ಮಂಗಳೂರು: ಮೊಗವೀರ ಸಮುದಾಯದವರು ದೇಶದ ಸಾಗರಗಡಿಯ ನಿಜವಾದ ರಕ್ಷಕರು. ಭಾರತೀಯ ನೌಕಾಪಡೆ ರಚನೆಗೂ ಮೊದಲೇ ಜಲಪ್ರದೇಶದ ಗಡಿ ರಕ್ಷಿಸುತ್ತ ಬಂದವರು ಮೀನುಗಾರ ಸಮುದಾಯದವರು. ಸಮುದಾಯದ ದೇಶಭಕ್ತಿ, ಹಿಂದುತ್ವದ ನಿಷ್ಠೆ ಅಪಾರ ಎಂದು ಬಿಜೆಪಿ ಅಭ್ಯರ್ಥಿ ಕ್ಯಾ. ಬೃಜೇಶ್ ಚೌಟ ಹೇಳಿದರು.
ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ಆಯೋಜಿಸಿದ್ದ ಪಕ್ಷದ ಮೀನುಗಾರರ ಪ್ರಕೋಷ್ಠದ ಸಮಾವೇಶದಲ್ಲಿ ಅವರು ಮಾತನಾಡಿದರು.
ಮೀನುಗಾರರು ನಿಜವಾದ ಅರ್ಥದಲ್ಲಿ ಹಿಂದೂ ಸೈನಿಕರು. ಮೊಗವೀರ ಸಮಾಜದ ಬಂಧುಗಳು ಈ ಮಣ್ಣಿದ ದೈವ-ದೇವರುಗಳನ್ನು ನಂಬಿರುವವರು ಮತ್ತು ರಾಷ್ಟ್ರಾಭಿಮಾನ ಇಟ್ಟುಕೊಂಡವರು. ಎಂತಹ ಸವಾಲು ಬಂದರೂ ದಿಟ್ಟವಾಗಿ ಎದುರಿಸುವ ಸೈನಿಕನ ಮನಸ್ಥಿತಿ ಉಳ್ಳವರು ಮೀನುಗಾರ ಸಮಾಜದ ಬಂಧುಗಳು ಎಂದರು.
ಸಮುದ್ರ ನಮ್ಮ ಆಸ್ತಿ. ದೇಶದ ಸರ್ವಾಂಗೀಣ ಪ್ರಗತಿಗೆ ಇದನ್ನು ಬಳಸಿಕೊಳ್ಳಬೇಕಿದೆ. ಮಂಗಳೂರು-ಬೆಂಗಳೂರು ನಡುವೆ ರಸ್ತೆ ಮತ್ತು ರೈಲು ಸಂಪರ್ಕ ಇನ್ನಷ್ಟು ಅಭಿವೃದ್ಧಿಗೊಳ್ಳಬೇಕಿದೆ. ಎಕ್ಸ್ಪ್ರೆಸ್ ಹೆದ್ದಾರಿ, ವೇಗದ ರೈಲು ಸಂಪರ್ಕ ಅರಂಭವಾಗಬೇಕಿದೆ. ಪರಿಸರಕ್ಕೆ ಹಾನಿಯಾಗದೆ ಈ ಕಾರ್ಯವನ್ನು ಸಾಧಿಸುವುದು ಹೇಗೆ ಎಂಬುದು ಯೋಜನೆ ಮಾಡಬೇಕಿದೆ. ಕರ್ನಾಟಕದ ಕರಾವಳಿ ಅಭಿವೃದ್ಧಿಯಾದರೆ ರಾಜ್ಯ, ದೇಶದ ಅಭಿವೃದ್ಧಿ ಕೂಡ ಸಾಧ್ಯ. ಇದಕ್ಕಾಗಿ ನಮ್ಮ ಜನರ ಯೋಚನೆ, ಮಾನಸಿಕತೆ ಬದಲಾಗಬೇಕಿದೆ ಎಂದರು.
ಮಾಜಿ ಸಚಿವ ಬಿ. ನಾಗರಾಜ ಶೆಟ್ಟಿ ಅವರು ಪ್ರಾಸ್ತಾವಿಕ ಮಾತನಾಡಿ, ತಮ್ಮ ಅವಧಿಯಲ್ಲಿ ಮೀನುಗಾರರ ಸೊಸೈಟಿ ಮೂಲಕ ಮೀನುಗಾರ ಸಮುದಾಯಕ್ಕೆ ನೀಡಲಾದ ನೆರವನನ್ನು ನೆನಪಿಸಿಕೊಂಡರು.
ರಾಷ್ಟ್ರೀಯ ಮೀನುಗಾರ ವೇದಿಕೆಯ ಸಹ ಸಂಚಾಲಕ ರಾಮಚಂದ್ರ ಬೈಕಂಪಾಡಿ, ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ, ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಅವರು ಸಮಾವೇಶದಲ್ಲಿ ಮಾತನಾಡಿದರು. ಮೀನುಗಾರರ ಪ್ರಕೋಷ್ಠದ ಅಧ್ಯಕ್ಷ ಗಿರೀಶ್ ಕರ್ಕೇರ, ಮಂಡಲ ಅಧ್ಯಕ್ಷ ಯಶವಂತ ಅಮೀನ್, ಪ್ರಮುಖರಾದ ಅನಿಲ್, ಶೋಭೇಂದ್ರ ಇದ್ದರು.
ರಮೇಶ್ ಅಮೀನ್ ಮುಕ್ಕ, ಹರೀಶ್ ಹೊಸಬೆಟ್ಟು, ಸತೀಶ್ ಸುವರ್ಣ ಪಣಂಬೂರು, ರೂಪೇಶ್ ಕರ್ಕೇರ ಬೆಂಗ್ರೆ, ಪ್ರದೀಪ್ ಮೆಂಡನ್ ಬೊಕ್ಕಪಟ್ಣ ಅವರನ್ನು ಮೀನುಗಾರ ಪ್ರಕೋಷ್ಠದ ಸಹ ಸಂಚಾಲಕರನ್ನು ಹೊಸದಾಗಿ ನೇಮಿಸಲಾಯಿತು.