ಕೇರಳ: ಮಲಪ್ಪುರಂ ಜಿಲ್ಲೆಯ ತಿರೂರು ತಾಲೂಕಿನ ತಾನೂರ್ ಬಳಿ ಬೋಟ್ ವೊಂದು ಪಲ್ಟಿ ಹೊಡೆದ ಪರಿಣಾಮ ಆರು ಮಂದಿ ಮಕ್ಕಳು, ಮಹಿಳೆಯರು ಸೇರಿದಂತೆ 15 ಮಂದಿ ದುರ್ಮರಣ ಹೊಂದಿದ್ದಾರೆ ಎಂದು ಸಚಿವ ವಿ ಅಬ್ದುಲ್ ರಹಿಮಾನ್ ತಿಳಿಸಿದ್ದಾರೆ.
30ರಿಂದ 40 ಕ್ಕೂ ಹೆಚ್ಚು ಪ್ರವಾಸಿಗರಿದ್ದ ಬೋಟ್ ಪಲ್ಟಿಯಾಗಿ ಈ ದುರಂತವು ಸಂಭವಿಸಿದೆ. ದುರಂತದಲ್ಲಿ ಮೃತರ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಅಗ್ನಿಶಾಮಕ ದಳ, ಪೊಲೀಸರಿಂದ ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ. ತೂವಲ್ ತೀರ್ಥಂ ಪ್ರವಾಸಿ ತಾಣದ ಪುರಪೂಜಾ ನದಿಯಲ್ಲಿ ರಾತ್ರಿ ಈ ಘಟನೆ ನಡೆದಿದೆ ಎನ್ನಲಾಗುತ್ತಿದೆ.
ಸುಮಾರು 10 ಮಂದಿಯನ್ನು ರಕ್ಷಣೆ ಮಾಡಲಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳೀಯ ಮಾಧ್ಯಮಗಳ ವರದಿಯ ಪ್ರಕಾರ, ಬೋಟ್ನಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಿದ್ದು, ಜೀವ ರಕ್ಷಕ ಸಾಧನಗಳು ಇರಲಿಲ್ಲ ಎಂದು ತಿಳಿದು ಬಂದಿದೆ. ದೋಣಿ ದಡದಿಂದ 300 ಮೀಟರ್ ದೂರಲ್ಲಿತ್ತು. ದೋಣಿಯಲ್ಲಿದ್ದ ಪ್ರಯಾಣಿಕರು ಮಲಪ್ಪುರಂ ಜಿಲ್ಲೆಯ ಪರಪ್ಪನಂಗಡಿ ಮತ್ತು ತನೂರ್ ಪ್ರದೇಶಗಳಿಗೆ ಸೇರಿದವರು ಎಂದು ಗುರತಿಸಲಾಗಿದೆ. ಇಲ್ಲಿನ ಮನರಂಜನಾ ದೋಣಿ ಸೇವೆಗಳಿಗೆ ಸಂಜೆ 5 ರವರೆಗೆ ಮಾತ್ರ ಕಾರ್ಯನಿರ್ವಹಿಸಲು ಅನುಮತಿ ನೀಡಲಾಗಿತ್ತು. ಆದರೆ ನಿಯಮ ಮೀರಿ ದೋಣಿ ಕಾರ್ಯಾಚರಣೆ ಮಾಡುತ್ತಿದ್ದವು ಎಂದು ತಿಳಿದು ಬಂದಿದೆ.