ಮಂಗಳೂರು: ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರದಲ್ಲಿ ಗ್ಯಾರಂಟಿ ಸಮಾವೇಶ ಹಮ್ಮಿಕೊಂಡಿದ್ದೇವೆ. ಹೆಚ್ಚಿನ ಫಲಾನುಭವಿಗಳು ಭಾಗವಹಿಸಿದ್ದು, ರಾಜ್ಯ ಸರಕಾರವು ಗ್ಯಾರಂಟಿ ಯೋಜನೆ ಅನುಷ್ಠಾನದಲ್ಲಿ ಮಾದರಿ ನಡೆ ಅನುಸರಿಸಿದೆ. ರಾಜ್ಯದ ಕಾರ್ಯಕರ್ತರ ಸಮಾವೇಶ ಮಂಗಳೂರಲ್ಲಿ ಯಶಸ್ವಿ ಆಗಿದೆ. ಪಕ್ಷದ ಮುಖಂಡರು ಕಾರ್ಯಕರ್ತರು ತುಂಬಾ ಶ್ರಮ ವಹಿಸಿದ್ದಾರೆ. ಅವರಿಗೆ ಕೃತಜ್ಞತೆ ಸಲ್ಲಿಸುವುದಾಗಿ ಜಿಲ್ಲಾ ಕಾಂಗ್ರೆಸ್ ಘಟಕದ ಅಧ್ಯಕ್ಷ ಹರೀಶ್ ಕುಮಾರ್ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸರ್ಕಾರದ ಗ್ಯಾರಂಟಿ ಯೋಜನೆಗಳು ಅತ್ಯಂತ ಯಶಸ್ವಿಯಾಗಿ ಅನುಷ್ಠಾನಗೊಳ್ಳುತ್ತಿವೆ. ಪುಲ್ವಾಮಾ ಘಟನೆ ನಡೆದು 5 ವರ್ಷಗಳೆ ಆಗಿವೆ. ಇದುವರೆಗೆ ಒಬ್ಬನೇ ಒಬ್ಬ ಆರೋಪಿ ಕೂಡ ಬಂಧನ ಮಾಡಿಲ್ಲ. 40 ಮಂದಿ ಯೋಧರು ಪ್ರಾಣ ಕಳೆದುಕೊಂಡಿದ್ದಾರೆ. ಈ ಘಟನೆಯ ಕಾರಣ ಭದ್ರತಾ ವೈಫಲ್ಯದ ಬಗ್ಗೆ ಇದುವರೆಗೆ ತನಿಖೆ ಆಗಿಲ್ಲ. ಬಿಜೆಪಿಗೆ ಸೋಲಿನ ಭೀತಿ ಎದುರಾಗಿದೆ. ಕೇಂದ್ರದ ಉದ್ಯೋಗ ಭರವಸೆ ನಿಜವಾಗಿಲ್ಲ. ಉತ್ತರ ಕನ್ನಡ ಸಂಸದರು ಸಂವಿಧಾನ ವಿರೋಧಿ ಹೇಳಿಕೆಯನ್ನು ನಿನ್ನೆ ಮತ್ತೆ ಪುನರುಚ್ಚಾರ ಮಾಡಿದ್ದಾರೆ. ಇದು ದೇಶ ದ್ರೋಹದ ವರ್ತನೆ. ಆದರೆ ಪ್ರಸ್ತುತ ಪ್ರಧಾನಿ ಟೀಕಿಸಿದರೆ ಪ್ರಕರಣ ದಾಖಲಿಸುತ್ತಾರೆ. ಈ ಪ್ರಕರಣದಲ್ಲಿ ಯಾಕೆ ಅವರ ವಿರುದ್ಧ ಕ್ರಮ ಕೈಗೊಂಡಿಲ್ಲ? ಸಂವಿಧಾನ ರಕ್ಷಣೆ ಮಾಡುವುದಾಗಿ ಪ್ರಮಾಣವಚನ ಮಾಡಿದ್ದನ್ನು ಮರೆತು ಹೇಳಿಕೆ ನೀಡುತ್ತಿದ್ದಾರೆ ಎಂದರು.
ಬಿಜೆಪಿ ಹಿಡನ್ ಅಜೆಂಡಾ ಇದನ್ನು ಅನಂತ ಕುಮಾರ್ ಹೆಗಡೆ ಅವರ ಮೂಲಕ ಅದನ್ನು ಕಾರ್ಯಗತಗೊಳಿಸಲು ಹೊರಟಿದ್ದಾರೆ. ಅವರನ್ನು ತಕ್ಷಣವೇ ಸಂಸದ ಸ್ಥಾನದಿಂದ ಅನರ್ಹಗೊಳಿಸಬೇಕು. ಅವರ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಬೇಕು. ಗ್ಯಾರೆಂಟಿಯನ್ನು ಸುಳ್ಳು ಅಂತ ಹೇಳಿದರು, ಬಿಟ್ಟಿ ಭಾಗ್ಯ ಅಂದರು, ದಿವಾಳಿಯಾಗುತ್ತದೆ ಎಂದರು, ಆದರೆ ರಾಜ್ಯದ ಆರ್ಥಿಕತೆಗೆ ಹಾನಿಯಾಗಿಲ್ಲ ದೇಶದ ಎರಡನೇ ಅತಿ ಹೆಚ್ಚು ತೆರಿಗೆ ಕಟ್ಟುವ ರಾಜ್ಯವಾಗಿ ಕರ್ನಾಟಕಕ್ಕೆ ಹೆಸರಿದೆ. ಉತ್ತರ ಭಾರತದ ಮೂರು ರಾಜ್ಯಗಳಲ್ಲಿ ಕೂಡ ಬಿಜೆಪಿ ಮೈತ್ರಿಕೂಟದ ಸರಕಾರಗಳು ಗ್ಯಾರಂಟಿ ಘೋಷಣೆ ಮಾಡಿದೆ. ಈ ದೇಶ ದಿವಾಳಿ ಆಗುವುದಿದ್ದರೆ ಅದು ಮೋದಿ ಗ್ಯಾರಂಟಿಯಿಂದಲೇ. 20 ಲಕ್ಷ ಕೋಟಿ ಶ್ರೀಮಂತರ ಸಾಲಮನ್ನಾ ಮಾಡಿದ ಬಿಜೆಪಿ ದೇಶವನ್ನು ದಿವಾಳಿಯತ್ತ ಸಾಗುವಂತೆ ಮಾಡಿದೆ. ಐಟಿ, ಇಡಿ ಮುಂದೆ ಇಟ್ಟುಕೊಂಡು ಸರ್ಕಾರ ನಡೆಸುತ್ತಿದ್ದಾರೆ ಎಂದರು.
ಕಾಂಗ್ರೆಸ್ ಮುಖಂಡರಾದ ಮಂಜುನಾಥ ಭಂಡಾರಿ, ಮಮತಾ ಗಟ್ಟಿ, ಪ್ರವೀಣ್ ಚಂದ್ರ ಆಳ್ವ, ನವೀನ್ ಡಿಸೋಜ, ಪ್ರಕಾಶ್ ಸಾಲ್ಯಾನ್ ಇದ್ದರು.