ಮೂಡುಬಿದಿರೆ: ಇಲ್ಲಿನ ಹಿರೇ ಅಮ್ಮನವರ ಬಸದಿ ಪ್ರತಿಷ್ಠಾ ಪುರೋಹಿತ ಎಂ. ಧರ್ಮರಾಜ ಇಂದ್ರ (94) ಅವರು ಬುಧವಾರ ತಮ್ಮ ನಿವಾಸದಲ್ಲಿ ನಿಧನರಾದರು. ಅವರಿಗೆ ಪತ್ನಿ, ಇಬ್ಬರು ಪುತ್ರರು, ಪುತ್ರಿ ಇದ್ದಾರೆ.
ಐದು ದಶಕಗಳಿಂದ ಬಸದಿಯ ಪುರೋಹಿತರಾಗಿ, ಬಸದಿಯಲ್ಲಿ ನಿಂತು ಹೋಗಿದ್ದ ರಥೋತ್ಸವವನ್ನು ಮತ್ತೆ ಆರಂಭಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ನವರಾತ್ರಿ ಪೂಜೆ, ಲಕ್ಷಕುಂಕುಮಾರ್ಚನ ಸಪ್ತಾಹ ಸಹಿತ ವಿವಿಧ ಜೈನ ಧಾರ್ಮಿಕ ಆರಾಧನೆಗಳಲ್ಲಿ ಪುರೋಹಿತರಾಗಿ ಪಾಲ್ಗೊಂಡಿದ್ದರು.
ಜೈನ ಧಾರ್ಮಿಕ ಆರಾಧನಾ ಸಾಹಿತ್ಯ ವಲಯಕ್ಕೆ ಅಮೂಲ್ಯ ಕೊಡುಗೆ ಎನ್ನಬಹುದಾದ ‘ಬೃಹತ್ ವಿವಿಧ ಜೈನ ಆರಾಧನಾ ಕೋಶ’ದ ಸಂಪಾದನಾ ಕೃತಿ ಸೇರಿದಂತೆ ಹತ್ತಕ್ಕೂ ಅಧಿಕ ಜೈನ ಆರಾಧನಾ ಸಾಹಿತ್ಯ ಕೃತಿಗಳನ್ನು ಅವರು ರಚಿಸಿದ್ದಾರೆ. ಈ ಪೈಕಿ ಅವರು ಬರೆದ ಪದ್ಮಾವತಿ ದೇವಿ ಚರಿತ್ರೆ ಕನ್ನಡ, ಹಿಂದಿ, ಇಂಗ್ಲಿಷ್ ಸಹಿತ ಏಳು ಭಾಷೆಗಳಲ್ಲಿ ಪ್ರಕಟ ಆಗಿದೆ.
ಜಿನಭಕ್ತಿಗೀತೆಗಳ ರಚನೆ, ಹಾಡುಗಾರರಾಗಿ, ಹಾರ್ಮೋನಿಯಂ ವಾದಕರಾಗಿದ್ದರು. ಮೂಡುಬಿದಿರೆಯ ಸಾಂಗತ್ಯದಿಂದ ಆರಾಧನಾ ಸಾಹಿತ್ಯ ಋಷಿ ಬಿರುದು, ತೌಳವ ಇಂದ್ರ ಸಮಾಜ, ಎಂ.ಸಿ.ಎಸ್.ಬ್ಯಾಂಕಿನ ಸಹಕಾರಿ ಸಪ್ತಾಹ ಗೌರವ, ಮೂಡುಬಿದಿರೆ ಪ್ರೆಸ್ ಕ್ಲಬ್ ಗೌರವ ಸೇರಿದಂತೆ ಹಲವು ಗೌರವಗಳಿಗೆ ಅವರು ಭಾಜನವಾಗಿದ್ದರು.