
ಮಂಗಳೂರು: ದಾನದ ಮೂಲಕ ಸಾನಿಧ್ಯದ ಬೆಳವಣಿಗೆಗೆ ಬಹಳಷ್ಟು ದಾನಿಗಳು ದಾನ ನೀಡಿದ್ದಾರೆ. ಜಾತಿ ಮತ ಧರ್ಮದ ಭೇದವಿಲ್ಲದೆ ಎಲ್ಲ ಜನರು ದಾನ ನೀಡುತ್ತಾರೆ. ಸಾನಿಧ್ಯದಲ್ಲಿ ನಿರ್ಮಾಣ ಮಾಡಿರುವ ಅಕ್ವೆಟಿಕ್ ಥೆರಪಿಯ ಸಾನಿಧ್ಯ ಹೈಡ್ರೋ– ಈಜುಕೊಳ ವಿದ್ಯಾರ್ಥಿಗಳಿಗೆ ವರವಾಗಲಿದೆ ಎಂದು ಸಂತ ಅಲೋಶಿಯಸ್ ಕಾಲೇಜಿನ ಫಾ. ಮೆಲ್ವಿನ್ ಪಿಂಟೋ ಹೇಳಿದರು.
ಅಕ್ವೆಟಿಕ್ ಥೆರಪಿಯ ಸಾನಿಧ್ಯ ಹೈಡ್ರೋ– ಈಜುಕೊಳವನ್ನು ವಿಶೇಷ ಮಕ್ಕಳಿಗೆ ಶುಕ್ರವಾರ ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.

ಸಾನಿಧ್ಯಸಾಕಷ್ಟು ಬೆಳೆದಿದೆ ಮಾತ್ರವಲ್ಲದೆ ದಾನದ ಮೂಲಕ ಸಾನಿಧ್ಯದ ವಿಶೇಷ ಮಕ್ಕಳಿಗೆ ಅಗತ್ಯ ಎಲ್ಲಾ ಸೌಕರ್ಯಗಳನ್ನು ಒದಗಿಸಿ ತರಬೇತಿ ನೀಡುತ್ತಿರುವ ಸಾನಿಧ್ಯದ ಕಾರ್ಯ ಅಭಿನಂದನೀಯ ಎಂದರು.
ಸಾನಿಧ್ಯ ಹೈಡ್ರೋ ಈಜುಕೊಳ ನಿರ್ಮಾಣಕ್ಕಾಗಿ ನಿಧಿ ಸಂಗ್ರಹಿಸಿದ ವಿಶೇಷ ವಿದ್ಯಾರ್ಥಿ ರೆನೆವರ್ ಮಾರಿಯನ್ ಡಿಸೋಜಾ ಈತನ ತಂದೆ ಎರಿಕ್ ಜೆ. ಬಿ. ಡಿಸೋಜ ಅವರನ್ನು ಸನ್ಮಾನಿಸಲಾಯಿತು. ಈಜುಕೊಳ ನಿರ್ಮಾಣ ಮಾಡಿದ ಶಿಲೋಮ್ ಸಂಸ್ಥೆಯ ಮಾಲೀಕ ಕ್ಲೆನ್ ಫರ್ನಾಂಡಿಸ ಹಾಗೂ ಈಜುಕೊಳದ ಇತರ ಪೂರಕ ಕಾಮಗಾರಿ ನಿರ್ವಹಿಸಿದ ಸಂತೋಷ್ ಶೆಟ್ಟಿ ಕುಂಬ್ಲೆ ಅವರನ್ನು ಅಭಿನಂದಿಸಲಾಯಿತು.
ಈಜುಕೊಳದ ಹಿಂಬದಿ ಗೋಡೆಯನ್ನು ಸೌಂದರೀಕರಣಗೊಳಿಸಿದ ಸಾನಿಧ್ಯದ ಸಹಾಯಕ ಅಡಳಿತಾಧಿಕಾರಿ ಸುಮಾ ಡಿಸಿಲ್ವಾ ಹಾಗೂ ಕರಕುಶಲ ತರಬೇತುದಾರರಾದ ಶುಭ ಅವರನ್ನು ಅಭಿನಂದಿಸಲಾಯಿತು. ಡೈಜಿವಲ್ಡ್ ನಿರ್ದೇಶಕ ಹೇಮಾಚಾರ್ಯ ಹಾಗೂ ರಾಷ್ಟ್ರೀಯ ಈಜು ಪಟು ಬೆಂಗ್ರೆ ಆನಂದ್ ಅಮೀನ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಗಣೇಶ ಸೇವಾ ಟ್ರಸ್ಟಿ ಅಧ್ಯಕ್ಷ ಮಹಾಬಲ ಮಾರ್ಲ ಅಧ್ಯಕ್ಷತೆಯನ್ನು ವಹಿಸಿದ್ದರು. ಟ್ರಸ್ಟಿ ಖಜಾಂಚಿ ಜಗದೀಶ್ ಶೆಟ್ಟಿ, ಜೊತೆ ಕಾರ್ಯದರ್ಶಿ ಪ್ರೊ. ರಾಧಾಕೃಷ್ಣ, ನಿರ್ದೇಶಕ ಮೊಹಮ್ಮದ್ ಬಶೀರ್, ಸ್ಟೀಪನ್ ಪಿಂಟೋ, ನಂದಕುಮಾರ್ , ದಿವ್ಯಾ ಬಾಳಿಗ, ಗೌರವ ಸಲಹೆಗಾರ ಜ್ಯೋತಿಕಾ ಆಳ್ವ, ಸಂತೋಷ್ ಶೆಟ್ಟಿ ಇದ್ದರು.
ಸಾನಿಧ್ಯದ ಯಕ್ಷಗಾನ ಪಟುಗಳನ್ನು, ನಾಟಕದಲ್ಲಿ ಭಾಗವಹಿಸಿದ ನಟರನ್ನು, ನೃತ್ಯಗಾರ್ತಿಯರನ್ನು ಅಭಿನಂದಿಸಲಾಯಿತು. ಸಾನಿಧ್ಯದ ಆಡಳಿತಾಧಿಕಾರಿ ಡಾ. ವಸಂತ್ ಕುಮಾರ್ ಶೆಟ್ಟಿ ಸ್ವಾಗತಿಸಿದರು. ಮನಃಶಾಸ್ತ್ರಜ್ಞೆ ಅನಘಾ ಭಾರ್ಗವ್ ಕಾರ್ಯಕ್ರಮ ನಿರೂಪಿಸಿದರು.


