ಮಣಿಪಾಲ: ಮಣಿಪಾಲ್ ಆರೋಗ್ಯ ಕಾರ್ಡ್– 2023 ನೋಂದಣಿ ಪ್ರಕ್ರಿಯೆ ಇಂದಿನಿಂದ ಆರಂಭವಾಗುತ್ತಿದೆ. ಗುಣಮಟ್ಟದ ಆರೋಗ್ಯ ಸೇವೆಯನ್ನು ಸಾರ್ವಜನಿಕರಿಗೆ ಕೈಗೆಟಕುವಂತೆ ಮಾಡುವ ಉದ್ದೇಶದಿಂದ ಆರೋಗ್ಯ ಕಾರ್ಡ್ ಅನ್ನು ಪ್ರಾರಂಭಿಸಲಾಗಿದೆ, ಸಣ್ಣ ಮೊತ್ತ ಪಾವತಿಸುವ ಮೂಲಕ, ಯಾರಾದರೂ ಸದಸ್ಯರಾಗಿ, ಇದರ ಪ್ರಯೋಜನ ಪಡೆಯಬಹುದಾಗಿದೆ ಎಂದು ಮಾಹೆ ಮಣಿಪಾಲದ ಸಹ ಕುಲಾಧಿಪತಿ ಡಾ.ಎಚ್.ಎಸ್. ಬಲ್ಲಾಳ್ ಹೇಳಿದರು.
ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದಲ್ಲಿ ಬುಧವಾರ ಆರೋಗ್ಯ ಕಾರ್ಡ್ ಗೆ ಚಾಲನೆ ನೀಡಿ ಅವರು ಮಾತನಾಡಿ, ಮಣಿಪಾಲ್ ಆರೋಗ್ಯ ಕಾರ್ಡ್ ಹೊಂದಿರುವವರಿಗೆ ತಜ್ಞ ಮತ್ತು ವಿಶೇಷ ತಜ್ಞ ವೈದ್ಯರ ಸಮಾಲೋಚನಾ ಶುಲ್ಕದಲ್ಲಿ ಶೇ 50 ರಷ್ಟು ರಿಯಾಯಿತಿ (ಒ ಪಿ ಡಿ ದಿನಗಳಂದು ) ಹೊರರೋಗಿ ಪ್ರಯೋಗಾಲಯ ಪರೀಕ್ಷೆಗಳಲ್ಲಿ ಶೇ 30 ರಷ್ಟು ರಿಯಾಯಿತಿ, ಹೊರರೋಗಿ ರೇಡಿಯಾಲಜಿ ಪರೀಕ್ಷೆಗಳು (ಸಿ ಟಿ, ಎಂ ಆರ್ ಐ, ಅಲ್ಟ್ರಾಸೌಂಡ್ ಇತ್ಯಾದಿ) ಶೇ 20 ರಷ್ಟು ರಿಯಾಯಿತಿ, ಹೊರರೋಗಿ ವಿಧಾನಗಳಲ್ಲಿ ಮತ್ತು ಮಧುಮೇಹ ತಪಾಸಣೆಯಲ್ಲಿ ಶೇ 20 ರಷ್ಟು ರಿಯಾಯಿತಿ, ಹೊರರೋಗಿ ಡಯಾಲಿಸಿಸ್ ₹ 100, ಔಷಧಾಲಯಗಳಲ್ಲಿ ಶೇ 12 ರಷ್ಟು ರಿಯಾಯಿತಿ, ಸಾಮಾನ್ಯ ವಾರ್ಡಿನಲ್ಲಿ ಒಳರೋಗಿಯಾದಲ್ಲಿ ಉಪಯೋಗವಾಗುವ ವಸ್ತುಗಳನ್ನು ಮತ್ತು ಪ್ಯಾಕೇಜ್ಗಳನ್ನು ಹೊರತುಪಡಿಸಿ ಶೇ 25 ರಷ್ಟು ರಿಯಾಯಿತಿ ಸಿಗಲಿದೆ ಎಂದರು.
