ಕಾರವಾರ: ಇಲ್ಲಿನ ಸಾಯಿಕಟ್ಟಾ ನರಸಿಂಹ ದೇವಸ್ಥಾನದ ಸಮೀಪ ಕಾರವಾರ-ಅಂಕೋಲಾ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರೂಪಾಲಿ ನಾಯ್ಕ ಅವರು ಶನಿವಾರ ಪ್ರಚಾರ ಸಭೆ ನಡೆಸಿ ಮತಯಾಚನೆ ಮಾಡಿದರು.
ಅವರು ಈ ವೇಳೆ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯಕ್ರಮ ತಡೆಯಲು ಕೆಲ ಶಕ್ತಿಗಳು ಪ್ರಯತ್ನಿಸಿದವು ಆದರೆ ಅದು ಯಶಸ್ಸು ಆಗಲಿಲ್ಲ. ದೇವರ ಅನುಗ್ರಹ ಹಾಗೂ ಕ್ಷೇತ್ರದ ಜನರ ಅಪಾರ ಅಭಿಮಾನ, ಆಶೀರ್ವಾದವು ಇದ್ದ ಕಾರಣ ಕಾರ್ಯಕ್ರಮ ಅಭೂತಪೂರ್ವ ಯಶಸ್ಸು ಕಂಡಿದೆ. 8 ದಿನಗಳ ಅವಧಿಯಲ್ಲಿ ನಾನೂ ಸೇರಿದಂತೆ ನಮ್ಮ ಜಿಲ್ಲಾ ಬಿಜೆಪಿ ತಂಡವು ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಆಯೋಜನೆ ಮಾಡುವ ಮೂಲಕ ಜನರ ಪ್ರೀತಿಗೆ ಪಾತ್ರ ಆಗಿದ್ದೇವೆ ಎಂದು ಹೇಳಿದರು.
ನಾನು ಯಾವತ್ತೂ ಅಭಿವೃದ್ಧಿ ಪರ ಇರುತ್ತೇನೆ. ಅಭಿವೃದ್ಧಿ ಪರ ಕೆಲಸ ಮಾಡಿದ್ದೇನೆ ಎಂದಾದರೆ ನನಗೆ ಮತ ನೀಡಿ. ಕೆಲಸ ಮಾಡಿದ್ದರೆ ಮಾತ್ರವೇ ನಿಮ್ಮ ಮುಂದೆ ಬಂದು ನಿಲ್ಲುವ ಅವಕಾಶ ಹಾಗೂ ಧೈರ್ಯ ಇರುತ್ತದೆ. ಕಷ್ಟದ ಕಾಲದಲ್ಲಿ ಸಿಗದೇ ಐದು ವರ್ಷಗಳಿಗೊಮ್ಮೆ ಮುಖ ತೋರಿಸುವವರಿಂದ ಅಭಿವೃದ್ಧಿ ಬಯಸುವುದು ಸಾಧ್ಯವಿಲ್ಲ. ಐದು ವರ್ಷಗಳಿಂದ ನಿಮ್ಮ ನಡುವೆ ಇದ್ದು ನಿಮ್ಮ ಕಷ್ಟಗಳಿಗೆ ಸ್ಪಂದಿಸುವೆ. ತಾವೆಲ್ಲರೂ ನನಗೆ ಮತ್ತೊಮ್ಮೆ ನಿಮ್ಮ ಸೇವೆ ಮಾಡುವ ಅವಕಾಶ ನೀಡುತ್ತೀರಿ ಎಂಬ ನಂಬಿಕೆ ಇದೆ ಎಂದು ಹೇಳಿದರು.
ಮೋದಿಜೀ ಅವರು ಹೇಳಿದಂತೆ ಮೇ 10 ರಂದು ಮತದಾನದ ದಿನ ಜೈ ಬಜರಂಗಬಲಿ ಎಂದು ಬಿಜೆಪಿ ಪಕ್ಷದ ಕಮಲದ ಗುರುತಿಗೆ ಮತ ನೀಡಿ, ನನ್ನನ್ನು ಆಯ್ಕೆ ಮಾಡಬೇಕು ಎಂದು ಮನವಿ ಮಾಡಿದರು.
ವಿಧಾನ ಪರಿಷತ್ ಸದಸ್ಯರಾದ ಗಣಪತಿ ಉಳ್ವೇಕರ, ಕಾರವಾರ ಬಿಜೆಪಿ ನಗರ ಘಟಕದ ಅಧ್ಯಕ್ಷ ನಾಗೇಶ ಕುರುಡೇಕರ, ಕಾರವಾರ ನಗರಸಭೆ ಉಪಾಧ್ಯಕ್ಷ ಪಿ.ಪಿ ನಾಯ್ಕ, ಕಾರವಾರ ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಮನೋಜ ಬಾಂದೇಕರ, ಕಾರವಾರ ಯುವ ಮೋರ್ಚಾ ತಾಲೂಕು ಘಟಕದ ಅಧ್ಯಕ್ಷ ಶುಭಂ ಕಳಸ, ಪ್ರಮುಖರಾದ ದೇವಿದಾಸ ನಾಯ್ಕ, ದಿವ್ಯಾ ದೇವಿದಾಸ ನಾಯ್ಕ ಹಾಗೂ ಕಾರ್ಯಕರ್ತರು, ಪ್ರಮುಖರು, ಸಾರ್ವಜನಿಕರು ಇದ್ದರು.