ಮಂಗಳೂರು: ಎಮ್ಮೆಕೆರೆಯಲ್ಲಿ ಅಂತರ ರಾಷ್ಟ್ರ ಮಟ್ಟದ ಈಜುಕೊಳ ಇದೇ 24 ರಂದು ಉದ್ಘಾಟನೆಯಾಗಲಿದ್ದು, ಸ್ಥಳೀಯರ ಬೇಡಿಕೆಯಂತೆ ಈಜುಕೊಳದ ಸಮೀಪದ ಮೈದಾನದಲ್ಲಿ 2 ಕೋಟಿ ರೂಪಾಯಿ ವೆಚ್ಚದಲ್ಲಿ ಅಗತ್ಯ ಕಾಮಗಾರಿಗಳನ್ನು ಸ್ಮಾರ್ಟ್ ಸಿಟಿ ಯೋಜನೆ ಅಡಿ ನಡೆಸಲಾಗುವುದು ಎಂದು ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ತಿಳಿಸಿದರು.
ಎಮ್ಮೆಕೆರೆ ಈಜುಕೊಳಕ್ಕೆ ಸೋಮವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, ಬಳಿಕ ಪತ್ರಕರ್ತರ ಜತೆಗೆ ಮಾತನಾಡಿದರು.
ಮಂಗಳೂರು ಮಹಾನಗರ ಪಾಲಿಕೆಯ ಸ್ಮಾರ್ಟ್ ಸಿಟಿ ಎಮ್ಮೆಕೆರೆ ಪ್ರದೇಶದಲ್ಲಿ 24.94 ಕೋಟಿ ರೂಪಾಯಿ ವೆಚ್ಚದಲ್ಲಿ ಅಂತರ ರಾಷ್ಟ್ರೀಯ ಮಟ್ಟದ ಈಜುಕೊಳ ನಿರ್ಮಾಣವಾಗಿದೆ. ಸ್ಥಳೀಯ ಶಾಸಕರಾದ ವೇದವ್ಯಾಸ ಕಾಮತ್ ಅವರ ಅಧ್ಯಕ್ಷತೆಯಲ್ಲಿ ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವ ಸುರೇಶ್, ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಮೊದಲಾವರು ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು, ಅದೇ ದಿನ ರಾಷ್ಟ್ರ ಮಟ್ಟದ ಮಾಸ್ಟರ್ಸ್ ಈಜು ಸ್ಪರ್ಧೆಗೆ ಚಾಲನೆ ಸಿಗಲಿದೆ. ಈ ನಿಟ್ಟಿನಲ್ಲಿ ಸಿದ್ಧತೆಗಳ ಕುರಿತಂತೆ ಪರಿಶೀಲನೆ ನಡೆಸಲಾಗಿದೆ ಎಂದರು.
ಇಲ್ಲಿ ಹಲವು ಸ್ಥಳೀಯರ ಸಮಸ್ಯೆಗಳು ಪರಿಹಾರ ಆಗಬೇಕಾಗಿದೆ. ಇದು ಸಾರ್ವಜನಿಕ ಆಟದ ಮೈದಾನ ಅಗಿರುವುದರಿಂದ ಇಲ್ಲಿ ಲೈಟ್ ಅಳವಡಿಕೆ, ಮೈದಾನವನ್ನು ಸಮತಟ್ಟುಗೊಳಿಸುವುದು, ಗ್ಯಾಲರಿ ನಿರ್ಮಾಣ ಕಾರ್ಯಕ್ಕಾಗಿ ಸ್ಥಳೀಯರು ಮನವಿ ಮಾಡಿದ್ದು, ಸ್ಮಾರ್ಟ್ ಸಿಟಿ ಯೋಜನೆ ಅಡಿ 2 ಕೋಟಿ ರೂಪಾಯಿ ವೆಚ್ಚದಲ್ಲಿ ಕಾಮಗಾರಿ ನಡೆಸಲಾಗುವುದು. ಪಾಲಿಕೆಯ ನೇತೃತ್ವದಲ್ಲಿ ಸಮಿತಿ ಮಾಡಿಕೊಂಡು ಮುಂದಿನ ಯೋಜನೆ ರೂಪಿಸಲಾಗುವುದು ಎಂದು ತಿಳಿಸಿದರು.
ಪಾಲಿಕೆ ಮುಖ್ಯ ಸಚೇತಕ ಹಾಗೂ ಮಾಜಿ ಮೇಯರ್ ಪ್ರೇಮಾನಂದ ಶೆಟ್ಟಿ, ಸ್ಥಳೀಯ ಸದಸ್ಯೆ ರೇವತಿ, ಸ್ಥಾಯಿ ಸಮಿತಿ ಅಧ್ಯಕ್ಷ ಲೋಹಿತ್ ಅಮೀನ್ ಇದ್ದರು.