ಮಂಗಳೂರು: ದ.ಕ. ಜಿಲ್ಲಾ ನಿವೃತ್ತ ಸೈನಿಕರ ಸಂಘದ ವತಿಯಿಂದ ಇದೇ 16 ರಂದು ಬೆಳಿಗ್ಗೆ 8.30 ಕ್ಕೆ ನಗರದ ಕದ್ರಿ ಹಿಲ್ಸ್ನಲ್ಲಿರುವ ಯೋಧರ ಯುದ್ಧ ಸ್ಮಾರಕದಲ್ಲಿ ಪುಷ್ಪ ಗುಚ್ಚಗಳನ್ನು ಸಮರ್ಪಿಸಿ ಪ್ರಾರ್ಥನೆ ಸಲ್ಲಿಸಿ ವಿಜಯ ದಿವಸ್ ಆಚರಿಸಲಾಗುವುದು ಎಂದು ಸಂಘದ ಕಾರ್ಯದರ್ಶಿ ಕ್ಯಾ. ದೀಪಕ್ ಅಡ್ಯಂತಾಯ ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
1971 ರಲ್ಲಿ ಪಾಕಿಸ್ಥಾನದ ವಿರುದ್ಧ ಭಾರತವು ವಿಜಯ ಸಾಧಿಸಿದ ಸ್ಮರಣಾರ್ಥ ಯುದ್ಧದಲ್ಲಿ ಭಾರತೀಯ ವೀರ ಯೋಧರು ಮಾಡಿದ ತ್ಯಾಗ ಮತ್ತು ಬಲಿದಾನ ನೆನಪಿಸುವ ಹಾಗೂ ಯುವ ಸಮಾಜಕ್ಕೆ ಸೈನಿಕರ ರಾಷ್ಟ್ರಭಕ್ತಿಯ ಸಮರ್ಪಣಾ ಮನೋಭಾವದ ಬಗ್ಗೆ ಸ್ಫೂರ್ತಿ ತುಂಬಲು ಕಾರ್ಯಕ್ರಮ ಆಯೋಜಿಸಲಾಗುತ್ತಿದೆ ಎಂದರು.
ಡಿಜಿ ಎನ್ಸಿಸಿ ವತಿಯಿಂದ ‘ಜಾದಿ ಕಾ ಅಮೃತ ಮಹೋತ್ಸವ’ ಅಂಗವಾಗಿ ನಾರಿ ಶಕ್ತಿ ಆಚರಿಸಲು ಕನ್ಯಾಕುಮಾರಿಯಿಂದ ನವದೆಹಲಿಯವರೆಗೆ ಅಖಿಲ ಭಾರತ ಎನ್ಸಿಸಿ ಬಾಲಕಿಯರ ಮೆಗಾ ಸೈಕಲ್ ರಾಲಿ ಆಯೋಜಿಸಲಾಗಿದೆ. ಈ ರಾಲಿಗೆ ಡಿ. 8 ರಂದು ಕನ್ಯಾಕುಮಾರಿಯಲ್ಲಿ ಚಾಲನೆ ನೀಡಲಾಗಿದೆ. ಡಿ.16 ರಂದು ಮಧ್ಯಾಹ್ನ 12ಕ್ಕೆ ರಾಜ್ಯದ ಗಡಿ ಪ್ರದೇಶ ತಲಪಾಡಿ ಮೂಲಕ ಕರ್ನಾಟಕ ಪ್ರವೇಶಿಸಲಿದೆ ಎಂದು ಎನ್ಸಿಸಿ ಸರ್ವಿಂಗ್ ಆಫೀಸರ್ ಲೆಫ್ಟಿನೆಂಟ್ ಕರ್ನಲ್ ಗ್ರೇಶಿಯನ್ ಸಿಕ್ವೇರಾ ತಿಳಿಸಿದರು.
ರಾಲಿಯು ಮಂಗಳೂರು ಕೆಪಿಟಿ ಸಮೀಪದ ಯುದ್ಧ ಸ್ಮಾರಕ ತಲುಪಲಿದ್ದು, ಎನ್ಸಿಸಿ ಕಮಾಂಡರ್ ಕರ್ನಲ್ ಎನ್.ಕೆ. ಭಗಾಸ್ರ ಅವರಿಂದ ಧ್ವಜಾರೋಹಣ ನಡೆಯಲಿದೆ. ಬ್ರಿಗೇಡಿಯರ್ ಐ.ಎನ್.ರೈ ಚಾಲನೆ ನೀಡಲಿದ್ದಾರೆ. ಡಿ.17 ರಂದು ಕೆಪಿಟಿ ಯುದ್ಧ ಸ್ಮಾರಕದಿಂದ ಸೈಕಲ್ ರಾಲಿಯು ಪ್ರಯಾಣ ಮುಂದುವರಿಸಲಿದ್ದು, ಉಡುಪಿ ಮಾರ್ಗವಾಗಿ ಹೊನ್ನಾವರ ಕಡೆಗೆ ಸಂಚರಿಸಲಿದೆ. ಸೈಕಲ್ ರ್ಯಾಲಿಯಲ್ಲಿ ಗುಜರಾತ್ನ ಎನ್ಸಿಸಿ ಬಾಲಕಿಯರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.