
ಮಂಗಳೂರು: ಅಂಗವಿಕಲ ಮಕ್ಕಳನ್ನು ಬಹಳ ಪ್ರೀತಿಯಿಂದ ಸಲಹಿ, ಅವರ ಸರ್ವತ್ತೋಮುಖ ಬೆಳವಣಿಗೆಗೆ ಶ್ರಮಿಸುತ್ತಿರುವ ಅನಿರ್ವೇದ ಫೌಂಡೇಶನ್ ಇನ್ನಷ್ಟು ಯಶಸ್ಸು ಸಾಧಿಸಲಿ ಎಂದು ನಟ ಅನಂತನಾಗ ಹೇಳಿದರು.
ಕದ್ರಿ ಶಿವಭಾಗ್ ನಲ್ಲಿರುವ ಅನಿರ್ವೇದ ಫೌಂಡೇಷನ್ ಇದರ ಸ್ಥಳಾಂತರಿತ ನೂತನ ಕಟ್ಟಡ ಉದ್ಘಾಟಿಸಿ ಅವರು ಮಾತನಾಡಿ, ವಿಶೇಷ ಚೇತನ ಮಕ್ಕಳ ಜೊತೆಗೂಡಿ 75 ನೇ ಜನ್ಮದಿನವನ್ನು ಆಚರಿಸಿಕೊಳ್ಳುತ್ತಿರುವುದು ಸಂತಸ ತಂದಿದೆ. ಮಕ್ಕಳೊಂದಿಗೆ ಕೇಕ್ ಕತ್ತರಿಸುವ ಮೂಲಕ ಬಾಲ್ಯದ ದಿನಗಳು ನೆನಪಿಗೆ ಬಂದವು ಎಂದರು.

ಮಕ್ಕಳಲ್ಲಿಯೇ ದೇವರನ್ನು ಕಾಣಬೇಕೆಂಬ ಉದಾತ್ತ ಚಿಂತನೆಯನ್ನು ಆನಂದಾಶ್ರಮದಲ್ಲಿ ತಮ್ಮ ಗುರುಗಳು ಹೇಳಿಕೊಟ್ಟಿದ್ದರು. ಇಂತಹ ದಿವ್ಯಾಂಗ ಮಕ್ಕಳಿಗೆ ದಾರಿ ದೀಪವಾಗಿರುವ ಸಂಸ್ಥೆಯ ಮುಖ್ಯಸ್ಥರಾದ ಡಾ. ಶ್ವೇತಾ ಅವರು ಮಕ್ಕಳ ಬಾಳಿನಲ್ಲಿ ದೇವರ ರೂಪವಾಗಿ ಬಂದಿದ್ದೀರಿ. ನಿಮ್ಮ ಸೇವೆ ಇನ್ನಷ್ಟು ದಿವ್ಯ ಚೇತನ ಮಕ್ಕಳಲ್ಲಿ ಬೆಳಕಾಗಿ ಬರಲಿ. ಈ ಸಂಸ್ಥೆಯ ಎಲ್ಲರಿಗೂ ಶುಭವಾಗಲಿ ಎಂದು ಹಾರೈಸಿದರು.
ಡಾ. ಶ್ವೇತಾ ಅವರು ಸಂಸ್ಥೆಯ ಬೆಳವಣಿಗೆಗೆ ಸಹಕರಿಸಿದ ಎಲ್ಲರನ್ನು ವಂದಿಸಿದರು. ಮಹಾನಗರ ಪಾಲಿಕೆಯ ವಿರೋಧ ಪಕ್ಷದ ನಾಯಕ ನವೀನ್ ಡಿಸೋಜ ಮಾತನಾಡಿ, ಪಾಲಿಕೆ ಮತ್ತು ವೈಯಕ್ತಿಕವಾಗಿ ಸಂಸ್ಥೆಗೆ ಅಗತ್ಯ ನೆರವನ್ನು ನೀಡಲು ಬದ್ಧ ಎಂದರು. ಡಾ. ರವಿಚಂದ್ರ ಶುಭ ಹಾರೈಸಿದರು.
ಅನಂತನಾಗ್ ಪತ್ನಿ ಗಾಯತ್ರಿ , ಮಗಳು ಅದಿತಿ, ಅಳಿಯ ವಿವೇಕ್, ಮಂಗಲ್ಪಾಡಿ ನರೇಶ್ ಶೆಣೈ, ಅಂಜನಾ ಕಾಮತ್ ಹಾಗೂ ಸಂಸ್ಥೆಯ ಮಕ್ಕಳ ಪೋಷಕರು ಇದ್ದರು.


