ಮಂಗಳೂರು: ಸರ್ಕಸ್ ಸಿನಿಮಾ ಗೆದ್ದಿರುವುದು ಒಬ್ಬನಿಂದಲ್ಲ. ನನ್ನ ಇಡೀ ತಂಡ ಇದಕ್ಕಾಗಿ ರಾತ್ರಿ ಹಗಲು ಶ್ರಮ ವಹಿಸಿ ದುಡಿದಿದೆ. ಹೆಚ್ಚಿನವರು ಭಾಷೆಯ ಮೇಲೆ ಪ್ರೀತಿಯಿಟ್ಟು ತುಳು ಸಿನಿಮಾ ಮಾಡುತ್ತಾರೆ, ಆದರೆ, ಬಿಡುಗಡೆ ವೇಳೆ ಅವಸರ ಮಾಡುತ್ತಾರೆ. ಇದರಿಂದ ಒಳ್ಳೆಯ ಸಿನಿಮಾಗಳು ಕೂಡ ಸೋಲುತ್ತಿರುವುದು ವಿಷಾದದ ಸಂಗತಿ. ಆದ್ದರಿಂದ ಸಿನಿಮಾ ಬಿಡುಗಡೆ ವೇಳೆ ಪೈಪೋಟಿ ಬೇಡ ಎಂದು ನಿರ್ದೇಶಕ ರೂಪೇಶ್ ಶೆಟ್ಟಿ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ದೇಶ ವಿದೇಶಗಳಲ್ಲಿ ಸರ್ಕಸ್ ಸಿನಿಮಾ ಜನರನ್ನು ರಂಜಿಸುವಲ್ಲಿ ಯಶಸ್ವಿಯಾಗಿದೆ. ಚಿತ್ರದ ನಿರ್ಮಾಪಕರು ಹಾಕಿರುವ ಬಂಡವಾಳ ವಾಪಸ್ ಬಂದಿದೆ. ಇದಕ್ಕಾಗಿ ಪ್ರತಿಯೊಬ್ಬ ಪ್ರೇಕ್ಷಕನಿಗೂ ಧನ್ಯವಾದಗಳು. ಗಿರ್ಗಿಟ್, ಗಮ್ಜಾಲ್, ಸರ್ಕಸ್ ಮೂರೂ ಚಿತ್ರಗಳಿಗೆ ಸಂಭಾಷಣೆ ಬರೆದಿರುವ ಪ್ರಸನ್ನ ಶೆಟ್ಟಿ ಬೈಲೂರು ಅವರ ನನ್ನ ಬೆನ್ನೆಲುಬು. ಅವರಿಗೆ ನಾನು ಥ್ಯಾಂಕ್ಸ್ ಹೇಳಬೇಕು ಎಂದು ತಿಳಿಸಿದರು.
ಭೋಜರಾಜ್ ವಾಮಂಜೂರು ಅವರು ಮಾತನಾಡಿ, ಸರ್ಕಸ್ ಚಿತ್ರದ ಬಗ್ಗೆ ಮಾತಾಡಲು ಹೆಮ್ಮೆ ಎನಿಸುತ್ತಿದೆ. ಯಾಕೆಂದರೆ ತುಳುನಾಡು ಮಾತ್ರವಲ್ಲದೆ ದೇಶ ವಿದೇಶಗಳಲ್ಲಿಯೂ ಸಿನಿಮಾ ಹೆಸರು ಮಾಡುತ್ತಿದೆ. ಸಿನಿಮಾ ಗೆಲ್ಲಲು ಮಾಧ್ಯಮ ಮಿತ್ರರ ಸಹಕಾರ ತುಂಬಾ ಅಗತ್ಯ ಎಂದರು.
ಪ್ರಸನ್ನ ಶೆಟ್ಟಿ ಬೈಲೂರು ಅವರು ಮಾತನಾಡಿ, ಬಲೇ ತೆಲಿಪಾಲೆ ಮೂಲಕ ಬೆಳಕಿಗೆ ಬಂದ ಸಣ್ಣ ಕಲಾವಿದ ನಾನು. ನನ್ನನ್ನು ಗುರುತಿಸಿ ಚಿತ್ರದಲ್ಲಿ ಸಂಭಾಷಣೆ ಬರೆಯಲು ಅವಕಾಶ ಮಾಡಿಕೊಟ್ಟಿರುವ ರೂಪೇಶ್ ಶೆಟ್ಟಿ ಅವರಿಗೆ ನಾನು ಧನ್ಯವಾದ ಅರ್ಪಿಸುತ್ತೇನೆ ಎಂದರು.
ನಟಿ ರಚನಾ ರೈ, ಭೋಜರಾಜ್ ವಾಮಂಜೂರ್, ಪಂಚಮಿ ವಾಮಂಜೂರ್, ಪ್ರಸನ್ನ ಶೆಟ್ಟಿ ಬೈಲೂರು, ಸಂದೀಪ್ ಶೆಟ್ಟಿ, ನವೀನ್ ಶೆಟ್ಟಿ, ನಿರ್ಮಾಪಕ ಮಂಜುನಾಥ್ ಅತ್ತಾವರ, ಸಂಗೀತ ನಿರ್ದೇಶಕ ಲಾಯ್ ವೇಲೆಂಟೈನ್ ಡಿಸೋಜ, ಚಿತ್ರ ವಿತರಣೆಕಾರ ಸಚಿನ್ ಎ.ಎಸ್. ಉಪ್ಪಿನಂಗಡಿ ಇದ್ದರು.
14 ದೇಶಗಳು ಸೇರಿ ಒಟ್ಟು 130 ಚಿತ್ರ ಮಂದಿರದಲ್ಲಿ ಸಿನಿಮಾ ಬಿಡುಗಡೆ ಆಗಿದೆ. ಇದರ ಜತೆ ಏಕಕಾಲದಲ್ಲಿ ದೇಶದಾದ್ಯಂತ ಬಿಡುಗಡೆಯಾದ ಮೊದಲ ತುಳು ‘ಪ್ಯಾನ್ ಇಂಡಿಯಾ’ ಚಿತ್ರ ಎನ್ನುವ ಹೆಗ್ಗಳಿಕೆಗೂ ಪಾತ್ರವಾಗಿದೆ.
ತುಳು ಚಿತ್ರರಂಗದ ಕಲಾವಿದರಾದ ನವೀನ್ ಡಿ ಪಡೀಲ್, ಭೋಜರಾಜ ವಾಮಂಜೂರು, ಅರವಿಂದ ಬೋಳಾರ್, ಸಾಯಿಕೃಷ್ಣ ಕುಡ್ಲ, ಪ್ರಸನ್ನ ಶೆಟ್ಟಿ ಬೈಲೂರು, ಸಂದೀಪ್ ಶೆಟ್ಟಿ ಮಾಣಿಬೆಟ್ಟು, ಉಮೇಶ್ ಮಿಜಾರ್, ಚಂದ್ರಹಾಸ ಉಳ್ಳಾಲ್, ನಿತೇಶ್ ಶೆಟ್ಟಿ ಎಕ್ಕಾರ್, ಪ್ರದೀಪ್ ಆಳ್ವ, ರೂಪಾ ವರ್ಕಾಡಿ, ಪಂಚಮಿ ಭೋಜರಾಜ್ ತಾರಾಗಣದಲ್ಲಿದ್ದಾರೆ.
ಶೂಲಿನ್ ಫಿಲಂಸ್, ಮುಗ್ರೋಡಿ ಫಿಲಂಸ್ ಲಾಂಛನದ ಅಡಿಯಲ್ಲಿ ಸರ್ಕಸ್ ಸಿನಿಮಾ ನಿರ್ಮಾಣ ಆಗಿದೆ. ಅನಿಲ್ ಶೆಟ್ಟಿ, ಸುಧಾಕರ ಶೆಟ್ಟಿ, ಮಂಜುನಾಥ ಅತ್ತಾವರ ಈ ಚಿತ್ರವನ್ನು ನಿರ್ಮಿಸಿದ್ದಾರೆ.
ಕರಾವಳಿಯಾದ್ಯಂತ ಸುತ್ತಲಿನ ಪರಿಸರದಲ್ಲಿ ಚಿತ್ತೀಕರಣ ನಡೆದಿದೆ. ಸಂಭಾಷಣೆ ಪ್ರಸನ್ನ ಶೆಟ್ಟಿ ಬೈಲೂರು, ನವೀನ್ ಶೆಟ್ಟಿ ನೃತ್ಯ ನಿರ್ದೇಶನ, ನಿರಂಜನ ದಾಸ್ ಕ್ಯಾಮೆರಾ, ರಾಹುಲ್ ವಶಿಷ್ಠ ಸಂಕಲನ, ಲೋಯ್ ಅವರ ಸಂಗೀತ ಈ ಚಿತ್ರಕ್ಕಿದೆ.