ಕುಮಟಾ: ತನ್ನ ಪ್ರೀತಿಯನ್ನು ನಿರಾಕರಿಸಿ ಬೇರೊಬ್ಬ ಯುವಕನ ಜತೆಗೆ ಮದುವೆ ನಿಶ್ಚಯವಾಗಿದ್ದ ಯುವಕನ ಮೇಲೆ ಚಾಕುವಿನಿಂದ ಹಲ್ಲೆ ಮಾಡಿರುವ ಘಟನೆ ಮಣಕಿ ಮೈದಾನದ ಬಳಿ ಬುಧವಾರ ನಡೆದಿದೆ.
ದುಂಡಕುಳಿ ಆಟೋ ಚಾಲಕ ವೃತ್ತಿ ಮಾಡುತ್ತಿದ್ದ ಸಂತೋಷ ಪಾಂಡುರಂಗ ಅಂಬಿಗ (27) ಹಲ್ಲೆಗೊಳಗಾದ ವ್ಯಕ್ತಿ. ಹಲ್ಲೆ ಮಾಡಿದ ಆರೋಪಿ ತಾಲೂಕಿನ ಹೆಗಡೆ ಚಿಟ್ಟಿಕಂಬಿಯ ನಿವಾಸಿ ವಾಟರ್ ಸರ್ವಿಸ್ ಕೆಲಸ ಮಾಡುತ್ತಿದ್ದ ರಾಜೇಶ ರಮೇಶ ಅಂಬಿಗ (27) ಎಂದು ಗುರುತಿಸಲಾಗಿದೆ.
ಆರೋಪಿ ರಾಜೇಶ ಅಂಬಿಗ ಯುವತಿ ಪ್ರೀತಿಸುತ್ತಿದ್ದು,ಈಚೆಗೆ ಇತನ ನಡವಳಿಕೆ ಸರಿಯಾಗಿಲ್ಲದೇ ಇರುವುದರಿಂದ ಯುವತಿ ದೂರವಾಗಿದ್ದರು. ಈ ಯುವತಿ ಸಂತೋಷ ಅಂಬಿಗ ಎಂಬುವವರನ್ನು ಪ್ರೀತಿಸಿ ಮದುವೆಯಾಗಲು ಇಚ್ಛಿಸಿದ್ದರು. ಪರಿಣಾಮ ಕೋಪಗೊಂಡ ಆರೋಪಿ ರಾಜೇಶ ಅಂಬಿಗ ಮಣಕಿ ಮೈದಾನಕ್ಕೆ ಸಂತೋಷ ಅಂಬಿಗ ಅವರನ್ನು ಕರೆಸಿಕೊಂಡು ತಾನು ಪ್ರೀತಿಸಿದ್ದ ಯುವತಿಯನ್ನು ಮದುವೆಯಾಗದಂತೆ ಕೊಲೆ ಬೆದರಿಕೆ ಹಾಕಿ, ಖಾರದ ಪುಡಿ ಎರಚಿ ಚಾಕುವಿನಿಂದ ಕುತ್ತಿಗೆ ಮೇಲೆ ತಿವಿದು ಹಲ್ಲೆ ಮಾಡಿದ್ದಾನೆ. ಹಲ್ಲೆಗೊಳಗಾದ ವ್ಯಕ್ತಿ ತಪ್ಪಿಸಿಕೊಂಡು ಬಂದಿದ್ದು, ತೀವ್ರವಾಗಿ ಗಾಯಗೊಂಡ ಸಂತೋಷ ಅವರನ್ನು ಕುಮಟಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಕೋಡ್ಕಣಿಯ ಸುಬ್ರಹ್ಮಣ್ಯ ನಾರಾಯಣ ಅಂಬಿಗ ಅವರು ಕುಮಟಾ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ತನಿಖೆ ನಡೆಯುತ್ತಿದೆ.