ಮಂಗಳೂರು: ಇಲ್ಲಿನ ಉರ್ವ ಚಿಲಿಂಬಿ ಸಾಯಿಮಂದಿರದ ಬಳಿ ಚುನಾವಣೆ ಪ್ರಚಾರ ನಡೆಸುವ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಪರಸ್ಪರ ಘೋಷಣೆ ಕೂಗಿಕೊಂಡು ವಾಗ್ವಾದ ನಡೆಸಿದ ಘಟನೆ ನಡೆದಿದೆ.
ರಾಮನವಮಿ ಅಂಗವಾಗಿ ಲೇಡಿಹಿಲ್ ಸಾಯಿ ಮಂದಿರದಲ್ಲಿ ವಿಶೇಷ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಪರಿಣಾಮ ಭಕ್ತರ ಸಂಖ್ಯೆಯೂ ಹೆಚ್ಚಿತ್ತು. ಇದೇ ವೇಳೆ, ಮಂದಿರದ ಎದುರಿನ ರಸ್ತೆಯಲ್ಲಿ ಬಿಜೆಪಿ ಕಾರ್ಯಕರ್ತರು ಪ್ರಚಾರ ನಡೆಸುತ್ತ ತೆರಳುತ್ತಿದ್ದರು. ಇದನ್ನು ಕಂಡ ಅಲ್ಲಿದ್ದ ಕಾಂಗ್ರೆಸ್ ಕಾರ್ಯಕರ್ತರು, ಮಂದಿರದ ಬಳಿ ಪ್ರಚಾರ ನಡೆಸದಂತೆ ಹೇಳಿರುವ ಘಟನೆ ವಾಗ್ವಾದಕ್ಕೆ ಕಾರಣ ಆಯಿತು.
ಕೆಲ ಹೊತ್ತಿನಲ್ಲಿ ಎರಡೂ ಪಕ್ಷಗಳ ಕಾರ್ಯಕರ್ತರು ಜಾಮಾಯಿಸಿದ್ದು, ಪರಸ್ಪರ ವಾಗ್ವಾದ ನಡೆಸಿದ್ದರು. ಮಂದಿರದ ಬಳಿ ಪ್ರಚಾರ ನಡೆಸಬಾರದು ಎಂದು ನೀವು ಯಾರು ಹೇಳೋಕೆ ಎಂದು ಬಿಜೆಪಿ ಕಾರ್ಯಕರ್ತರು ಪ್ರಶ್ನೆ ಮಾಡಿದ್ದಾರೆ. ನಾವು ದೇವಸ್ಥಾನದ ಒಳಗಡೆ ಬಂದು ಪ್ರಚಾರ ಮಾಡ್ತಾ ಇಲ್ಲ. ಹೊರಗಿನಿಂದ ನಾವು ಹೋಗ್ತಾ ಇದ್ದರೆ ನೀವು ಯಾಕೆ ಅಡ್ಡಿ ಮಾಡಿದ್ದು ಎಂದು ವಾಗ್ವಾದ ಮಾಡಿದ್ದಾರೆ. ಶಾಸಕ ವೇದವ್ಯಾಸ ಕಾಮತ್ ಮತ್ತು ಕಾಂಗ್ರೆಸ್ ಮುಖಂಡ ಮಿಥುನ್ ರೈ ಸ್ಥಳಕ್ಕೆ ದೌಡಾಯಿಸಿ ಕಾರ್ಯಕರ್ತರನ್ನು ಸಮಾಧಾನ ಪಡಿಸಿ ವಾತಾವರಣವನ್ನು ತಿಳಿಸಿಗೊಳಿಸಿದರು.
ಉರ್ವ ಇನ್ ಸ್ಪೆಕ್ಟರ್ ಭಾರತೀ ಅವರು ಸ್ಥಳಕ್ಕೆ ಬಂದು ಸೇರಿದ್ದ ಜನರನ್ನು ಚದುರಿಸಿದರು. ಕೆಲಹೊತ್ತು ಚಿಲಿಂಬಿಯಲ್ಲಿ ಜನ ಸೇರಿದ್ದರಿಂದ ವಾಗ್ವಾದ, ಹೊಡೆದಾಟಕ್ಕೆ ಕಾರಣವಾಗುತ್ತಾ ಅನ್ನುವ ಸ್ಥಿತಿ ಉಂಟಾಗಿತ್ತು. ಮುಂಜಾಗ್ರತಾ ಕ್ರಮವಾಗಿ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.