿ ಭಟ್ ಹಾಗೂ ನನಗೆ ಆಗಿರುವ ಅನ್ಯಾಯದ ಬಗ್ಗೆ ಎಲ್ಲರೂ ಗಮನಿಸುತ್ತಿದ್ದಾರೆ. ಕಾಂಗ್ರೆಸ್ ನಿಂದ ಬಂದ ಅಭ್ಯರ್ಥಿಗೆ ಟಿಕೆಟ್ ನೀಡಿರುವುದಕ್ಕೆ ಅರ್ಥವೇ ಇಲ್ಲ. ಹಿಂದುತ್ವದ ನೆಲೆ ಸ್ವಾರ್ಥಿಗಳ ಕೈ ಸೇರಿದೆ. ಇದನ್ನು ಮತ್ತೆ ಪಡೆಯಲು ಎಲ್ಲರೂ ಕೆಲಸ ಮಾಡಬೇಕು ಎಂದರು.
ಇದು ವಿಶೇಷ ಚುನಾವಣೆ. ಬಿಜೆಪಿ ದೇಶದಲ್ಲಿ ಒಂದು ಸಿದ್ದಾಂತದಲ್ಲಿ ಕಾರ್ಯ ನಿರ್ವ ಹಿಸುತ್ತಿದ್ದರೆ ರಾಜ್ಯದಲ್ಲಿ ಅದಕ್ಕೆ ತಿಲಾಂಜಲಿ ಇಟ್ಟು ಕಾರ್ಯ ನಿರ್ವಹಿಸುತ್ತಿದೆ. ಜನತಾ ಪಕ್ಷ ಕಟ್ಟಿದ್ದು ಇತಿಹಾಸ. ವಿಶ್ವವನ್ನು ಒಂದುಗೂಡಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ನ ಕುಟುಂಬ ರಾಜಕೀಯದ ವಿರುದ್ಧ ಕೆಲಸ ಆಗುತ್ತಿದ್ದರೆ, ಕರ್ನಾಟಕದಲ್ಲಿ ಬಿಜೆಪಿ ಅಪ್ಪ ಮಕ್ಕಳ ಕೈಯಲ್ಲಿದೆ. ಇದರ ನೋವಲ್ಲಿ ಕಾರ್ಯಕರ್ತರಿದ್ದಾರೆ ಎಂದರು.
ರಾಜ್ಯದಲ್ಲಿ ಹಿಂದುತ್ವ, ರೈತ, ರಾಷ್ಟ್ರೀಯತೆಯ ಹೋರಾಟದಿಂದ ಜಾತೀಯತೆಗೆ ಮುಟ್ಟಿದೆ. ಸಾಮೂಹಿಕದಿಂದ ಕೌಟುಂಬಿಕ ನೆಲೆಗೆ ತಲುಪಿದೆ. ವಿಧಾನಸಭಾ ಚುನಾವಣೆಯ ವೇಳೆ 45 ವರ್ಷಗಳಿಂದ ನನ್ನ ಜತೆ ಕೆಲಸ ಮಾಡಿದ ಉಡುಪಿ ರಘುಪತಿ ಭಟ್ ಗೆ ನೋವಾಗಿದೆ. ನನಗಾದರೂ ನವದೆಹಲಿಯಿಂದ ಕರೆ ಬಂದಿತ್ತು. ರಘುಪತಿ ಭಟ್ ಗೆ ಅದೂ ಬಂದಿಲ್ಲ. ಅವರು ಪಕ್ಷ ನಿಷ್ಠೆ ಬಿಟ್ಟಿಲ್ಲ. ಈ ಚುನಾವಣೆಯಲ್ಲಿ ಮತ್ತೆ ಅನ್ಯಾಯ ಆಗಿದೆ. ನಕ್ಸಲರು , ಕಮ್ಯುನಿಸ್ಟ್ ರ ಜತೆ ಶಾಂತಿಗಾಗಿ ನಡಿಗೆ ನಡೆಸಿ, ಈಚೆಗೆ ಪಕ್ಷ ಸೇರಿದ ವ್ಯಕ್ತಿಗೆ ಟಿಕೆಟ್ ನೀಡಲಾಗಿದೆ. ಇದರ ನೋವು ಕಾರ್ಯಕರ್ತರಿಗೂ ಇದೆ ಎಂದರು.