ಮಂಗಳೂರು: ಪ್ರೀತಿ ಹರಡಲಿ ಎಲ್ಲೆಡೆ ಎಂಬ ಘೋಷವಾಕ್ಯದ ಜತೆಗೆ ಮಾನವೀಯತೆಯ ಪ್ರತಿರೂಪ ಸಂತ ಮದರ್ ತೆರೇಸಾ ಅವರ 26 ನೇ ಸಂಸ್ಮರಣ ದಿನಾಚರಣೆ ಅಂಗವಾಗಿ ಇದೇ 21 ರಂದು ಬೆಳಿಗ್ಗೆ 10 ಗಂಟೆಗೆ ಕ್ಕೆ ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ವೈವಿಧ್ಯ ಭಾರತದಲ್ಲಿ ಪ್ರೀತಿಯ ಸೆಲೆಗಳು ಎಂಬ ವಿಷಯ ಕುರಿತು ಜಿಲ್ಲಾ ಮಟ್ಟದ ವಿಚಾರ ಸಂಕಿರಣ ನಡೆಯಲಿದೆ ಎಂದು ಸಂತ ಮದರ್ ತೆರೆಸಾ ವಿಚಾರ ವೇದಿಕೆಯ ಅಧ್ಯಕ್ಷ ರೋಯ್ ಕ್ಯಾಸ್ಟಲಿನೊ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ವಿಚಾರ ಸಂಕಿರಣದ ಉದ್ಘಾಟನೆಯನ್ನು ಪತ್ರಕರ್ತ ದಿನೇಶ್ ಅಮೀನ್ ಮಟ್ಟು ಅವರು ನೆರವೇರಿಸಲಿದ್ದು, ವಿಷಯ ಮಂಡನೆಯನ್ನು ಖ್ಯಾತ ಸಾಹಿತಿ, ಬರಹಗಾರರಾದ ಡಾ. ಕೆ.ಶೆರೀಫಾ ಅವರು ಮಾಡಲಿದ್ದಾರೆ. ಮಂಗಳೂರು ಮಹಾನಗರ ಪಾಲಿಕೆ ಮಾಜಿ ಮೇಯರ್ ಕೆ.ಅಶ್ರಫ್ ಅವರು ಪ್ರತಿಕ್ರಿಯೆ ನೀಡಲಿದ್ದಾರೆ.ಸಭೆ ಅಧ್ಯಕ್ಷತೆಯನ್ನು ವೇದಿಕೆ ಅಧ್ಯಕ್ಷ ರೋಯ್ ಕ್ಯಾಸ್ಟಲಿನೋ ಅವರು ವಹಿಸಲಿದ್ದಾರೆ.ಉದ್ಘಾಟನಾ ಸಮಾರಂಭದ ಮೊದಲು 9.30 ಕ್ಕೆ ಏಕತಾರಿ ಹಾಡುಗಾರ ನಾದಾ ಮಣಿನಾಲ್ಕೂರು ಬಳಗ ಹಾಗೂ ಜನಪ್ರೀತಿ ಬಳಗದವರಿಂದ ಪ್ರೀತಿಯ ಸಿಂಚನ ಎಂಬ ಸೌಹಾರ್ದ ಗಾಯನ ಕಾರ್ಯಕ್ರಮ ನಡೆಯಲಿದೆ ಎಂದರು.
ಪ್ರೀತಿ ಹಾಗೂ ಸೇವೆಯ ಮೂಲಕ ಜಗತ್ತಿನಾದ್ಯಂತ ಕೋಟ್ಯಾಂತರ ಹ್ರದಯಗಳನ್ನು ಗೆದ್ದ ಜಗತ್ತಿನ ಮಹಾತಾಯಿ ಸಂತ ಮದರ್ ತೆರೇಸಾ ಅವರ ಚಿಂತನೆ ಹಾಗೂ ಆದರ್ಶಗಳನ್ನು ಇಂದಿನ ಯುವಪೀಳಿಗೆ ಮಧ್ಯೆ ಕೊಂಡೊಯ್ಯವ ಸಲುವಾಗಿ 2017ರಲ್ಲಿ ಜನ್ಮ ತಾಳಿದ ಸಂತ ಮದರ್ ತೆರೇಸಾ ವಿಚಾರ ವೇದಿಕೆಯು ವಿಚಾರ ಸಂಕಿರಣ,ಸಂವಾದ,ಸೌಹಾರ್ದ ಹಬ್ಬಗಳು ಸೇರಿದಂತೆ ಹಲವಾರು ಕಾರ್ಯಕ್ರಮಗಳ ಮೂಲಕ ಸರ್ವ ಧರ್ಮದ ಜನತೆ ಪ್ರೀತಿ ವಿಶ್ವಾಸಗಳನ್ನು ಗಳಿಸಿದೆ. ಮಾತ್ರವಲ್ಲದೆ ಮಾನವೀಯ ಹೃದಯಗಳನ್ನೊಳಗೊಂಡ ಜಾತ್ಯ ತೀತರ ಹಾಗೂ ಸೌಹಾರ್ದ ಕೂಟವಾಗಿ ಹೊರಹೊಮ್ಮಿದೆ ಎಂದರು.
ನಗರದ ಖ್ಯಾತ ವಿಚಾರವಾದಿಗಳು, ಪ್ರಾಧ್ಯಾಪಕರು, ಸಾಹಿತಿಗಳು, ಪತ್ರಕರ್ತರು, ಪ್ರಗತಿಪರ ಚಿಂತಕರು, ಉದ್ಯಮಿಗಳು, ವಿದ್ಯಾರ್ಥಿ, ಯುವಜನರು, ಮಹಿಳೆಯರು, ದಲಿತ, ಆದಿವಾಸಿ, ಮಧ್ಯಮ ವರ್ಗದ ನೌಕರರ ಸಂಘಟನೆಗಳ ಮುಖಂಡರು ಸೇರಿದಂತೆ ಸರ್ವ ಧರ್ಮದ ಗಣ್ಯರು ಈ ವೇದಿಕೆಯಲ್ಲಿ ನಿಸ್ವಾರ್ಥವಾಗಿ ಪಾಲ್ಗೊಂಡು ಸಕ್ರಿಯರಾಗಿ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಇಂತಹ ಚಟುವಟಿಕೆಗಳನ್ನು ಇನ್ನಷ್ಟು ಮುತುವರ್ಜಿಯಿಂದ ನಡೆಸುವ ಮೂಲಕ ಮಂಗಳೂರಿನ ಸೌಹಾರ್ದ ಪರಂಪರೆಯನ್ನು ಉಳಿಸಿ ಬೆಳೆಸುವುದೇ ಸಂತ ಮದರ್ ತೆರೆಸಾ ವಿಚಾರ ವೇದಿಕೆ ಮೂಲ ಆಶಯ ಎಂದರು.
ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್, ವೇದಿಕೆಯ ಜಂಟಿ ಕಾರ್ಯದರ್ಶಿ ಮಂಜುಳಾ ನಾಯಕ್ , ಖಜಾಂಚಿ ಡೋಲ್ಫಿ ಡಿಸೋಜ, ಗೌರವ ಸಲಹೆಗಾರ ಆಲ್ವಿನ್ ಡಿಸೋಜ, ಗೌರವ ಸಲಹೆಗಾರ ಮುನೀರ್ ಕಾಟಿಪಳ್ಳ, ಮಾಧ್ಯಮ ಸಂಚಾಲಕ ಸ್ಟಾನಿ ಡಿ ಕುನ್ನಾ ಇದ್ದರು.