ಮಂಗಳೂರು: ಶ್ವಾಸಕೋಶದಲ್ಲಿ ಇದ್ದ 40 ಕ್ಕೂ ಹೆಚ್ಚು ಕ್ಯಾನ್ಸರ್ ಗಡ್ಡೆಗಳನ್ನು ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಇದು ದೇಶದಲ್ಲಿಯೇ ಮೊದಲ ಶಸ್ತ್ರ ಚಿಕಿತ್ಸೆ ಎಂಬ ಹೆಗ್ಗಳಿಕೆಗೆ ಭಾಜನವಾಗಿದೆ. ನಾಲ್ಕು ಬೇರೆ ಬೇರೆ ತರಹದ ಕ್ಯಾನ್ಸರ್ ಕಾಯಿಲೆಗೆ ತುತ್ತಾಗಿದ್ದ ಹೆಣ್ಣು ಮಗುವಿನ ಕ್ಯಾನ್ಸರ್ ಗಡ್ಡೆಗಳನ್ನು ಯೆನೆಪೊಯ ವೈದ್ಯಕೀಯ ಕಾಲೇಜಿನ ಝುಲೇಖಾ ಯೆನೆಪೋಯ ಇನ್ ಸ್ಟಿಟ್ಯೂಟ್ ಆಫ್ ಆಂಕಲಾಜಿಯಲ್ಲಿ ನುರಿತ ವೈದ್ಯರ ತಂಡದ ಕಾರ್ಯಸಾಧನೆ ನಿಜಕ್ಕೂ ಶ್ಲಾಘನೀಯ ಎಂದು ಶಸ್ತ್ರಚಿಕಿತ್ಸೆಯ ನೇತೃತ್ವ ವಹಿಸಿದ್ದ ಡಾ. ಜಲಾಲುದ್ದೀನ್ ಅಕ್ಬರ್ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ದೇರಳಕಟ್ಟೆ ಯೆನೆಪೊಯ ಆಸ್ಪತ್ರೆಯ ವೈದ್ಯರ ತಂಡವು ಈ ಶಸ್ತ್ರ ಚಿಕಿತ್ಸೆಯನ್ನು ಅಚ್ಚುಕಟ್ಟಾಗಿ ನಡೆಸಿದೆ. ವೈದ್ಯರ ತಂಡವು ರೋಗಿಯಾದ ಮಗುವಿಗೆ 10 ಗಂಟೆಗಳ ಸುದೀರ್ಘ ಶಸ್ತ್ರಚಿಕಿತ್ಸೆ ನಡೆಸಿ ಶ್ವಾಸಕೋಶದಲ್ಲಿದ್ದ ಕ್ಯಾನ್ಸರ್ ಗಡ್ಡೆಗಳನ್ನು ಹೊರ ತೆಗೆದಿದ್ದು, 9 ದಿನಗಳಲ್ಲಿ ಮಗು ಚೇತರಿಸಿಕೊಂಡಿದೆ ಎಂದು ತಿಳಿಸಿದರು.
