ಉಡುಪಿ: ಕಾಪು ತಾಲೂಕಿನ ಎಲ್ಲೂರು ಗ್ರಾಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಅದಾನಿ ಸಮೂಹದ ಅದಾನಿ ಪವರ್ ಲಿಮಿಟೆಡ್ – ಉಡುಪಿ ಟಿಪಿಪಿ ಸಂಸ್ಥೆಯು ತನ್ನ ಸಿಎಸ್ಆರ್ ಯೋಜನೆಯನ್ನು ಕಾರ್ಯರೂಪಕ್ಕೆ ತರುತ್ತಿರುವ ಅಂಗ ಸಂಸ್ಥೆ ಅದಾನಿ ಫೌಂಡೇಷನ್ ವತಿಯಿಂದ ಕಾಪು ತಾಲೂಕಿನ ಪಡುಬಿದ್ರಿ ಗ್ರಾಮ ಪಂಚಾಯಿತಿ ವಾಪ್ತಿಯಲ್ಲಿ ಸಿಎಸ್ಆರ್ ಯೋಜನೆಯ ಅಡಿಯಲ್ಲಿ ಪೂರ್ಣಗೊಳಿಸಿದ ಕಾಮಗಾರಿಗಳನ್ನು ಉದ್ಘಾಟಿಸಿ ಸಾರ್ವಜನಿಕರ ಉಪಯೋಗಕ್ಕೆ ನೀಡಲಾಯಿತು. ಈ ಯೋಜನೆ ಅಡಿಯಲ್ಲಿ ಸಾರ್ವಜನಿಕ ಶೌಚಾಲಯದ ನವೀಕರಣ ಹಾಗೂ ಸ್ಮಶಾನ ಭೂಮಿಯ ನವೀಕರಣ ಕಾಮಗಾರಿಗಳು ಒಳಗೊಂಡಿದ್ದವು.
ಪಡುಬಿದ್ರಿ ಪೇಟೆಯಲ್ಲಿ ಇರುವ ಸಾರ್ವಜನಿಕ ಶೌಚಾಲಯ ದು:ಸ್ಥಿತಿಯಲ್ಲಿ ಇದ್ದರಿಂದ ಸಾರ್ವಜನಿಕರ ಉಪಯೋಗಕ್ಕೆ ಕಷ್ಟಕರವಾಗಿತ್ತು. ಆದುದ್ದರಿಂದ ಪಡುಬಿದ್ರಿ ಗ್ರಾಮ ಪಂಚಾಯಿತಿ ಎಲ್ಲಾ ಸದಸ್ಯರು ಪಂಚಾಯಿತಿ ಸಭೆಯಲ್ಲಿ ನಿರ್ಣಯಿಸಿ ಅದಾನಿ ಫೌಂಡೇಷನ್ ಪ್ರತಿ ವಾರ್ಷಿಕ ಸಾಲಿನಲ್ಲಿ ಸಿಎಸ್ಆರ್ ಯೋಜನೆಯಲ್ಲಿ ಅನುಷ್ಠಾನಗೊಳಿಸುವ ಗ್ರಾಮಾಭಿವೃದ್ಧಿ ಕೆಲಸಗಳಲ್ಲಿ ಸಾರ್ವಜನಿಕ ಶೌಚಾಲಯದ ನವೀಕರಣ ಕಾಮಗಾರಿಯನ್ನು ಪಂಚಾಯಿತಿ ಕ್ರಿಯಾ ಯೋಜನೆಯಲ್ಲಿ ಅಳವಡಿಸಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲು ಮನವಿ ಮಾಡಿದ ಹಿನ್ನಲೆಯಲ್ಲಿ ಅದಾನಿ ಫೌಂಡೇಷನ್ ರೂಪಾಯಿ 8 ಲಕ್ಷ ವೆಚ್ಚದಲ್ಲಿ ಸಾರ್ವಜನಿಕ ಶೌಚಾಲಯವನ್ನು ನವೀಕರಿಸಿದೆ.
