ಬೆಂಗಳೂರು: ಲೈಂಗಿಕ ಹಗರಣದ ಆರೋಪಿ ಆಗಿರುವ ಸಂಸದ ಪ್ರಜ್ವಲ್ ರೇವಣ್ಣ ಅವರು ಅಶ್ಲೀಲ ವಿಡಿಯೊ ಪೆನ್ ಡ್ರೈವ್ ಸಂಬಂಧ ಎಸ್ಐಟಿ ತನಿಖೆಗೆ ಸಂಬಂಧಿಸಿದಂತೆ ಜಾಲತಾಣದಲ್ಲಿ ಬರೆದುಕೊಂಡಿರುವ ಅವರು, ವಿಚಾರಣೆಗೆ ಹಾಜರಾಗಲು ನಾನು ಬೆಂಗಳೂರಿನಲ್ಲಿ ಇಲ್ಲದ ಕಾರಣ, ನನ್ನ ವಕೀಲರ ಮೂಲಕ ಎಸ್ ಐಟಿಗೆ ಮನವಿ ಮಾಡಿದ್ದೇನೆ. ಸತ್ಯ ಆದಷ್ಟು ಬೇಗ ಹೊರಬರಲಿದೆ ಎಂದು ಪೋಸ್ಟ್ ನಲ್ಲಿ ತಿಳಿಸಿದ್ದಾರೆ.
ಲೈಂಗಿಕ ಹಗರಣದ ಆರೋಪಿ ಸಂಸದ ಪ್ರಜ್ವಲ್ ರೇವಣ್ಣ, ಕಲಂ 41(ಎ) ಸಿಆರ್ಪಿಸಿ ನೋಟಿಸ್ಗೆ ಖುದ್ದಾಗಿ ಹಾಜರಾಗಲು ಏಳು ದಿನ ಕಾಲಾವಕಾಶ ಬೇಕು ಎಂದು ಎಸ್ಐಟಿ ಬಳಿ ಮನವಿ ಮಾಡಿಕೊಂಡಿದ್ದಾರೆ. ಪ್ರಜ್ವಲ್ ಪರ ವಕೀಲ ಅರುಣ್ ಜಿ.ಅವರು ವಿಶೇಷ ತನಿಖಾ ತಂಡದ ಪೊಲೀಸ್ ಉಪಾಧೀಕ್ಷರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.
ನನ್ನ ಕಕ್ಷಿದಾರ ಪ್ರಜ್ವಲ್ ರೇವಣ್ಣ ಅವರ ಮನೆಯ ಗೋಡೆಗೆ ತಮ್ಮ ಕಚೇರಿಯಿಂದ ನೋಟಿಸ್ ಅಂಟಿಸಿರುವ ಕುರಿತು ಅವರ ಕುಟುಂಬದಿಂದ ಮಾಹಿತಿ ಬಂದಿದೆ. ಏ. 30 ರಂದು ತಮ್ಮ ನೋಟಿಸ್ ನಲ್ಲಿ ಪ್ರಜ್ವಲ್ ರೇವಣ್ಣ ಮೇ 1 ರಂದು ತಮ್ಮ ಮುಂದೆ ಹಾಜರಾಗಲು ತಿಳಿಸಿದ್ದೀರಿ. ಆದರೆ, ನನ್ನ ಕಕ್ಷಿದಾರ ಬೆಂಗಳೂರಿನಿಂದ ಹೊರಗಡೆ ಪ್ರವಾಸದಲ್ಲಿ ಇರುವುದರಿಂದ ಅವರಿಗೆ ನೋಟಿಸ್ ಬಗ್ಗೆ ತಿಳಿಸಿದ್ದೇನೆ . ಅವರು ಬೆಂಗಳೂರಿಗೆ ಬಂದು ತಮ್ಮ ಮುಂದೆ ಹಾಜರಾಗಲು 7 ದಿನಗಳ ಕಾಲಾವಕಾಶ ಬೇಕು ಎಂದು ತಿಳಿಸಿದ್ದು, ಇದಕ್ಕೆ ಅವಕಾಶ ನೀಡಿ, ಮತ್ತೊಂದು ದಿನಾಂಕದಂದು ತಮ್ಮ ಮುಂದೆ ವಿಚಾರಣೆಗೆ ಹಾಜರಾಗಲು ಅವಕಾಶ ನೀಡಬೇಕೆಂದು ವಕೀಲರಾದ ಅರುಣ್ ಅವರು ಮನವಿ ಮಾಡಿದ್ದಾರೆ.
ಸಂಸದ ಪ್ರಜ್ವಲ್ ಹಾಗೂ ಎಚ್.ಡಿ.ರೇವಣ್ಣ ವಿರುದ್ಧ ದೌರ್ಜನ್ಯ ಆರೋಪ ಕೇಳಿ ಬಂದಿದ್ದು, ಈ ಸಂಬಂಧ ಸಂತ್ರಸ್ತೆ ಈಗಾಗಲೇ ದೂರು ದಾಖಲಿಸಿದ್ದಾರೆ. ಈ ಪ್ರಕರಣದ ತನಿಖೆಗೆ ರಾಜ್ಯ ಸರ್ಕಾರ ಎಸ್ಐಟಿ ರಚನೆ ಮಾಡಿದ್ದು, ಎಸ್ಐಟಿ ತಂಡ ಈಗಾಗಲೇ ತನಿಖೆ ಚುರುಕುಗೊಳಿಸಿದೆ.