ಹೆಣ್ಣು ಮಗು 9 ನೇ ತಿಂಗಳಿನಿಂದ ದೇಹದ 4 ವಿವಿಧ ಭಾಗಗಳಾದ ಕಣ್ಣು, ತೊಡೆ ಮೂಳೆ, ಕರುಳು ಮತ್ತು ಶ್ವಾಸಕೋಶ ಕ್ಯಾನ್ಸರ್ ನಿಂದ ಬಳಲುತ್ತಿತ್ತು. ಮಧುರೈ ಅರವಿಂದ್ ಆಸ್ಪತ್ರೆ ಮತ್ತು ಹೈದರಾಬಾದ್ ದೃಷ್ಟಿ ಕೇಂದ್ರದಲ್ಲಿ ಕಣ್ಣಿನ ಅರ್ಬುದ ರೋಗಗಕ್ಕೆ ಚಿಕಿತ್ಸೆ ಪಡೆದಿತ್ತು. ತೊಡೆ ಮೂಳೆಯ ಅರ್ಬುದ ರೋಗಗಕ್ಕೆ ಕೊಚ್ಚಿಯ ಲೇಕ್ ಶೋರ್ ಆಸ್ಪತ್ರೆ ಮತ್ತು ಎಸ್.ಟಿ. ಆಸ್ಪತ್ರೆ ತಿರುವನಂತಪುರದಲ್ಲಿ ಚಿಕಿತ್ಸೆ ನೀಡಲಾಗಿದೆ. 2022 ರಲ್ಲಿ ಕೊಚ್ಚಿಯಲ್ಲಿ ಶ್ವಾಸಕೋಶದ (ಶಾಸಕೋಶಕ್ಕೆ ಹರಡುವಿಕೆಗೆ) ಚಿಕಿತ್ಸೆ ಹಾಗೂ 2023ರಲ್ಲಿ ತಿರುವನಂತಪುರದ ಸರಕಾರಿ ಕಾಲೇಜಿನಲ್ಲಿ ಕರುಳಿನ ಕ್ಯಾನ್ಸರ್ ಗೆ ಚಿಕಿತ್ಸೆ ಮಾಡಲಾಗಿದೆ. ನಂತರ ಮೈತ್ರಾ ಆಸ್ಪತ್ರೆ ಕ್ಯಾಲಿಕಟ್ನಲ್ಲಿ ಚಿಕಿತ್ಸೆ ಮುಂದುವರಿಸಲಾಗಿತ್ತು. ಈ ಸಮಯದಲ್ಲಿ ಮಗುವಿನ ಶ್ವಾಸಕೋಶದ ಕ್ಯಾನ್ಸರ್ ಮತ್ತೆ ಅಭಿವೃದ್ಧಿಗೊಂಡಿದ್ದು ಕಂಡುಬಂದಿತ್ತು ಎಂದು ತಿಳಿಸಿದರು.
ಹೆಚ್ಚಿನ ಶಸ್ತ್ರಚಿಕಿತ್ಸೆ ಅಗತ್ಯವಿದೆ ಎಂದು ಅಲ್ಲಿನ ವೈದ್ಯರು ಸೂಚಿಸಿದ್ದರು. ಮಗುವಿನ ಪ್ರಸಕ್ತ ರೋಗಸ್ಥಿತಿಯು ಅಪರೂಪದ ಪ್ರಕರಣವಾದ ಕಾರಣ ಭಾರತದಾದ್ಯಂತ 250ಕ್ಕೂ ಹೆಚ್ಚು ಆಸ್ಪತ್ರೆಗಳನ್ನು ಒಳಗೊಂಡಿರುವ ರಾಷ್ಟ್ರೀಯ ಕ್ಯಾನ್ಸರ್ ಗ್ರಿಡ್ ನಲ್ಲಿ ಮುಂದಿನ ಚಿಕಿತ್ಸೆ ಕುರಿತು ಚರ್ಚಿ ನಡೆಸಿತು. ಈ ಸಂದರ್ಭ ಮಗುವಿಗೆ ಶಸ್ತ್ರಚಿಕಿತ್ಸೆಯ ಅಗತ್ಯತೆಯನ್ನು ನಿರ್ಧರಿಸಲಾಯಿತು. ಆದರೆ ಶಸ್ತ್ರಚಿಕಿತ್ಸೆ ಅತ್ಯಂತ ಸಂಕೀರ್ಣ ಮತ್ತು ಕಷ್ಟಕರವಾಗಿರುವುದರಿಂದ ಟಾಟಾ ಮೆಮೋರಿಯಲ್ ಆಸ್ಪತ್ರೆ ಅಥವಾ ಮಂಗಳೂರಿನ ಯೆನೆಪೊಯ ವೈದ್ಯಕೀಯ ಕಾಲೇಜನ್ನು ಸಂಪರ್ಕಿಸಲು ಮಗುವಿನ ಪೋಷಕರಿಗೆ ಸೂಚಿಸಲಾಗಿತ್ತು ಎಂದರು.
