ಕಾರವಾರ: ಮೂರು ತಿಂಗಳಿಂದ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದ 10 ವರ್ಷ ವಯಸ್ಸಿನ ಬೆಳ್ಳಿ ಶ್ವಾನ ಇನ್ನು ಮುಂದೇ ಒಂದು ನೆನಪು ಮಾತ್ರ, ಬುಧುವಾರ ಬೆಳ್ಳಿ ಇಹಲೋಕ ತ್ಯಜಿಸಿದೆ.
ಜಿಲ್ಲಾ ಪೊಲೀಸ್ ಇಲಾಖೆಯ ಸ್ಫೋಟಕ ಪತ್ತೆ ದಳದ ವಿಭಾಗದಲ್ಲಿ 9 ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದ ಲ್ಯಾಬ್ರಡಾರ್ ರೆಟ್ರೀವರ್ ( Labrador retriever) ಜಾತಿಯ ಬೆಳ್ಳಿ 9 ವರ್ಷಗಳ ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಣೆ ಮಾಡಿತ್ತು, ಜತೆಗೆ ಸಿಬ್ಬಂದಿ ಜತೆಗೆ ಉತ್ತಮ ಒಡನಾಟ ಹೊಂದಿತ್ತು. ಜಿಲ್ಲೆಗೆ ಯಾರೋ ವಿವಿಐಪಿ ವ್ಯಕ್ತಿಗಳು ಬಂದಾಗ ಸ್ಫೋಟಕ ಪತ್ತೆ ಕಾರ್ಯದ ಸಾರಥ್ಯ ಬೆಳ್ಳಿಯದೇ.
ಬೆಳ್ಳಿ ಶ್ವಾನದ ದಿನದ ಸುದ್ದಿ ತಿಳಿಯುತ್ತಿದ್ದಂತೆ ಅದರ ಜತೆಗೆ ಉತ್ತಮ ಒಡನಾಟ ಹೊಂದಿದ್ದ ಸಿಬ್ಬಂದಿ ಕಣ್ಣಾಲೆ ತೇವವಾಗಿದ್ದವು. 3 ತಿಂಗಳಿಂದ ಅನಾರೋಗ್ಯದ ಜತೆಗೆ ಹೋರಾಟ ನಡೆಸುತ್ತಿದ್ದ ಈ ಶ್ವಾನಕ್ಕೆ ಕ್ಯಾನ್ಸರ್ ಗಡ್ಡೆ ಇರುವುದು ಪತ್ತೆ ಆಗಿತ್ತು. ಆಹಾರ ಸೇವನೆ ಮಾಡದೇ, ಚಿಕಿತ್ಸೆ ಸ್ಪಂದಿಸದೇ ಬೆಳ್ಳಿ ಎಲ್ಲರನ್ನು ಬಿಟ್ಟು ದೂರ ಸಾಗಿದೆ.
ಜಿಲ್ಲಾ ಪೋಲಿಸ್ ಪರೇಡ್ ಮೈದಾನದಲ್ಲಿ ಬುಧವಾರ ಸರಕಾರಿ ಗೌರವಗಳೊಂದಿಗೆ ಬೆಳ್ಳಿಯ ಶ್ವಾನದ ಅಂತ್ಯಕ್ರಿಯೆ ನಡೆಯಿತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ , ಹೆಚ್ಚುವರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಯಕುಮಾರ, ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಡಿ.ವೈ.ಎಸ್ಪಿ ದಿಲೀಪ್, ಇನ್ ಸ್ಪೆಕ್ಟರ್ ಸಿದ್ದಪ್ಪ ಬೀಳಗಿ ಹಾಗೂ ಸಿಬ್ಬಂದಿ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡು ವಿದಾಯದ ನುಡಿನಮನ ಸಲ್ಲಿಸಿದರು.
ಶ್ವಾನದಳದ ಸಿಬ್ಬಂದಿ ಜತೆಗೆ ಬಾಂಧವ್ಯ ಹೊಂದಿದ್ದ ಬೆಳ್ಳಿ 300 ಕ್ಕೂ ಹೆಚ್ಚು ಕಾರ್ಯಾಚರಣೆಯಲ್ಲಿ ಕರ್ತವ್ಯ ನಿರ್ವಹಣೆ ಮಾಡಿದೆ. 2021 ರಲ್ಲಿ ಜಿಲ್ಲೆಯ ಕುಮಟಾದಲ್ಲಿ ನಕಲಿ ಬಾಂಬ್ ಪತ್ತೆ ಕಾರ್ಯದಲ್ಲಿ ಮುಂಚೂಣಿಯಲ್ಲಿ ಕರ್ತವ್ಯ ಪ್ರಜ್ಞೆ ಮೆರದಿದ್ದಳು ಬೆಳ್ಳಿ. ಬಾಂಬ್ ಪತ್ತೆ ಸ್ಪರ್ಧೆಯಲ್ಲಿ ಅಮೋಘ ಎರಡು ಬಾರಿ ಪ್ರಥಮ ಬಹುಮಾನ ಪಡೆದ ಹೆಗ್ಗಳಿಕೆ ಬೆಳ್ಳಿ ಶ್ವಾನ ಭಾಜನವಾಗಿತ್ತು.
4 ತಿಂಗಳ ಮರಿ ಇರುವಾಗಲೇ ಬೆಂಗಳೂರಿನ ಆಡುಗೋಡಿ ತರಬೇತಿ ಕೇಂದ್ರದಲ್ಲಿ ಬೆಳ್ಳಿ ತರಬೇತಿ ಪಡೆದುಕೊಂಡಿದ್ದಳು. ಉತ್ತಮ ಆಹಾರ ಕ್ರಮ ಹೊಂದಿದ್ದ ಬೆಳ್ಳಿಗೆ ಮೂರು ತಿಂಗಳಿನಿಂದ ಕ್ಯಾನ್ಸರ್ ರೋಗವು ಬಾಧಿಸುತ್ತಿತ್ತು. ಅದರಲ್ಲಿಯೇ ಕರ್ತವ್ಯ ನಿರ್ವಹಣೆ ಮಾಡಿತ್ತು. ಬೆಳ್ಳಿಯನ್ನು ನಮ್ಮ ಮನೆ ಮಕ್ಕಳಂತೆ ಸಾಕಿದ್ದೇವು, ಕ್ಯಾನ್ಸರ್ ಅದನ್ನು ಬದುಕುವುದಕ್ಕೆ ಬಿಡಲೇ ಇಲ್ಲ ಎಂದು ಹೇಳುವಾಗ ಅದರ ಜತೆಗೆ ಉತ್ತಮ ಒಡನಾಟ ಹೊಂದಿದ್ದ ಬಾಂಬ್ ನಿಗೃಹ ದಳದ ಸಿಬ್ಬಂದಿ ನಿತ್ಯಾನಂದ ಗೌಡ, ಪ್ರದೀಪ್ ನಾಯ್ಕ ಕಣ್ಣೀರು ಹಾಕಿದರು.