ಕಾರವಾರ: 1971 ರ ಯುದ್ಧದಲ್ಲಿ ಪಾಕಿಸ್ತಾನದಿಂದ ಬಾಂಗ್ಲಾದೇಶವನ್ನು ವಿಮೋಚನೆ ಮಾಡುವಲ್ಲಿ ಭಾರತೀಯ ಯೋಧರ ಕೊಡುಗೆ ಅಪಾರ. ಯೋಧರ ತ್ಯಾಗ ಬಲಿದಾನ ಯವ ಪೀಳಿಗೆಗೆ ಸ್ಫೂರ್ತಿದಾಯಕ ಎಂದು ಶಾಸಕ ಸತೀಶ ಸೈಲ್ ಹೇಳಿದರು.
ಜಿಲ್ಲಾಡಳಿತದಿಂದ ವಿಜಯ ದಿವಸ ಕಾರ್ಯಕ್ರಮ ಟ್ಯಾಗೋರ್ ಕಡಲ ತೀರದಲ್ಲಿರುವ ಯುದ್ಧ ನೌಕಾ ವಸ್ತು ಸಂಗ್ರಾಹಾಲಯದ ಆವರಣದಲ್ಲಿ ಜರುಗಿತು.
ಜಿಲ್ಲೆಯ ಮಣ್ಣಿನ ಮಗ ರಾಮಾ ರಘೋಬಾ ರಾಣೆ ಜೀವಂತ ಇರುವಾಗಲೇ ಪರಮವೀರ ಚಕ್ರ ಸ್ವೀಕರಿಸಿದ ಮೊದಲಿಗರು. ಜಿಲ್ಲೆಯ ಯವ ಪೀಳಿಗೆಯಲ್ಲಿ ಸೈನ್ಯಕ್ಕೆ ಸೇರಲು ಬೇಕಾದ ಎಲ್ಲಾ ಅಗತ್ಯ ಅರ್ಹತೆ ಗಳು ಇದ್ದು, ಹೆಚ್ಚಿನ ಸಂಖ್ಯೆಯಲ್ಲಿ ಸೇನೆಗೆ ಸೇರ್ಪಡೆಯಾಗಿ, ದೇಶ ಸೇವೆ ಸಲ್ಲಿಸಬೇಕು ಎಂದರು.
ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಅವರು ಮಾತನಾಡಿ, 1971 ರಲ್ಲಿ ನಡೆದ ಯುದ್ಧದಲ್ಲಿ ಸಾವಿರಾರು ಯೋಧರು ದೇಶಕ್ಕಾಗಿ ತಮ್ಮ ಜೀವವನ್ನೇ ಬಲಿದಾನ ಮಾಡಿದ್ದಾರೆ. ಅವರ ತ್ಯಾಗ, ಧೈರ್ಯ, ಶೌರ್ಯವನ್ನು ನಾವು ಸ್ಮರಿಸಬೇಕು ಎಂದರು.
ನೌಕಾನೆಲೆ ತರಬೇತಿ ತಂಡದ ಕ್ಯಾಪ್ಟನ್ ಕೆ. ಯು. ಸಿಂಗ್ ಮಾತನಾಡಿ, ಯುವ ಜನತೆ ಕೇವಲ ಸರ್ಕಾರಿ ಉದ್ಯೋಗ ಪಡೆಯಲು ಮಾತ್ರ ಯೋಚಿಸದೆ ದೇಶದ ಸೇವೆ ಸಲ್ಲಿಸಲು ಸ್ಪರ್ಧಾತ್ಮಕ ರೀತಿಯಲ್ಲಿ ಪ್ರಯತ್ನಪಟ್ಟಾಗ ಯಶಸ್ವಿಯಾಗಿ ಸೇನೆ ಸೇರಬಹುದು ಎಂದರು.
ಜಿಲ್ಲಾ ಸೈನಿಕ ಮಂಡಳಿಯ ಉಪಾಧ್ಯಕ್ಷ ನಿವೃತ್ತ ಸ್ಕ್ವಾಡ್ ಲೀಡರ್ ಎಸ್.ಎಫ್ ಗಾಂವಕರ ಮಾತನಾಡಿದರು. ಯುದ್ದದಲ್ಲಿ ಬಲಿದಾನ ಮಾಡಿದ ಯೋಧರ ಅವಲಂಭಿತರಿಗೆ ಸನ್ಮಾನ ಮಾಡಲಾಯಿತು ಹಾಗೂ ಜಿಲ್ಲಾಧಿಕಾರಿ ಸಶಸ್ತ್ರ ಪಡೆಗಳ ಧ್ವಜ ಬಿಡುಗಡೆ ಮಾಡಿದರು.
ಐಎನ್ಎಸ್ ಕದಂಬ ನೌಕಾನೆಲೆಯ ಬ್ಯಾಂಡ್ ಸಿಬ್ಬಂದಿ ನೇತೃತ್ವದ ತಂಡ ವಾದ್ಯದೊಂದಿಗೆ ಗೌರವ ನಮನ ಸಲ್ಲಿಸಿದರು. ಮಾಜಿ ಸೈನಿಕರು, ಎನ್ಸಿಸಿ ವಿದ್ಯಾರ್ಥಿಗಳು, ಕಾಲೇಜು ವಿದ್ಯಾರ್ಥಿಗಳು ಇತರರು ಉಪಸ್ಥಿತರಿದ್ದರು.
ಯುದ್ಧ ನೌಕಾ ವಸ್ತು ಸಂಗ್ರಹಾಲಯದ ಆವರಣದಲ್ಲಿರುವ ಪರಮವೀರ ಚಕ್ರ ಮೇಜರ್ ರಾಮ ರಘೋಬಾ ರಾಣೆ ಅವರ ಪುತ್ಥಳಿಗೆ ಗೌರವ ನಮನ ಸಲ್ಲಿಸಲಾಯಿತು.
ಹೆಚ್ಚುವರಿ ಜಿಲ್ಲಾಧಿಕಾರಿ ಪ್ರಕಾಶ ರಜಪೂತ್, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಉಪ ನಿರ್ದೇಶಕ ಡಾ. ಕ್ಯಾ. ರಮೇಶ ರಾವ್, ತಹಶೀಲ್ದಾರ ನಿಶ್ಚಲ್ ನರೋನಾ, ಪೌರಾಯುಕ್ತ ಚಂದ್ರಮೌಳಿ ಇದ್ದರು.