ಅಂತೆಯೇ ರೋಗಿಯನ್ನು ಪರಿಶೀಲಿಸಿ ಪ್ರಕರಣವನ್ನು ಝುಲೇಖಾ ಯೆನೆಪೊಯ ಇನ್ಸ್ಟಿಟ್ಯೂಟ್ ಆಫ್ ಆಂಕಾಲಜಿ ಟ್ಯೂಮರ್ ಬೋರ್ಡ್ ನಲ್ಲಿ ಚರ್ಚಿಸಲಾಯಿತು. ಹಾಗೂ ಆಸ್ಪತ್ರೆಯಲ್ಲಿ ಅತ್ಯಅಧುನಿಕ ಸೌಕರ್ಯಗಳ ಲಭ್ಯತೆಯಿರುವುದರಿಂದ ಶಸ್ತ್ರಚಿಕಿತ್ಸೆಯನ್ನು ಇಲ್ಲಿ ನಡೆಸಲು ನಿರ್ಧರಿಸಲಾಯಿತು. ಅದರಂತೆ 10 ಗಂಟೆಗಳ ದೀರ್ಘ ಶಸ್ತ್ರಚಿಕಿತ್ಸೆ ಯಿಂದ ಶ್ಯಾಸಕೋಶ ಹಾಗೂ ಎರಡು ಪಕ್ಕೆಲುಬುಗಳಿದ್ದ ಕ್ಯಾನ್ಸರ್ ನ ಎಲ್ಲಾ ಗಡ್ಡೆಗಳನ್ನು ಹೊರತೆಗೆಯಲಾಗಿದೆ ಎಂದರು,
ಡಾ. ವಿಜಯಕುಮಾರ್ ಎಂ. ಮಾರ್ಗದರ್ಶನದಲ್ಲಿ ಡಾ.ಜಲಾಲುದ್ದೀನ್ ಅಕ್ಬರ್ ನೇತೃತ್ವದಲ್ಲಿ, ಡಾ.ರೋಹನ್ ಶೆಟ್ಟಿ, ಡಾ.ಎಚ್.ಟಿ.ಅಮರ್ ರಾವ್, ಡಾ.ನೂರ್ ಮುಹಮ್ಮದ್ ಅವರನ್ನೊಳಗೊಂಡ ಶಸ್ತ್ರಚಿಕಿತ್ಸಾ ತಂಡ ಹಾಗೂ ಅರಿವಳಿಕೆ ತಜ್ಞ ಡಾ.ತಿಪ್ಪೇಸ್ವಾಮಿ ನೇತೃತ್ವದಲ್ಲಿ ಡಾ.ಸಂದೇಶ್( ಪೀಡಿಯಾಟ್ರಿಕ್ ವಿಭಾಗ) ಡಾ. ಡಾ.ಆದರ್ಶ್, ಡಾ. ವಿನೀತ್ ಮಗುವಿನ ಶಸ್ತ್ರಚಿಕಿತ್ಸೆ ಹಾಗೂ ಶಸ್ತ್ರಚಿಕಿತ್ಸೆ ನಂತರದ ನಿರ್ವಹಣೆ ಮಾಡಿದೆ ಎಂದವರು ತಿಳಿಸಿದರು.
ಯೆನೆಪೊಯ ವೈದ್ಯಕೀಯ ಕಾಲೇಜು ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ.ಹಬೀಬ್ ರಹ್ಮಾನ್ ಎ.ಎ. ಮಾತನಾಡಿ, ಯೆನೆಪೊಯ ವೈದ್ಯಕೀಯ ಕಾಲೇಜು ಆಸ್ಪತ್ರೆ ಮತ್ತು ಝುಲೇಖಾ ಯೆನೆಪೊಯ ಆಂಕಾಲಜಿ ಸಂಸ್ಥೆಯು ಈ ರೀತಿಯ ಅಪರೂಪದ ಶಸ್ತ್ರಚಿಕಿತ್ಸೆ ಪ್ರಕರಣಗಳನ್ನು ಆಧುನಿಕ ಸೌಕರ್ಯಗಳ ಮತ್ತು ರೋಗನಿರ್ಣಯ ಸೇವೆಗಳು ಮತ್ತು ಸೌಲಭ್ಯಗಳ ಸಹಾಯದಿಂದ ನಿರ್ವಹಿಸುತ್ತಿದೆ ಎಂದರು.
ಡಾ.ಎಚ್.ಟಿ. ಅಮರ್ ರಾವ್, ಡಾ.ನೂರ್ ಮುಹಮ್ಮದ್ ,ಡಾ.ತಿಪ್ಪೇಸ್ವಾಮಿ, ಡಾ.ಸಂದೇಶ್, ಡಾ. ಡಾ.ಆದರ್ಶ್, ಡಾ.ವಿನೀತ್ ಇದ್ದರು.