ಸಂಸ್ಥಾಪಕ ನಾಯಕ ಡಾ.ಟಿ.ಎಂ.ಎ ಪೈ ಅವರ 125ನೇ ವರ್ಷದ ಜನ್ಮ ದಿನವನ್ನು ಆಚರಿಸುತ್ತಿದ್ದೇವೆ. ಅವರ ಉದಾತ್ತ ಕಾರ್ಯವನ್ನು ಸ್ಮರಿಸುವುದು ನಮ್ಮ ಕರ್ತವ್ಯ ಮತ್ತು ಜವಾಬ್ದಾರಿ ಕೂಡ ಆಗಿದೆ. ವರ್ಷದ ಯೋಜನೆಯಲ್ಲಿ ಕಾರ್ಡಿನ ಸದಸ್ಯತ್ವವು ಒಬ್ಬರಿಗೆ ₹300, ಕೌಟಂಬಿಕ ಕಾರ್ಡ್ ಅಂದರೆ ಕಾರ್ಡುದಾರ, ಅವರ ಸಂಗಾತಿ 25 ವರ್ಷದ ಒಳಗಿನ ಮಕ್ಕಳಿಗೆ ₹ 600, ಮತ್ತು ಕುಟುಂಬ ಪ್ಲಸ್ ಯೋಜನೆ ಅಂದರೆ ಕಾರ್ಡುದಾರ, ಅವರ ಸಂಗಾತಿ, 25 ವರ್ಷದ ಒಳಗಿನ ಮಕ್ಕಳು ಮತ್ತು 4 ಪೋಷಕರು (ತಂದೆ, ತಾಯಿ, ಅತ್ತೆ ಮತ್ತು ಮಾವ) ₹ 750, ಎರಡು ವರ್ಷದ ಯೋಜನೆಯಲ್ಲಿ ಒಬ್ಬರಿಗೆ ₹ 500 ಕುಟುಂಬಕ್ಕೆ ₹ 800 ಮತ್ತು ಕೌಟುಂಬಿಕ ಪ್ಲಸ್ ಯೋಜನೆಗೆ ₹950 ಆಗಿದೆ ಎಂದು ತಿಳಿಸಿದರು.
ಮಾಹೆ ಮಣಿಪಾಲ ಸಹ ಕುಲಪತಿ ಡಾ. ಶರತ್ ಕುಮಾರ್ ರಾವ್ ಅವರು ಮಾತನಾಡಿ, ಮಾಹೆ ಮಣಿಪಾಲದ ಕುಲಪತಿ ಡಾ.ರಾಮದಾಸ್ ಪೈ ಅವರ ಮಾರ್ಗದರ್ಶನ ಮತ್ತು ನೇತೃತ್ವದಲ್ಲಿ ಸಾಮಾಜಿಕ ಜವಾಬ್ದಾರಿ ಭಾಗವಾಗಿ ಮಣಿಪಾಲ ಆರೋಗ್ಯ ಕಾರ್ಡ್ ಅನ್ನು 2000 ರಲ್ಲಿ ಪ್ರಾರಂಭಿಸಲಾಯಿತು. ಆರೋಗ್ಯ ಸೇವೆಯನ್ನು ಉಚಿತವಾಗಿ ನೀಡಲು ಸಾಧ್ಯವಾಗದಿದ್ದರೂ, ಎಲ್ಲರಿಗೂ ರಿಯಾಯಿತಿ ದರದಲ್ಲಿ ಲಭ್ಯವಾಗಬೇಕು ಎಂಬುದು ಇದರ ಉದ್ದೇಶವಾಗಿತ್ತು. ಆರಂಭದಲ್ಲಿ, ಈ ಯೋಜನೆಯು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆರಂಭ ಮಾಡಲಾಯಿತು. ನಂತರ ಇತರ ಜಿಲ್ಲೆಗಳಿಗೆ ವಿಸ್ತರಿಸಲಾಯಿತು. ಈಗ ಈ ಯೋಜನೆ ಉಡುಪಿ, ದಕ್ಷಿಣ ಕನ್ನಡ, ದಾವಣಗೆರೆ, ಚಿತ್ರದುರ್ಗ, ಶಿವಮೊಗ್ಗ, ಉತ್ತರ ಕನ್ನಡ, ಹಾವೇರಿ, ಚಿಕ್ಕಮಗಳೂರು ಮತ್ತು ಬಳ್ಳಾರಿ ಸೇರಿದಂತೆ ಕರಾವಳಿ ಮತ್ತು ಮಧ್ಯ ಕರ್ನಾಟಕದ ಸುಮಾರು 12-15 ಕ್ಕೂ ಹೆಚ್ಚು ಜಿಲ್ಲೆಗಳಿಗೆ ವಿಸ್ತರಿಸಿದೆ. ಕೇರಳ, ಗೋವಾ ಮುಂತಾದ ನೆರೆಯ ರಾಜ್ಯಗಳ ಜನರೂ ಇದರ ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ ಎಂದು ಹೇಳಿದರು.
ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದ ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ್ ಶೆಟ್ಟಿ ಅವರು ಮಾತನಾಡಿ, ಮಣಿಪಾಲ ಆರೋಗ್ಯಕಾರ್ಡ್ ಹೊಂದಿರುವವರು ಕಸ್ತೂರ್ಬಾ ಆಸ್ಪತ್ರೆ-ಮಣಿಪಾಲ, ಡಾ.ಟಿ.ಎಂ.ಎ.ಪೈ ಆಸ್ಪತ್ರೆ-ಉಡುಪಿ, ಡಾ.ಟಿ.ಎಂ.ಎ.ಪೈ ರೋಟರಿ ಆಸ್ಪತ್ರೆ-ಕಾರ್ಕಳ, ಕೆ.ಎಂ.ಸಿ.ಆಸ್ಪತ್ರೆ-ಮಂಗಳೂರು ಮತ್ತು ಅತ್ತಾವರ, ದುರ್ಗಾ ಸಂಜೀವನಿ ಮಣಿಪಾಲ ಆಸ್ಪತ್ರೆ- ಕಟೀಲು ಮತ್ತು ಮಣಿಪಾಲ್ ಆಸ್ಪತ್ರೆ -ಗೋವಾಗಳಲ್ಲಿ ಪ್ರಯೋಜನ ಪಡೆಯಬಹುದು ಎಂದು ತಿಳಿಸಿದರು.
ಆಸ್ಪತ್ರೆಗಳ ರಿಯಾಯಿತಿ ಮಾದರಿಗಳನ್ನು ತಿಳಿಯಲು ಮತ್ತು ಹೆಚ್ಚಿನ ವಿವರಗಳನ್ನು www.manipalhealthcard.com ಗೆ ಲಾಗ್ ಇನ್ ಆಗುವುದರ ಮೂಲಕ ತಿಳಿದುಕೊಳ್ಳಬಹುದು . ಸಾರ್ವಜನಿಕರು ಮಣಿಪಾಲ್ ಆರೋಗ್ಯಕಾರ್ಡ್ ಅನ್ನು ಎಲ್ಲಾ ಅಧಿಕೃತ ಪ್ರತಿನಿಧಿಗಳಲ್ಲಿ ನೋಂದಣಿ ಮಾಡಿಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ 9980854700, ದೂ ಸಂ 08202923748 ಗೆ ಸಂಪರ್ಕಿಸಬಹುದು ಎಂದು ಹೇಳಿದರು.
ಕೆಎಂಸಿ ಮಣಿಪಾಲ ಡೀನ್ ಡಾ ಪದ್ಮರಾಜ್ ಹೆಗ್ಡೆ, ಕೆ ಎಂ ಸಿ ಮಂಗಳೂರು ಡೀನ್ ಡಾ. ಬಿ ಉನ್ನಿಕೃಷ್ಣನ್ ಇದ್ದರು.