ಉಡುಪಿ: ಭದ್ರಾವತಿ ತಾಲೂಕಿನ ಚೆನ್ನಗಿರಿಯಲ್ಲಿ ರಸ್ತೆಯಲ್ಲಿ ಅಪಘಾತದಿಂಧ ತೀವ್ರವಾಗಿ ಗಾಯಗೊಂಡು ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಾದ 21 ವರ್ಷ ಪ್ರಾಯದ ಉಲ್ಲಾಸ್ ಚಿಕಿತ್ಸೆಗೆ ಸ್ಪಂದಿಸದೇ ಮೆದುಳು ನಿಷ್ಕ್ರೀಯಗೊಂಡಿತ್ತು. ಕುಟುಂಬದವರು ಆತನ ಅಂಗಾಂಗ ದಾನಕ್ಕೆ ನಿರ್ಧರಿಸಿದ ಪರಿಣಾಮ ಏಳು ಮಂದಿ ರೋಗಿಗಳ ಬಾಳಲ್ಲಿ ಉಲ್ಲಾಸ ಮೂಡಿಸಿದ ಹೆಗ್ಗಳಿಕೆ ಉಲ್ಲಾಸ್ ನಿಗೆ ಸಲ್ಲುತ್ತದೆ.
ಅಪಘಾತದಿಂದ ತೀವ್ರವಾಗಿ ಗಾಯಗೊಂಡಿದ್ದು ಉಲ್ಲಾಸ್ ಅವರನ್ನು ಚಿಕಿತ್ಸೆಗಾಗಿ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಭದ್ರಾವತಿ ತಾಲೂಕಿನ ಕೆಂಚನಹಳ್ಳಿ ಗ್ರಾಮದ ನೀರಗುಂಡಿಯ ರಾಜಪ್ಪ ಎಂಬುವವರ ಪುತ್ರ ಉಲ್ಲಾಸ್ ಗೆ ಅಪಘಾತದಿಂದ ತೀವ್ರವಾದ ಪೆಟ್ಟು ಆಗಿತ್ತು. ವೈದ್ಯರು ಅವರನ್ನು ರಕ್ಷಿಸಲು ಹರಸಾಹಸ ಪಟ್ಟರು ಉಲ್ಲಾಸ್ ಚಿಕಿತ್ಸೆಯಲ್ಲಿ ಸ್ವಲ್ಪವು ಚೇತರಿಕೆ ಕಾಣಲಿಲ್ಲ.
ಉಲ್ಲಾಸ್ ಅವರನ್ನು ಎರಡು ಬಾರಿ ಪರಿಶೀಲಿಸಿದ ಮಣಿಪಾಲ ವೈದ್ಯರ ತಂಡವು, ಚಿಕಿತ್ಸೆಯ ಎಲ್ಲ ದಾರಿಗಳನ್ನು ನೋಡಿದಾಗಲೂ ಯಾವುದೇ ಬೆಳವಣಿಗೆ ಹಂತ ಕಾಣದೇ ಇದ್ದಾಗ ಮೆದುಳು ನಿಷ್ಕ್ರೀಯಗೊಂಡಿರುವ ಬಗ್ಗೆ ಘೋಷಣೆ ಮಾಡಿದರು. ಬಳಿಕ ಉಲ್ಲಾಸ್ ಅವರ ತಂದೆ ರಾಜಪ್ಪ ಮತ್ತು ಅವರ ಕುಟುಂಬ ಸದಸ್ಯರು ಮಗನ ಅಂಗಾಂಗಗಳನ್ನು ದಾನ ಮಾಡುವುದಕ್ಕೆ ಮುಂದಾದರು. ಮಗನ ಸಾವು ಕಣ್ಮುಂದೇ ಇದ್ದಾಗಲು ದೃತಿಗೆಡದೇ ಮತ್ತೊಬ್ಬರ ಬಾಳಿಗೆ ತಮ್ಮ ಮಗನ ಅಂಗಾಗಂಗಳು ಉಪಯೋಗವಾಗಲಿ ಎಂದು ಮಾಡಿದ ದೃಢ ನಿರ್ಧಾರ ಮಾಡಿದರು.
