ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳಲ್ಲಿ ನಾಲ್ಕು ಕಡೆಗಳಲ್ಲಿ ಕಾಂಗ್ರೆಸ್, ಎರಡು ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಸಾಧಿಸಿವೆ. ತೀವ್ರ ಜಿದ್ದಾಜಿದ್ದಿ ಕ್ಷೇತ್ರಗಳಲ್ಲಿ ಘಟಾನುಘಟಿ ನಾಯಕರು ಸೋಲು ಕಂಡಿದ್ದು, ಪ್ರಬುದ್ಧ ಮತದಾರರು ಫಲಿತಾಂಶದ ನಿರೀಕ್ಷೆಯನ್ನು ಉಲ್ಟಾಪಲ್ಟಾ ಮಾಡಿದ್ದಾರೆ.
ಹಳಿಯಾಳ, ಕಾರವಾರ, ಭಟ್ಕಳ ಮತ್ತು ಶಿರಸಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಜಯಭೇರಿ ಬಾರಿಸಿದ್ದಾರೆ, ಇನ್ನೂ ಯಲ್ಲಾಪುರ ಮತ್ತು ಕುಮಟಾದಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.
ಭಟ್ಕಳದ ಕಾಂಗ್ರೆಸ್ ಅಭ್ಯರ್ಥಿ ಮಂಕಾಳ ವೈದ್ಯ 35 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿ ಸುನೀಲ ನಾಯ್ಕ ಅವರನ್ನು ಸೋಲಿಸಿದರು.
ಹಳಿಯಾಳದಲ್ಲಿ ಆರ್. ವಿ. ದೇಶಪಾಂಡೆ 9 ನೇ ಬಾರಿಗೆ ಶಾಸಕರಾಗಿ ಆಯ್ಕೆಯಾದರು. ಶಿರಸಿ ಕ್ಷೇತ್ರದಿಂದ ಆಯ್ಕೆಯಾದ ಭೀಮಣ್ಣ ನಾಯ್ಕ 29 ವರ್ಷಗಳ ಬಳಿಕ ಕ್ಷೇತ್ರದಲ್ಲಿ ಕಾಂಗ್ರೆಸ್ ಖಾತೆ ತೆರೆದರು. ಕಾರವಾರದಲ್ಲಿ ಕಳೆದ ಚುನಾವಣೆಯಲ್ಲಿ ಸೋಲು ಕಂಡಿದ್ದ ಸತೀಶ ಸೈಲ್ ಅವರು ಎದುರಾಳಿ ರೂಪಾಲಿ ನಾಯ್ಕ್ ಅವರ ವಿರುದ್ಧ ಗೆಲುವು ಸಾಧಿಸಿದರು.
ಕಳೆದ ಚುನಾವಣೆಯಲ್ಲಿ ಐದು ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದ ಬಿಜೆಪಿ ಈ ಬಾರಿ ಯಲ್ಲಾಪುರ ಮತ್ತು ಕುಮಟಾ ಕ್ಷೇತ್ರವನ್ನು ಮಾತ್ರ ಉಳಿಸಿಕೊಂಡಿತು. ಯಲ್ಲಾಪುರದಲ್ಲಿ ಶಿವರಾಮ ಹೆಬ್ಬಾರ ಗೆಲುವು ಸಾಧಿಸಿದರು. ಕುಮಟಾದಲ್ಲಿ ಬಿಜೆಪಿ ದಿನಕರ ಶೆಟ್ಟಿ ಅವರು ಗೆಲುವು ಸಾಧಿಸಿದರು.