ಬೆಂಗಳೂರು: ರಾಜ್ಯ ಸರಕಾರ 2023 ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿಗೆ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ 68 ಮಂದಿಗೆ ಹಾಗೂ ಮೈಸೂರು ರಾಜ್ಯವು ಕರ್ನಾಟಕ ಎಂದು ಮರು ನಾಮಕರಣವಾಗಿ 50 ವರ್ಷ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ 10 ಸಂಘ- ಸಂಸ್ಥೆಗಳಿಗೆ ಕರ್ನಾಟಕ ಸಂಭ್ರಮ-50 ರಾಜ್ಯೋತ್ಸವ ಪ್ರಶಸ್ತಿ ಪ್ರಕಟಿಸಲಾಗಿದೆ ಎಂದು ಮಂಗಳವಾರ ಸಚಿವ ಶಿವರಾಜ್ ತಂಗಡಗಿ ತಿಳಿಸಿದರು.
ರಾಜ್ಯೋತ್ಸವ ಪ್ರಶಸ್ತಿಗಾಗಿ 1,357 ಅರ್ಜಿಗಳು ಸಲ್ಲಿಕೆ ಆಗಿದ್ದವು. 2,166 ಮಂದಿ ಸೇವಾಸಿಂಧು ವೆಬ್ಸೈಟ್ ಮೂಲಕ 26,555 ಮಂದಿ ಪ್ರಶಸ್ತಿಗಾಗಿ ನಾಮನಿರ್ದೇಶನ ಮಾಡುವಂತೆ ಶಿಫಾರಸ್ಸು ಮಾಡಿದ್ದರು ಎಂದು ತಿಳಿಸಿದರು.
ಹಿರಿಯ ಪತ್ರಕರ್ತ ದಿನೇಶ್ ಅಮಿನ್ ಮಟ್ಟು, ಇಸ್ರೋ ಅಧ್ಯಕ್ಷ ಎಸ್. ಸೋಮನಾಥನ್, ಲೇಖಕಿ ಡಾ.ಕೆ. ಷರೀಫಾ, ಕವಿ ಸುಬ್ಬು ಹೊಲೆಯಾರ್, ಸಾಹಿತಿ ಲಕ್ಷ್ಮಿಪತಿ ಕೋಲಾರ, ಜಾನಪದ ಕಲಾವಿದೆ ಹುಸೇನಾಬಿ ಬುಡೆನ್ಸಾಬ್ ಸಿದ್ಧಿ, ಸಮಾಜ ಸೇವಕ ಜಾರ್ಮಾಡಿ ಹಸನಬ್ಬ, ಹಾಜಿ ಅಬ್ದುಲ್ಲ ಪರ್ಕಳ, ನಿಷ್ಕಲ ಮಂಟಪದ ಶ್ರೀ ನಿಜಗುಣಾನಂದ ಸ್ವಾಮೀಜಿ, ವೈದ್ಯ ಡಾ.ಪ್ರಶಾಂತ್ ಶೆಟ್ಟಿ ಸೇರಿದಂತೆ 68 ಮಂದಿ ಗಣ್ಯರಿಗೆ ರಾಜ್ಯೋತ್ಸವ ಪ್ರಶಸ್ತಿ ಸಂದಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬುಧವಾರ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದು ತಿಳಿಸಿದರು.
ರಾಜ್ಯೋತ್ಸವ ಪ್ರಶಸ್ತಿ ಪಟ್ಟಿಯಲ್ಲಿ 100 ವರ್ಷ ದಾಟಿದ ದಾವಣಗೆರೆ ಹಾಗೂ ಉತ್ತರ ಕನ್ನಡ ಜಿಲ್ಲೆಯ ಇಬ್ಬರು ಶತಾಯುಷಿ, 13 ಮಹಿಳೆಯರು, 54 ಮಂದಿ ಪುರುಷರು ಹಾಗೂ ಮಂಗಳಮುಖಿ ಇದ್ದಾರೆ. ಪ್ರಶಸ್ತಿಗೆ ಭಾಜನವಾದವರಿಗೆ 5 ಲಕ್ಷ ನಗದು ಹಾಗೂ 25 ಗ್ರಾಂ ಚಿನ್ನದ ಪದಕ ನೀಡಲಾಗುವುದು ಎಂದು ತಿಳಿಸಿದರು.