ಬೆಂಗಳೂರು: ಚುನಾವಣೆಯಲ್ಲಿ ಬಹುಮತ ಪಡೆದಿರುವ ಕಾಂಗ್ರೆಸ್ ಪಕ್ಷದಲ್ಲಿ ಮುಖ್ಯಮಂತ್ರಿ ಯಾರಾಗ್ತಾರೆ ಎಂಬ ಸಾಕಷ್ಟು ಕುತೂಹಲ ಮುಂದುವರೆದಿದೆ. ಸಿಎಂ ನೀನಾ, ನಾನಾ ಎಂಬ ಹಠಕ್ಕೆ ಬಿದ್ದಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನಡುವೆ ತೀವ್ರ ಪೈಪೋಟಿ ನಡೆದಿದೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಂಗಳವಾರ ಬೆಳಿಗ್ಗೆ 9. 50 ಕ್ಕೆ ದೇವನಹಳ್ಳಿ ವಿಮಾನ ನಿಲ್ದಾಣದಿಂದ ವಿಸ್ತಾರ ವಿಮಾನದಲ್ಲಿ ನವದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ. ಈ ನಡುವೆ ಸಿದ್ದರಾಮಯ್ಯ ಅವರನ್ನು AICC ಈಗಾಗಲೇ ನವದೆಹಲಿಗೆ ಬುಲಾವ್ ನೀಡಿ ಕರೆಸಿಕೊಂಡಿದೆ.
ಸೋಮವಾರ ಆರೋಗ್ಯದಲ್ಲಿ ಏರುಪೇರು ಆಗಿದ್ದರಿಂದ ವಿಶ್ರಾಂತಿ ಮೊರೆ ಹೋಗಿದ್ದ ಡಿಕೆಶಿ ದೆಹಲಿಯತ್ತ ಮುಖ ಮಾಡಿದ್ದಾರೆ.
ಈ ವೇಳೆ ಅವರು ಮಾತನಾಡಿ, ಪಕ್ಷದ ಪ್ರಧಾನ ಕಾರ್ಯದರ್ಶಿ ಕರೆ ಮಾಡಿ ಒಬ್ಬರೆ ಬರುವಂತೆ ಸೂಚನೆ ನೀಡಿದ್ದಾರೆ. ಮೊದಲಿಗೆ ನಾನು ಸೋನಿಯಾ ಅವರನ್ನು ಭೇಟಿ ಮಾಡುತ್ತೇನೆ, ನಂತರ ಪ್ರಿಯಾಂಕ್ ಗಾಂಧಿ, ರಾಹುಲ್ ಗಾಂಧಿ ಭೇಟಿ ಮಾಡಿ ಸಭೆಗೆ ಹೋಗುತ್ತೇನೆ. ಕಾಂಗ್ರೆಸ್ ಪಕ್ಷ ನನಗೆ ತಾಯಿಯಂತೆ, ಇದು ನಮ್ಮ ಮನೆ, ಮನೆ ಕಟ್ಟಿದವರು ನಾವು, ಕೂಲಿ ಮಾಡಿದ್ದೇನೆ ನನ್ನ ಅಧ್ಯಕ್ಷತೆಯಲ್ಲಿ 135 ಶಾಸಕರು ಆಯ್ಕೆ ಆಗಿದ್ದಾರೆ ಎಂದು ತಿಳಿಸಿದರು.