ಒಡಿಶಾ: ವಿಷಪೂರಿತ ಹಾವನ್ನು ಪತ್ನಿ ಹಾಗೂ ಪುತ್ರಿ ಮಲಗಿದ್ದ ಕೋಣೆಗೆ ಬಿಟ್ಟು ಕೊಂದ ಆರೋಪದಲ್ಲಿ 25 ವರ್ಷದ ಕೆ. ಗಣೇಶ್ ಪಾತ್ರ ಎಂಬ ವ್ಯಕ್ತಿಯನ್ನು ಒಡಿಶಾ ಗಂಜಂ ಜಿಲ್ಲೆಯ ಅಧೇಯಿಗಾಂವ್ ನಿಂದ ಬಂಧನ ಮಾಡಲಾಗಿದೆ.
ಬೆಹ್ರಾಂಪುರದಿಂದ 60 ಕಿಲೋ ಮೀಟರ್ ದೂರದ ಕಬಿಸೂರ್ಯಾ ನಗರ್ ಪೊಲೀಸ್ ಠಾಣೆ ವ್ಯಾಪ್ತಿಯ ಅಧೇಯಿಗಾಂವ್ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಪತಿ ಗಣೇಶ್ ಪಾತ್ರಗೆ ತನ್ನ ಪತ್ನಿ ಕೆ.ಬಸಂತಿ ಪಾತ್ರಾ (23) ಅವರ ಜತೆಗೆ ಮನಸ್ತಾಪ ಎಂದು ಹೇಳಲಾಗಿದ್ದು, 2020 ರಲ್ಲಿ ವಿವಾಹವಾಗಿದ್ದ ಈ ದಂಪತಿಗೆ ದೇಬಸ್ಮಿತ ಎಂಬ ಎರಡು ವರ್ಷದ ಮಗಳು ಇದ್ದಳು.
ಹಾವಾಡಿರೊಬ್ಬರಿಂದ ಧಾರ್ಮಿಕ ಕಾರ್ಯಕ್ಕಾಗಿ ಎಂದು ಸುಳ್ಳು ಹೇಳಿ ಹಾವು ಖರೀದಿಸಿದ್ದ ಆರೋಪಿ ಪತ್ನಿ ಹಾಗೂ ಪುತ್ರಿ ಮಲಗಿದ್ದ ಕೋಣೆಗೆ ಹಾವು ಬಿಟ್ಟಿದ್ದಾನೆ. ಮರು ದಿನ ಬೆಳಿಗ್ಗೆ ಹಾವು ಕಡಿತದಿಂದ ಇಬ್ಬರೂ ಮೃತಪಟ್ಟಿರುವುದು ಕಂಡು ಬಂದಿದೆ. ಆರೋಪಿ ಘಟನೆಯ ದಿನ ಬೇರೊಂದು ಕೋಣೆಯಲ್ಲಿ ನಿದ್ದೆ ಮಾಡುತ್ತಿದ್ದ ಎಂದು ತಿಳಿದು ಬಂದಿದೆ. ಪೊಲೀಸರು ಅಸಹಜ ಸಾವಿನ ಪ್ರಕರಣ ದಾಖಲಿಸಿಕೊಂಡಿದ್ದರು. ಆದರೆ ಮಾವ ತನ್ನ ಪುತ್ರಿ ಹಾಗೂ ಮೊಮ್ಮಗಳನ್ನು ತನ್ನ ಅಳಿಯ ಹತ್ಯೆ ಮಾಡಿದ್ದಾನೆ ಎಂದು ದೂರು ನೀಡಿದಾಗ, ಆತನನ್ನು ವಿಚಾರಣೆಗೆ ಒಳಪಡಿಸಲಾಯಿತು. ಈ ವೇಳೆ ಸತ್ಯ ತಿಳಿದು ಬಂದಿದೆ ಎಂದು ಗಂಜಂ ಪೊಲೀಸ್ ವರಿಷ್ಠಾಧಿಕಾರಿ ಜಗಮೋಹನ್ ಮೀನಾ ತಿಳಿಸಿದ್ದಾರೆ.