ಮಂಗಳೂರು: ಕಾವ್ಯ ಮತ್ತು ಜೀವನ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಆದರೆ ವಿಚಾರ ಮತ್ತು ವಾಸ್ತವ ಯಾವತ್ತೂ ಭಿನ್ನಆಗಿರುತ್ತವೆ. ಈ ಭಿನ್ನತೆಯನ್ನು ಅರಿಯಲು ಕಾವ್ಯ ಸಹಕಾರಿ. ಆದುದ್ದರಿಂದ ಕಾವ್ಯವನ್ನು ಒಂದು ಶೋಧವೆಂದು ಪರಿಗಣಿಸಬಹುದು ಎಂದು ಖ್ಯಾತ ಕೊಂಕಣಿ ಕವಿ ಗೋವಾದ ನೂತನ್ ಸಾಖರ್ದಾಂಡೆ ಅಭಿಪ್ರಾಯಪಟ್ಟರು.
ಪುತ್ತೂರಿನ ಸಂತ ಫಿಲೋಮಿನಾ ಕಾಲೆಜಿನಲ್ಲಿ ನವದೆಹಲಿ ಸಾಹಿತ್ಯ ಅಕಾಡೆಮಿ ಹಮ್ಮಿಕೊಂಡಿದ್ದ ಕವಿಸಂಧಿ ಕಾರ್ಯಕ್ರಮದಲ್ಲಿ ಸ್ವರಚಿತ ಕವಿತೆಗಳನ್ನು ವಾಚಿಸಿ, ತಮ್ಮಅನುಭವ ಹಂಚಿಕೊಂಡರು.
“ಅಸ್ವಸ್ಥತೆ ಕಾಡದೇ ಕವಿಯಾಗುವುದು ಕಷ್ಟ. ಕವಿಗಳು ರಮ್ಯ ಲೋಕದ ಆಚೆ, ಸಾಮಾಜಿಕ ಅಸಮಾನತೆ, ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯ, ಪರಿಸರದ ಮೇಲಾಗುತ್ತಿರುವ ಹಾನಿ ಈ ವಿಚಾರಗಳ ಮೇಲೆ ಕಾವ್ಯ ಕಟ್ಟಬೇಕು. ಕಾವ್ಯದ ತೌಲಾನಿಕ ಅಧ್ಯಯನ ನಡೆಯಬೇಕು ಎಂದರು.
ಜನಪ್ರಿಯ ಕವಿತೆಗಳಾದ – ಪಾಸ್ವರ್ಡ್, ಸ್ಮಾರ್ಟ್ಪೋನ್, ಅಧೊಳಿ ಒಳಗೊಂಡಂತೆ ಒಟ್ಟು ಏಳು ಕವಿತೆಗಳನ್ನು ಅವರು ಸಾದರ ಪಡಿಸಿದರು.
ನವಹೆಹಲಿ ಸಾಹಿತ್ಯ ಅಕಾಡೆಮಿ ಕೊಂಕಣಿ ಭಾಷಾ ಸಲಹಾ ಸಮಿತಿ ಸಂಚಾಲಕ ಕವಿ ಮೆಲ್ವಿನ್ ರೊಡ್ರಿಗಸ್ ಪ್ರಾಸ್ತಾವಿಕ ಮಾತನಾಡಿ, ನೂತನ್ ಸಾಖರ್ದಾಂಡೆ ಅವರನ್ನು ಪರಿಚಯಿಸಿದರು. ಸಾಹಿತ್ಯ ಅಕಾಡೆಮಿ ಕೊಂಕಣಿ ಭಾಷಾ ಸಲಹಾ ಸಮಿತಿಯ ಸದಸ್ಯ ಹೆನ್ರಿ ಮೆಂಡೋನ್ಸಾ ನೆನಪಿನ ಕಾಣಿಕೆ ನೀಡಿ ಗೌರವಿಸಿದರು. ಸದಸ್ಯ ಸ್ಟ್ಯಾನಿ ಬೇಳ ವಂದಿಸಿದರು.