ಪಡುಬಿದ್ರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಂಚಿನಡ್ಕ ಗ್ರಾಮದ ಬಳಿ ಇರುವ ಸ್ಮಶಾನ ಭೂಮಿಯಲ್ಲಿ ಕೂಡ ಅಭಿವೃದ್ಧಿ ಕೆಲಸಗಳ ಅವಶ್ಯಕತೆ ಗುರುತಿಸಿ ಸ್ಮಶಾನ ಭೂಮಿ ನವೀಕರಿಸಲು ಮನವಿ ಮಾಡಿಕೊಂಡಿದ್ದರಿಂದ ಅದಾನಿ ಫೌಂಡೇಷನ್ ರೂ. 6 ಲಕ್ಷದ ವೆಚ್ಚದಲ್ಲಿ ನವೀಕರಣ ಕಾಮಗಾರಿಗಳನ್ನು ನಿರ್ವಹಿಸಿದೆ. ಅದಾನಿ ಸಮೂಹದ ಕಾರ್ಯನಿರ್ವಾಹಕ ನಿರ್ದೇಶಕ ಹಾಗೂ ಅಧ್ಯಕ್ಷ ಕಿಶೋರ್ ಆಳ್ವ ಹಾಗೂ ಪಡುಬಿದ್ರಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಶಿಕಲಾ ಅವರು ಉದ್ಘಾಟಿಸಿದರು.
ಅದಾನಿ ಸಮೂಹದ ಅಧ್ಯಕ್ಷ ಕಿಶೋರ್ ಆಳ್ವ ಅವರು ಮಾತನಾಡಿ, ಅದಾನಿ ಫೌಂಡೇಷನ್ನ ಅಡಿಯಲ್ಲಿ ಉಡುಪಿ ಉಷ್ಣ ವಿದ್ಯುತ್ ಸ್ಥಾವರದ ಸುತ್ತಲಿನ 7 ಗ್ರಾಮ ಪಂಚಾಯಿತಿಗೆ ಮೂಲ ಸೌಕರ್ಯ ಅಭಿವೃದ್ಧಿಗೆ ಸಿಎಸ್ಆರ್ ಯೋಜನೆಯಲ್ಲಿ ಪ್ರತ್ಯೇಕ ಅನುದಾನ ಮೀಸಲಿಟ್ಟಿದ್ದು, ಆಯಾ ಗ್ರಾಮ ಪಂಚಾಯಿತಿ ನೀಡುವ ಕ್ರಿಯಾಯೋಜನೆ ಮೇರೆಗೆ ಅಭಿವೃದ್ಧಿ ಹೊಂದಬೇಕಾದ ಕಾಮಗಾರಿಗಳನ್ನು ಅನುಷ್ಠಾನಗೊಳಿಸುತ್ತಿದೆ. ಸ್ಥಾವರವು ಅದಾನಿ ಸಮೂಹದ ತೆಕ್ಕೆಗೆ ಬಂದ ಮೇಲೆ ಪಡುಬಿದ್ರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 1.55 ಕೋಟಿಯಷ್ಟು ಅಭಿವೃದ್ಧಿ ಕೆಲಸಗಳನ್ನು ಪೂರ್ಣಗೊಳಿಸಿದೆ ಎಂದು ಹೇಳಿದರು.
ಪಡುಬಿದ್ರಿ ಗ್ರಾ.ಪಂ. ಅಧ್ಯಕ್ಷೆ ಶಶಿಕಲಾ ಅವರು ಮಾತನಾಡಿ, ಅದಾನಿ ಸಿಎಸ್ಆರ್ ಅನುದಾನಕ್ಕೆ ಅಭಿನಂದಿಸಿ ಅದಾನಿ ಸಂಸ್ಥೆಯು ಸುತ್ತಲಿನ ಗ್ರಾಮಸ್ಥರಿಗೆ ವರದಾನವಾಗಿದೆ ಎಂದರು.
ಉಪಾಧ್ಯಕ್ಷ ಹೇಮಚಂದ್ರ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮಂಜುನಾಥ ಹಾಗೂ ಪಂಚಾಯಿತಿ ಸದಸ್ಯರು, ಅದಾನಿ ಸಂಸ್ಥೆಯ ಎಜಿಎಂ ರವಿ ಆರ್. ಜೇರೆ, ಅದಾನಿ ಫೌಂಡೇಷನ್ ಅನುದೀಪ್ ಪೂಜಾರಿ ಇದ್ದರು.