ಕಾರವಾರ: ಭಾರತೀಯ ಹವಾಮಾನ ಇಲಾಖೆಯು ಮಾರ್ಚ್ ನಿಂದ ಮೇ ತಿಂಗಳವರೆಗೆ ಉಷ್ಣತೆ ಮತ್ತು ಮಳೆಯ ದೀರ್ಘಾವಧಿ ಮುನ್ಸೂಚನೆಯನ್ನು ಬಿಡುಗಡೆ ಮಾಡಿದ್ದು, ಇದು ಉತ್ತರ ಕನ್ನಡ ಜಿಲ್ಲೆಯಲ್ಲಿ (ಜೊಯಿಡಾ ತಾಲ್ಲೂಕಿನ ಕೆಲವು ಭಾಗಗಳನ್ನು ಹೊರತುಪಡಿಸಿ) ಸಾಮಾನ್ಯಕ್ಕಿಂತ ಹೆಚ್ಚಿನ ಉಷ್ಣತೆ ಉಂಟಾಗುವ ಸಾಧ್ಯತೆಯಿದೆ ಎಂದು ಸೂಚನೆ ನೀಡಿದೆ.
ಈ ಹೆಚ್ಚಿನ ಉಷ್ಣತೆಯು ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟು ಮಾಡುವ ಸಾಧ್ಯತೆಯ ಜತೆಗೆ ಅಗ್ನಿ ಅವಘಡಗಳ ಅಪಾಯವನ್ನು
ಹೆಚ್ಚಿಸಬಹುದಾಗಿದ್ದು, ಈ ನಿಟ್ಟಿನಲ್ಲಿ, ಉತ್ತರ ಕನ್ನಡ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರವು ಮುನ್ನೆಚ್ಚರಿಕೆ ಕ್ರಮಗಳನ್ನು
ಕೈಗೊಳ್ಳುವುದು ಅಗತ್ಯ ಇದೆ ಎಂದು ಪ್ರಕಟಣೆ ತಿಳಿಸಿದೆ.
ಬಿಸಿಲಿನ ಉತ್ತುಂಗ ಸಮಯದಲ್ಲಿ ಹೊರಗೆ ಹೋಗುವುದನ್ನು ಕಡಿಮೆ ಮಾಡಿ ಮತ್ತು ಸಾಕಷ್ಟು ನೀರು ಕುಡಿಯಿರಿ, ತಂಪು ಪಾನೀಯ ಗಳಿಗಿಂತ ನೀರನ್ನು ಆಯ್ಕೆ ಮಾಡಿ. ಸೂರ್ಯನ ಕಿರಣಗಳಿಂದ ರಕ್ಷಣೆ ಪಡೆಯಿರಿ, ಬಿಸಿಲಿನ ಸಮಯದಲ್ಲಿ ಹೊರಗೆ ಹೋಗಬೇಕಾದರೆ, ಟೊಪ್ಪಿ, ಸನ್ಸ್ಟೀನ್ ಲೋಷನ್, ಮತ್ತು ಸೂರ್ಯನ ಕಿರಣಗಳನ್ನು ತಡೆಯುವಂತಹ ಬಟ್ಟೆಗಳನ್ನು ಧರಿಸಿ. ಆರೋಗ್ಯದ ಮೇಲೆ ನಿಗಾ ವಹಿಸಿ, ಅತಿಯಾದ ಬೆವರುವಿಕೆ, ಆಯಾಸ, ಮತ್ತು ತಲೆತಿರುಗುವಿಕೆಯಂತಹ ಲಕ್ಷಣಗಳಿಗೆ ಗಮನ ಕೊಡಿ. ಈ ಲಕ್ಷಣಗಳು ಕಂಡುಬಂದರೆ, ತಕ್ಷಣವೇ ವೈದ್ಯಕೀಯ ಸಹಾಯ ಪಡೆಯಿರಿ.
ಸುಟ್ಟುಗುಂಟೆಗಳನ್ನು ಎಚ್ಚರವಾಗಿ ನಂದಿಸಿ ಮತ್ತು ತೆರೆದ ಪ್ರದೇಶಗಳಲ್ಲಿ ಬೆಂಕಿ ಹಚ್ಚದಿರಿ. ಶಾರ್ಟ್ ಸರ್ಕೀಟ್ ಗಳನ್ನು ತಡೆಯಲು ವಿದ್ಯುತ್ ಉಪಕರಣಗಳನ್ನು ಸರಿಯಾದ ರೀತಿಯಲ್ಲಿ ನಿರ್ವಹಿಸಿ. ಯಾವುದೇ ತುರ್ತು ಪರಿಸ್ಥಿತಿಯಲ್ಲಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಉಚಿತ ಸಹಾಯವಾಣಿ ಸಂಖ್ಯೆ 1077/ 9483511015 ಗೆ ಕರೆ ಮಾಡುವಂತೆ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ತಿಳಿಸಿದ್ದಾರೆ.