ಹೊನ್ನಾವರ: ಸಾಮಾಜಿಕ ಹೋರಾಟಗಾರ ಅನಂತಮೂರ್ತಿ ಹೆಗಡೆ ಅವರ ನೇತೃತ್ವದಲ್ಲಿ ಕುಮಟಾದಲ್ಲಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಆಗ್ರಹಿಸಿ ನಡೆಯುತ್ತಿರುವ ಪಾದಯಾತ್ರೆ ಎರಡನೇ ದಿನ ಮಂಗಳವಾರ ಹೊನ್ನಾವರದಿಂದ ಆರಂಭವಾಗಿ ಸಂಜೆ ಹೊತ್ತಿಗೆ ಮುರುಡೇಶ್ವರ ತಲುಪಿದ್ದು, ದಾರಿಯುದ್ದಕ್ಕೂ ಅಪಾರ ಜನ ಬೆಂಬಲ ವ್ಯಕ್ತವಾಗಿದೆ. ಬುಧವಾರ ಭಟ್ಕಳ ತಲುಪಲಿದ್ದು, ಉಸ್ತುವಾರಿ ಸಚಿವ ಮಾಂಕಾಳ ವೈದ್ಯ ಅವರ ಕಚೇರಿಗೆ ತೆರಳಿ ಮನವಿ ಸಲ್ಲಿಸಲಿದ್ದಾರೆ.
ಸೋಮವಾರ ಕುಮಟಾ ಮಹಾಸತಿ ದೇವಾಲಯದಿಂದ ಆರಂಭವಾದ ಪಾದಯಾತ್ರೆಯೂ ಹೊನ್ನಾವರ ತಲುಪಿ ಮಂಗಳವಾರ ಬೆಳಿಗ್ಗೆ ಹೊನ್ನಾವರದಿಂದ ಆರಂಭವಾದ ಪಾದಯಾತ್ರೆಗೆ ಸ್ಥಳೀಯ ಬಿಜೆಪಿ ಯುವ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಕೃಷ್ಣ ಜೋಶಿ ಸಂಕೋಳ್ಳಿ, ಹಾಗೂ ಸಂದೀಪ್ ಪೂಜಾರಿ, ಸತ್ಯನಾರಾಯಣ ಶೇಟ್, ಅಶೋಕ ಜಾದೂಗಾರ, ಕಾಸರಕೋಡನ ಲೋಕೇಶ ಪಾಲೇಕರ್, ಗಜಾನನ ಕಾಸರಕೋಡ, ಗೋಪಾಲ ಕಾಸರಕೋಡ, ಪ್ರವೀಣ ಕಾಸರಕೋಡ, ನಾಗರಾಜ ಕಾಸರಕೋಡ, ರಾಜೇಶ ಕಾಸರಕೋಡ ಪಾದಯಾತ್ರೆಯನ್ನು ಕಾಸರಕೋಡನಲ್ಲಿ ಸ್ವಾಗತಿಸಿ ಬೆಂಬಲ ಸೂಚಿಸಿ ಪಾದಯಾತ್ರೆಯಲ್ಲಿ ಭಾಗಿಯಾದರು. ನಂತರ ಹಾಗೆ ಸಾಗಿದ ಪಾದಯಾತ್ರೆಗೆ ಮಾರ್ಗಮಧ್ಯ ಮಧ್ಯಪ್ರದೇಶದ ಉಜ್ಜಯಿನಿಯಿಂದ ಬಂದ ನಾಗಾ ಸಾಧುಗಳು ಪಾದಯಾತ್ರೆ ರೂವಾರಿ ಅನಂತಮೂರ್ತಿ ಅವರಿಗೆ ರುದ್ರಾಕ್ಷಿ ನೀಡಿ, ಆಸ್ಪತ್ರೆ ನಿರ್ಮಾಣ ಆಗುವುದು ನಿಶ್ಚಿತ ಎಂದು ಆಶೀರ್ವದಿಸಿದರು.
ನಂತರ ಮಧ್ಯಾಹ್ನ ಗುಣವಂತೆ ತಲುಪಿದ ಪಾದಯಾತ್ರೆಯನ್ನು ಸ್ಥಳೀಯ ನಾಗರೀಕರಾದ ಮಾಧವ ಪಂಡಿತ್, ಗೋವಿಂದ ಗೌಡ, ಎಂ.ಆರ್.ಹೆಗಡೆ, ರಾಮು ಪಿ. ನಾಯ್ಕ, ಶಿವಾನಂದ ಗೌಡ ಅವರು ಅದ್ದೂರಿ ಸ್ವಾಗತ ಕೋರಿ, ಜಿಲ್ಲೆಯ ಜನರಿಗಾಗಿ ತಾವು ಮಾಡುತ್ತಿರುವ ಪಾದಯಾತ್ರೆ ಪ್ರಶಂಸನೀಯ. ನಿಮ್ಮ ಈ ಪಾದಯಾತ್ರೆಗೆ ನಮ್ಮ ಬೆಂಬಲವಿದೆ ಹಾಗೂ ನಿಮ್ಮ ಉದ್ದೇಶಗಳು ಈಡೇರಲಿ ಎನ್ನುವ ಮಾತುಗಳನ್ನು ವ್ಯಕ್ತಪಡಿಸಿದರು. ನಂತರ ಪಾದಯಾತ್ರೆಯಲ್ಲಿ ಹೆಜ್ಜೆ ಹಾಕಿದರು. ನಂತರ ಮಂಕಿ ಮೂಲಕದ ಮುರುಡೇಶ್ವರ ತಲುಪಿ ಅಲ್ಲಿ ವಾಸ್ತವ್ಯ ಹೂಡಿದ್ದಾರೆ. ಪಾದಯಾತ್ರೆಯಲ್ಲಿ ರಾಜ್ಯ ಅನ್ನದಾತ ರೈತ ಸಂಘದ ರಾಜ್ಯಾಧ್ಯಕ್ಷ ಚಿದಾನಂದ ಹರಿಜನ, ಕರವೇ ಜನಧ್ವನಿಯ ಜಿಲ್ಲಾಧ್ಯಕ್ಷ ಉಮೇಶ ಹರಿಕಾಂತ, ಸಂತೋಷ ನಾಯ್ಕ ಬ್ಯಾಗದ್ದೆ, ಅಹೀಶ ಹೆಗಡೆ ಸೇರಿದಂತೆ ನೂರಾರು ಜನರು ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು.