ಮುಂಬೈ: ಮಹಾರಾಷ್ಟ್ರದ ಥಾಣೆ ಹಾಗೂ ನೆರೆಯ ಪಾಲ್ಘರ್ ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಸುರಿದ ಪರಿಣಾಮ ಹಲವು ಪ್ರದೇಶಗಳಲ್ಲಿ ನೀರು ಜಲಾವೃತಗೊಂಡಿದೆ. ಹಲವು ಮರಗಳು ಬಿದ್ದಿರುವ ಘಟನೆಗಳು ನಡೆದಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಎರಡು ದಿನಗಳಲ್ಲಿ ಇಬ್ಬರು ವ್ಯಕ್ತಿಗಳು ನೆರೆಯ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ಅವರಲ್ಲಿ ಒಬ್ಬನ ಶವ ಪತ್ತೆಯಾಗಿದೆ. ಮತ್ತೊಬ್ಬನ ಪತ್ತೆಗೆ ಪ್ರಯತ್ನ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಥಾಣೆ ಜಿಲ್ಲೆಯಲ್ಲಿ ಮಳೆ ಸಂಬಂಧಿತ ಘಟನೆಗಳಲ್ಲಿ ಹಲವು ಕಾರುಗಳಿಗೆ ಹಾನಿಯಾಗಿದೆ. ಥಾಣೆ ಜಿಲ್ಲೆಯ ನ್ಯೂ ಮುಂಬೈ ಟೌನ್ ಷಿಪ್ ನಲ್ಲಿರುವ ಉನ್ನತ ಮಟ್ಟದ ಎನ್ಆರ್ ಐ ಕಾಂಪ್ಲೆಕ್ಸ್ ಕಾಂಪೌಂಡ್ ಗೋಡೆ ಭಾಗವು ಭಾರಿ ಮಳೆ ನಂತರ ಬುಧವಾರ ಕುಸಿದಿದೆ ಎಂದು ಮಹಾನಗರ ಪಾಲಿಕೆ ವಿಪತ್ತು ನಿರ್ವಹಣಾ ಕೋಶದ ಮುಖ್ಯಸ್ಥ ಡಾ.ಬಾಬಾಸಾಹೇಬ್ ರಾಜಾಲೆ ಗುರುವಾರ ತಿಳಿಸಿದ್ದಾರೆ.
ಘಟನೆಯಲ್ಲಿ ಯಾವುದೇ ವ್ಯಕ್ತಿ ಗಾಯಗೊಂಡಿಲ್ಲ, ಕಾಂಪ್ಲೆಕ್ಸ್ ನಲ್ಲಿ ನಿಲ್ಲಿಸಿದ್ದ ಕೆಲ ಕಾರುಗಳಿಗೆ ಹಾನಿಯಾಗಿದೆ . ಥಾಣೆ ನಗರದ ದಿವಾದಿಂದ 16 ವರ್ಷದ ಬಾಲಕ ಬುಧವಾರ ರಾತ್ರಿ ಉಕ್ಕಿ ಹರಿದ ಚರಂಡಿಯಲ್ಲಿ ಕೊಚ್ಚಿ ಹೋಗಿದ್ದು, ಆತನ ಪತ್ತೆಗೆ ಇನ್ನೂ ಪ್ರಯತ್ನಗಳು ನಡೆಯುತ್ತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.