ಕುಂದಾಪುರ: ಬಿಜೆಪಿ ಎಂದರೆ ಅಭಿವೃದ್ಧಿ ಎಂಬುದು ಜನರ ಅರಿವಿಗೆ ಬಂದಿದೆ. ಕಾಂಗ್ರೆಸ್ ಅಲೆ ಕೊಚ್ಚಿ ಹೋಗಿದೆ. ವಾರಂಟಿ ಇಲ್ಲದ ಗ್ಯಾರಂಟಿ ಕಾರ್ಡ್ ಮಾತ್ರ ಅವರ ಬದುಕು. ಇಂತಹ ಪೊಳ್ಳು ಭಾಷಣಕ್ಕೆ ಯಾರು ಮರಳಾಗುವುದಿಲ್ಲ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.
ಕುಂದಾಪುರ ಪುರಸಭಾ ವ್ಯಾಪ್ತಿಯಲ್ಲಿ ಬಿಜೆಪಿ ಅಭ್ಯರ್ಥಿ ಕಿರಣ್ ಕುಮಾರ್ ಕೊಡ್ಗಿ ಅವರ ಪರ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿ, ದಿಲ್ಲಿಯಿಂದ ಹಳ್ಳಿ ತನಕ ಕಾಂಗ್ರೆಸ್ ಸರಕಾರವಿದ್ದಾಗ ಜನರಿಗೆ ಉಪಯೋಗವಾಗುವ ಅಭಿವೃದ್ಧಿ ಕೆಲಸ ಮಾಡಿಲ್ಲ. 10 ವರ್ಷದಲ್ಲಿ ಮನಮೋಹನ್ ಸಿಂಗ್ ಸರಕಾರ ಮಾಡಿದ್ದೇನು ಎಂಬುದನ್ನು ಜನರಿಗೆ ತಿಳಿಸಲಿ ಎಂದರು.
ರಾಜ್ಯದಲ್ಲಿ ಬಿಜೆಪಿ ಪರ ವಾತಾವರಣ ಕಂಡು ಬರುತ್ತಿದೆ. ರಾಜ್ಯ- ಕೇಂದ್ರದ ನಾಯಕರು ರಾಜ್ಯದಲ್ಲಿ ಪ್ರವಾಸ ಮಾಡುತ್ತಿದ್ದಾರೆ. ಮೋದಿ ಅವರ ಕೈ ಬಲಪಡಿಸುವ ಕಾರ್ಯವಾಗಬೇಕಿದೆ. ರಾಜ್ಯದಲ್ಲಿ 130 ಕ್ಕೂ ಅಧಿಕ ಶಾಸಕರು ಬಿಜೆಪಿಯಿಂದ ಗೆಲ್ಲುವ ವಿಶ್ವಾಸವಿದೆ. ಅಭಿವೃದ್ಧಿ ಸರ್ಕಾರದ ಅಗತ್ಯತೆ ಬಗ್ಗೆ ಜನರಿಗೆ ಒಲವಿದೆ. ಉಡುಪಿ ಜಿಲ್ಲೆಯಲ್ಲಿ 5 ಕ್ಷೇತ್ರ ಬಿಜೆಪಿ ತೆಕ್ಕೆಗೆ ಬರಲಿದೆ ಎಂದರು.
ಬಿಜೆಪಿ ಅಭ್ಯರ್ಥಿ ಕಿರಣ್ ಕುಮಾರ್ ಕೊಡ್ಗಿ, ಮುಖಂಡರಾದ ಶ್ಯಾಮಲಾ ಕುಂದರ್, ಮೋಹನದಾಸ್ ಶೆಣೈ, ಕಾಡೂರು ಸುರೇಶ್ ಶೆಟ್ಟಿ, ಭಾಸ್ಕರ್ ಪುತ್ರನ್ ಇದ್ದರು.