ಹೃದಯ, ಶ್ವಾಸಕೋಶ, ಮೂತ್ರಪಿಂಡ, ಯಕೃತ್ತು ಮತ್ತು ಎರಡು ಕಾರ್ನಿಯಾಗಳು ಸೇರಿ ಒಟ್ಟು 7 ಮಂದಿ ರೋಗಿಗಳ ಜೀವ ಉಳಿಸಲು ಉಲ್ಲಾಸ್ ಅವರ ಅಂಗಾಂಗಳು ಸಹಕಾರಿ ಆಗಿವೆ. ಜೀವನ ಸಾರ್ಥಕತೆ ಪ್ರೋಟೋಕಾಲ್ಗಳು ಮತ್ತು ನಿರ್ಧಾರಗಳ ಪ್ರಕಾರ, ಶ್ವಾಸಕೋಶಗಳನ್ನು ಅಪೊಲೊ ಆಸ್ಪತ್ರೆ ಚೆನ್ನೈ, ಯಕೃತ್ ವನ್ನು ಬೆಂಗಳೂರಿನ ಅಸ್ಟರ್ ಸಿಎಂಐ ಆಸ್ಪತ್ರೆ, ಒಂದು ಮೂತ್ರಪಿಂಡವನ್ನು ಮಂಗಳೂರಿನ ಎ. ಜೆ. ಆಸ್ಪತ್ರೆ ಮತ್ತು ಎರಡು ಕಾರ್ನಿಯಾಗಳು ಹಾಗೂ ಒಂದು ಮೂತ್ರಪಿಂಡವನ್ನು ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯಲ್ಲಿರುವ ನೋಂದಾಯಿತ ರೋಗಿಗಳಿಗೆ ಬಳಸಲಾಯಿತು.
ಮಗನ ಅಂಗಾಂಗಗಳ ದಾನದ ಕುರಿತು ಮಾತನಾಡಿದ ರಾಜಪ್ಪ, ಇದೊಂದು ಪುಣ್ಯದ ಕೆಲಸ ಎಂದು ತಾವು ಭಾವಿಸುತ್ತೇವೆ. ತನ್ನ ಮಗ ಅಂಗದಾನ ಮಾಡಿ ತನ್ನ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾನೆ ಎಂದು ನುಡಿದರು.
ಉಲ್ಲಾಸ್ ಕುಟುಂಬದ ಈ ನಿರ್ಧಾರ ಜನರು ಬದಲಾಗುತ್ತಿರುವ ಮನಸ್ಥಿತಿ ತೋರಿಸುತ್ತದೆ. ಇದು ಸ್ವಾಗತಾರ್ಹ ಬದಲಾವಣೆ ಆಗಿದೆ ಮತ್ತು ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಜನರು ಇಂತಹ ನಿರ್ಧಾರ ತೆಗೆದುಕೊಳ್ಳುತ್ತಿದ್ದಾರೆ. ಇನ್ನಷ್ಟು ಜನರು ಇದನ್ನು ಅನುಕರಿಸುವ ಅಗತ್ಯವಿದೆ ಎಂದು ಕೆಎಂಸಿ ವೈದ್ಯಕೀಯ ಅಧೀಕ್ಷಕ ಡಾ.ಅವಿನಾಶ ಶೆಟ್ಟಿ ಹೇಳಿದರು.
ದಾನ ಮಾಡಿದ ಅಂಗಗಳನ್ನು ಉಡುಪಿ ಮತ್ತು ದಕ್ಷಿಣ ಕನ್ನಡ ಪೊಲೀಸ್ ಇಲಾಖೆ ಸಹಕಾರದಿಂದ ಮಣಿಪಾಲದಿಂದ ಮಂಗಳೂರಿಗೆ ಗ್ರೀನ್ ಕಾರಿಡಾರ್ ಮೂಲಕ ಸ್ವೀಕರಿಸುವ ಆಸ್ಪತ್ರೆಗೆ ಕಳುಹಿಸಿಕೊಡಲಾಯಿತು ಎಂದು ಕೆಎಂಸಿ ಆಸ್ಪತ್ರೆ ವೈದ್ಯಕೀಯ ತಂಡವು ಪ್ರಕಟಣೆಯಲ್ಲಿ ತಿಳಿಸಿದೆ.