ಮೈಸೂರು: ಹೆಣ್ಣು ಭ್ರೂಣ ಹತ್ಯೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರು ತಾಲ್ಲೂಕು ವೈದ್ಯಾಧಿಕಾರಿ ಡಾ. ರಾಜೇಶ್ವರಿ ಮತ್ತು ಈ ಹಿಂದೆ ಮೈಸೂರು ಡಿಎಚ್ಓ ಆಗಿದ್ದ ಡಾ. ರವಿ ಅವರ ಕರ್ತವ್ಯ ಲೋಪ ಎದ್ದು ಕಾಣುತ್ತಿದ್ದು, ಇಬ್ಬರನ್ನೂ ಅಮಾನತು ಮಾಡುವಂತೆ ಆದೇಶ ನೀಡಲಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ಮೈಸೂರಿನಲ್ಲಿ ಗುರುವಾರ ಮಾಧ್ಯಮದವರ ಜತೆಗೆ ಮಾತನಾಡಿದ ಅವರು, ಭ್ರೂಣ ಹತ್ಯೆ ಪ್ರಕರಣದಲ್ಲಿ ಆರೋಗ್ಯ ಇಲಾಖೆ ಹಲವು ಅಧಿಕಾರಿಗಳ ಲೋಪ ಎದ್ದು ಕಾಣುತ್ತಿದೆ. ಇದನ್ನು ಸರಕಾರ ಹಾಗೂ ಆರೋಗ್ಯ ಇಲಾಖೆ ಗಂಭೀರವಾಗಿ ತೆಗೆದುಕೊಂಡಿದೆ. ಹತ್ಯೆಯ ಜಾಲ ಪತ್ತೆ ಹಚ್ಚಲು ಸೂಕ್ತ ತನಿಖೆ ಅಗತ್ಯ ಆಗಿದ್ದು, ಗೃಹ ಸಚಿವರು ಹಾಗೂ ಮುಖ್ಯಮಂತ್ರಿ ಜತೆ ಮಾತನಾಡಿದ್ದೇನೆ. ಯಾವ ರೀತಿಯ ತನಿಖೆ ನಡೆಸಬೇಕು ಎಂಬುದರ ಬಗ್ಗೆ ಸಿಎಂ ನಿರ್ಧರಿಸಲಿದ್ದಾರೆ ಭ್ರೂಣ ಹತ್ಯೆ ಸಾಮಾಜಿಕ ಪಿಡುಗು. ನಮ್ಮ ಸಮಾಜ ಕೂಡ ಬದಲಾಗಬೇಕು ಎಂದರು.
ಭ್ರೂಣ ಹತ್ಯೆಯ ಕೇಂದ್ರ ಬಿಂದು ಎನಿಸಿದ್ದ ಮೈಸೂರಿನ ಮಾತಾ ಆಸ್ಪತ್ರೆ ಬಳಿಗೂ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ತಪ್ಪು ಮಾಹಿತಿ ನೀಡಿದ ಮೈಸೂರು ತಾಲ್ಲೂಕು ವೈದ್ಯಾಧಿಕಾರಿ ತರಾಟೆಗೆ ತೆಗೆದುಕೊಂಡರು.
ಎಷ್ಟು ವರ್ಷದಿಂದ ಈ ಆಸ್ಪತ್ರೆ ನಡೀತಿದೆ? ಭ್ರೂಣ ಹತ್ಯೆ ನಡೆಯುತ್ತಿರುವುದು ಏಕೆ ನಿಮ್ಮ ಗಮನಕ್ಕೆ ಬಂದಿಲ್ಲವೇ ಎಂದು ಸಚಿವರು ಕೇಳಿದಾಗ ಎರಡು ವರ್ಷದಿಂದ ಈ ಆಸ್ಪತ್ರೆಯೇ ಇರಲಿಲ್ಲ ಮುಚ್ಚಿತ್ತು ಎಂದು ತಾಲ್ಲೂಕು ವೈದ್ಯಾಧಿಕಾರಿ ತಪ್ಪು ಮಾಹಿತಿ ನೀಡಿದಾಗ ಸ್ಥಳೀಯರಿಂದ ಸಚಿವರು ಮಾಹಿತಿ ಪಡೆದು ಮೂರು ತಿಂಗಳಿಂದ ಆಸ್ಪತ್ರೆ ಮುಚ್ಚಿದೆ. ಮೊದಲು ನಡೆಯುತ್ತಿತ್ತು ಎಂಬ ಮಾಹಿತಿ ಪಡೆದು ಆರೋಗ್ಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.