ಹುಬ್ಬಳ್ಳಿ: ಹೆಸ್ಕಾಂ ವಿಚಕ್ಷಣ ದಳದ ಸಬ್ ಇನ್ಸ್ಪೆಕ್ಟರ್ ಮಲ್ಲಿಕಾರ್ಜುನ ಕುಲಕರ್ಣಿ (40) ಅವರು ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಅವರಿಗೆ ಪತ್ನಿ ಮತ್ತು ಒಬ್ಬ ಪುತ್ರ ಇದ್ದಾರೆ.
ತಾಲೂಕಿನ ಕಿರೇಸೂರ ಗ್ರಾಮದ ಹುಬ್ಬಳ್ಳಿ– ವಿಜಯಪುರ ಹೆದ್ದಾರಿಯಲ್ಲಿ ಸ್ವಗ್ರಾಮಕ್ಕೆ ತಮ್ಮ ಕಾರಿನಲ್ಲಿ ಹೋಗುತ್ತಿದ್ದರು. ಈ ವೇಳೆ ಕಾರಿನ ನಿಯಂತ್ರಣ ಕಳೆದುಕೊಂಡಿದ್ದರಿಂದ, ಪಕ್ಕದ ತಡೆಗೋಡೆಗೆ ಕಾರು ಡಿಕ್ಕಿಯಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಘಟನೆ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಲ್ಲಿಕಾರ್ಜುನ ಅವರು 2010 ನೇ ಬ್ಯಾಚ್ ಪೊಲೀಸ್ ಅಧಿಕಾರಿ ಆಗಿದ್ದರು.