ಮಂಗಳೂರು: ದ.ಕ ಜಿಲ್ಲೆಯಲ್ಲಿ ಈ ಬಾರಿಯ ಲೋಕಸಭಾ ಚುನಾವಣೆ ಕೈ ಹಾಗೂ ಕಮಲ ಪ್ರತಿಷ್ಠೆ ಆಗುವ ಸ್ಪಷ್ಟ ಚಿತ್ರಣ ಕಂಡು ಬರುತ್ತಿದ್ದು, ಬಿಜೆಪಿ ಸಾಮಾನ್ಯ ಕಾರ್ಯಕರ್ತ ಕ್ಯಾ. ಬೃಜೇಶ್ ಚೌಟ ಅವರಿಗೆ ಮಣೆ ಹಾಕಿದೆ. ಇದೇ ಹಾದಿಯಲ್ಲಿ ಕೂಡ ಕಾಂಗ್ರೆಸ್ ಹೆಜ್ಜೆ ಇಡುವ ಬಗ್ಗೆ ರಾಜಕೀಯ ಲೆಕ್ಕಾಚಾರ ಶುರುವಾಗಿವೆ.
ಕಾಂಗ್ರೆಸ್ ನಿಂದ ಯುವ ವಕೀಲ ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್ ರಾಮಯ್ಯ ಹೆಸರು ಮತ್ತೆ ಮುನ್ನಲೆಗೆ ಬಂದಿದೆ. ವಿಧಾನಸಭೆ ಚುನಾವಣೆ ವೇಳೆ ಕೂಡ ಇವರ ಹೆಸರು ಚಾಲ್ತಿಯಲ್ಲಿ ಇತ್ತು. ಕಾಂಗ್ರೆಸ್ ಹೈಕಮಾಂಡ್ ಕೂಡ ಈ ಬಾರಿ ಕರಾವಳಿಯನ್ನು ತನ್ನ ತೆಕ್ಕೆಗೆ ಪಡೆಯಬೇಕು ಎಂಬ ಉತ್ಸಾಹದಿಂದ ಜಿದ್ದಿಗೆ ಬಿದ್ದವರಂತೆ ಸಿಎಂ, ಡಿಸಿಎಂ ಜೋಡೆತ್ತುಗಳಂತೆ ಕರಾವಳಿ ಜಿಲ್ಲೆಗಳಿಗೆ ಪದೇ ಪದೇ ಬರುತ್ತಿರುವುದು ಗುಟ್ಟಾಗಿ ಉಳಿದಿಲ್ಲ.
ಮೂರು ಬಾರಿ ಸಂಸದರಾಗಿರುವ ನಳಿನ್ ಕುಮಾರ್ ಕಟೀಲ್ ಅವರ ಬದಲು ಬಿಜೆಪಿ ಕ್ಯಾ. ಬೃಜೇಶ್ ಚೌಟ ಅವರಿಗೆ ಟಿಕೆಟ್ ಘೋಷಣೆ ಮಾಡಿರುವುದು ಯುವಕರಿಗೆ ಅವಕಾಶ ಮಾಡಿಕೊಟ್ಟಿದೆ. ಖುದ್ದು ನಳಿನ್ ಕುಮಾರ್ ಅವರೇ ಚೌಟ ಅವರಿಗೆ ಸಿಹಿ ತಿನಿಸಿ ಶುಭಾಶಯ ಕೋರಿದ್ದಾರೆ. ಇನ್ನು ಕಾಂಗ್ರೆಸ್ ಇತ್ತ ಕಾಂಗ್ರೆಸ್ ನಲ್ಲಿ ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಮತ್ತು ಪದ್ಮರಾಜ್ ಹೆಸರು ಮುಂಚೂಣಿಯಲ್ಲಿವೆ ಎಂದು ಹೇಳಲಾಗುತ್ತಿದೆ.
ವಿನಯ ಕುಮಾರ್ ಸೊರಕೆ ಅವರಿಗೆ ಟಿಕೆಟ್ ನೀಡುವುದಕ್ಕೆ ವಿರೋಧ ಇರುವದರಿಂದ ಕೊನೆ ಕ್ಷಣದಲ್ಲಿ ಬಿಲ್ಲವ ಮುಂಖಂಡ ಪದ್ಮರಾಜ್ ರಾಮಯ್ಯ ಅವರ ಹೆಸರನ್ನು ಬಹುತೇಕ ಅಂತಿಮಗೊಳಿಸುವ ಸಾಧ್ಯತೆ ಇದೆ. ಪದ್ಮರಾಜ್ ಅವರಿಗೆ ಟಿಕೆಟ್ ನೀಡುವುದಕ್ಕೆ ರಾಜ್ಯ ಮತ್ತು ಕೇಂದ್ರ ನಾಯಕರು ಉತ್ಸುಕರಾಗಿದ್ದಾರೆ ಎಂದು ತಿಳಿದು ಬಂದಿದೆ. ಒಂದು ವೇಳೆ ಕಾಂಗ್ರೆಸ್ ಹೊಸ ತಂತ್ರಗಾರಿಕೆಗೆ ಮುಂದಾದಲ್ಲಿ ಜಿದ್ದಾಜಿದ್ದಿ ಸಾಧ್ಯತೆಯನ್ನು ಅಲ್ಲಗಳಿಯುವಂತಿಲ್ಲ.