ಮಂಗಳೂರು: ಕರ್ನಾಟಕ ಕೊಂಕಣಿ ಭಾಶಾ ಮಂಡಳ್ ಸಂಘಟನೆ ಸುವರ್ಣ ಮಹೋತ್ಸವದ ನೆನಪಿಗಾಗಿ ಐದು ಮಂದಿ ಸಾಧಕರಿಗೆ ಪ್ರಶಸ್ತಿಗಳನ್ನು ಘೋಷಣೆ ಮಾಡಲಾಗಿದ್ದು, ಜ. 9 ರಂದು ಮಧ್ಯಾಹ್ನ 3 ಗಂಟೆಗೆ ಮಂಗಳೂರಿನ ಪುರಭವನದಲ್ಲಿ ನಡೆವ ಭಾಂಗಾರೋತ್ಸವ್ ಸಮಾರೋಪದಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ ಎಂದು ಭಾಶಾ ಮಂಡಳ್ ಅಧ್ಯಕ್ಷ ಕೆ. ವಸಂತ ರಾವ್ ತಿಳಿಸಿದರು.
ಕೊಂಕಣಿ ಭಾಷೆಗಾಗಿ ದುಡಿದ ರಾಮದಾಸ್ ಗುಲ್ವಾಡಿ ಅವರಿಗೆ ಜೀವಮಾನ ಪ್ರಶಸ್ತಿ, ನಾಟಿ ವೈದ್ಯೆ ಕಲ್ಯಾಣಿಬಾಯಿ ನೀರ್ಕೆರೆ ಅವರಿಗೆ ಜಾನಪದ ಪ್ರಶಸ್ತಿ, ಕೊಂಕಣಿ ವಾರಪತ್ರಿಕೆ ನಡೆಸುತ್ತಿರುವ ಸಾಗರದ ಅಪ್ಪುರಾಯ ಪೈ ಅವರಿಗೆ ಕೊಂಕಣಿ ಕಾರ್ಯಕರ್ತ ಪ್ರಶಸ್ತಿ, ಕೊಂಕಣಿ ಚಿತ್ರನಟ ಕ್ಲಾನ್ವಿನ್ ಫರ್ನಾಂಡಿಸ್ ಅವರಿಗೆ ಯುವ ಪ್ರಶಸ್ತಿ ಹಾಗೂ ಮೊದಲ ಕೊಂಕಣಿ ಕೃತಿ ಪ್ರಕಟಿಸಿದ ಕೃತಿಕಾ ಕಾಮತ್ ಅವರಿಗೆ ಪುಸ್ತಕ ಪ್ರಶಸ್ತಿ ಘೋಷಿಸಲಾಗಿದೆ. ಪ್ರಶಸ್ತಿಯು ಸ್ಮರಣಿಕೆ, ಶಾಲು, ಫಲಕಗಳನ್ನು ಒಳಗೊಂಡಿದೆ ಎಂದು ತಿಳಿಸಿದರು.
ಕೊಂಕಣಿ ಭಾಷೆಗಾಗಿ ದುಡಿಯುವ ರಾಜ್ಯದ ವಿವಿಧ ಭಾಗಗಳ 50 ಕೊಂಕಣಿ ಭಾಷಿಕರನ್ನು ಕೂಡ ಸಮಾರೋಪದಲ್ಲಿ ಸನ್ಮಾನಿಸಲಾಗುವುದು. ಕೆಪಿಎಸ್ಸಿ ಸದಸ್ಯ ರೊನಾಲ್ಡ್ ಫರ್ನಾಂಡಿಸ್, ಕೊಂಕಣಿ ಭಾಶಾ ಮಂಡಳ್ ಸ್ಥಾಪಕ ಖಜಾಂಚಿ ಮಾರ್ಕ್ ವಾಲ್ಡರ್, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ರಿಜಿಸ್ಟ್ರಾರ್ ಮನೋಹರ ಕಾಮತ್, ಉದ್ಯಮಿ ಪ್ರಶಾಂತ್ ಶೇಟ್ ಪಾಲ್ಗೊಳ್ಳಲಿದ್ದಾರೆ ಎಂದರು.
ಕಾರ್ಯದರ್ಶಿ ರೇಮಂಡ್ ಡಿಕೂನಾ ತಾಕೊಡೆ, ಅರವಿಂದ ಶಾನುಭಾಗ್, ಪ್ರಶಾಂತ್ ಶೇಟ್, ಖಜಾಂಚಿ ಸುರೇಶ್ ಶೆಣೈ, ಉಪಾಧ್ಯಕ್ಷ ರತ್ನಾಕರ ಕುಡ್ವ, ಜೂಲಿಯೆಟ್ ಫರ್ನಾಂಡಿಸ್ ಇದ್ದರು.