ಹಾಸನ: ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೊಗಳ ಪೆನ್ಡ್ರೈವ್ ತಯಾರಿ ಮಾಡಿಸಿದ್ದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಎಂದು ಬಿಜೆಪಿ ಮುಖಂಡ, ವಕೀಲ ದೇವರಾಜೇ ಗೌಡ ಅವರು ಆರೋಪ ಮಾಡಿದ್ದಾರೆ.
ಹಾಸನದ ಕೋರ್ಟ್ ಆವರಣದಲ್ಲಿ ಸುದ್ದಿಗಾರರ ಜತೆಗೆ ಅವರು ಮಾತನಾಡಿ, ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ನನ್ನನ್ನು ಕರೆಸಿ ಮಾತನಾಡಿದ್ದರು. ಪೆನ್ಡ್ರೈವ್ ಅನ್ನು ಎಚ್. ಡಿ. ಕುಮಾರಸ್ವಾಮಿ ಹಂಚಿದರು ಎಂದು ಹೇಳು. ನಿನಗೆ ಸಮಸ್ಯೆ ಆಗಲ್ಲ ಎಂದು ನನಗೆ ಭರವಸೆ ನೀಡಿದ್ದರು. ಅಲ್ಲದೆ, ಇದಕ್ಕೆ 100 ಕೋಟಿ ರೂಪಾಯಿ ಹಣದ ಆಫರ್ ಕೂಡ ಕೊಟ್ಟರು. ಐದು ಕೋಟಿ ರೂಪಾಯಿ ಮುಂಗಡ ಹಣವನ್ನು ಬೌರಿಂಗ್ ಕ್ಲಬ್ 110 ರೂಂಗೆ ಕಳುಹಿಸಿದ್ದರು ಎಂದು ಆರೋಪಿಸಿದರು.
ಡಿ.ಕೆ.ಶಿವಕುಮಾರ್ ಅವರು ಕಾರ್ತಿಕ್ ಅವರನ್ನು ಕರೆಸಿಕೊಂಡು ಸಂಪೂರ್ಣ ಮಾಹಿತಿ ಪಡೆದು ಪೆನ್ಡ್ರೈವ್ ರೆಡಿ ಮಾಡಿಸಿದ್ದರು. ಅಲ್ಲದೆ, ಶಿವಕುಮಾರ್ ಅವರು ನಾಲ್ಕು ಜನ ಮಂತ್ರಿಗಳ ಕಮಿಟಿ ಮಾಡಿದ್ದರು. ಚೆಲುವರಾಯಸ್ವಾಮಿ, ಕೃಷ್ಣಭೈರೇಗೌಡ, ಪ್ರಿಯಾಂಕ್ ಖರ್ಗೆ ಮತ್ತು ಇನ್ನೊಬ್ಬ ಸಚಿವರು. ನಾಲ್ಕು ಮಂತ್ರಿಗಳ ತಂಡ ರಚನೆ ಮಾಡಿ ಇದನ್ನು ನಿಭಾಯಿಸುವುದಕ್ಕೆ ಬಿಟ್ಟಿದ್ದರು ಎಂದು ಆರೋಪಿಸಿದ್ದಾರೆ.