ಮಂಗಳೂರು: ‘ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಜೆಪಿ ಸಂಸದರು ಮತ್ತು ಪಕ್ಷದ ಶಾಸಕರು ಅನುತ್ಪಾದಕ ಆಸ್ತಿ ಆಗಿದ್ದಾರೆ’ ಎಂದು ಎಐಸಿಸಿ ವಕ್ತಾರ ಚರಣ್ ಸಿಂಗ್ ಸಪ್ರಾ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಯುವಕರಿಗೆ ಯಾವುದೇ ಉದ್ಯೋಗ ಸೃಷ್ಟಿಸಲು ಅವರು ವಿಫಲರಾಗಿದ್ದಾರೆ. ಪ್ರವಾಸೋದ್ಯಮ ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿಯಾಗಿಲ್ಲ. ಜಿಲ್ಲೆಗೆ ಹೂಡಿಕೆದಾರರನ್ನು ಸೆಳೆಯುವಲ್ಲಿ ಅವರಿಂದ ಪ್ರಯತ್ನ ನಡೆದಿಲ್ಲ ಎಂದರು.
ರಾಷ್ಟ್ರೀಕೃತ ಬ್ಯಾಂಕ್ಗಳನ್ನು ವಿಲೀನ ಮಾಡುವ ಮೂಲಕ ಬಿಜೆಪಿ ಕರ್ನಾಟಕದ ಪ್ರತಿಷ್ಠಿತೆ ಹಾಳು ಮಾಡಿದೆ. ಕೆಲ ಮೋಸದ ಕೈಗಾರಿಕೋದ್ಯಮಿಗಳ ಹಿತಕ್ಕಾಗಿ ವಿಜಯಾ ಬ್ಯಾಂಕ್ ಅನ್ನು ಬ್ಯಾಂಕ್ ಆಫ್ ಬರೋಡಾ ಜತೆಗೆ ವಿಲೀನಗೊಳಿಸಲಾಗಿದೆ ಎಂದು ದೂರಿದರು.
ಬಿಜೆಪಿ ಸರಕಾರ ಬ್ರ್ಯಾಂಡ್ ಕರ್ನಾಟಕಕ್ಕೆ ಧಕ್ಕೆ ತಂದಿದೆ. ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬರುವುದು ಖಚಿತ. ಕರ್ನಾಟಕದ ಬ್ರ್ಯಾಂಡ್ನ್ನು ಮರು ನಿರ್ಮಾಣ ಮಾಡಲಿದೆ ಎಂದರು.
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಕರ್ನಾಟಕದ ಪ್ರತಿಷ್ಠಿಯನ್ನು ಮರುಸ್ಥಾಪಿಸುತ್ತೇವೆ. ಕಾಂಗ್ರೆಸ್ ಸತ್ಯಕ್ಕಾಗಿ ಹೋರಾಡುವ ಪಕ್ಷ. ಕಾಂಗ್ರೆಸ್ ಯಾವಾಗಲೂ ತನ್ನ ಭರವಸೆಗಳಿಗೆ ಬದ್ಧವಾಗಿದೆ. ರಾಜ್ಯದಲ್ಲಿ ಬಿಜೆಪಿ ಧ್ರುವೀಕರಣ ರಾಜಕಾರಣ ಈ ಬಾರಿ ಕೆಲಸ ಮಾಡುವುದಿಲ್ಲ.ಬಿಜೆಪಿಯನ್ನು ಜನರು ಅಧಿಕಾರದಿಂದ ಹೊರದಬ್ಬಲಿದ್ದಾರೆ ಎಂದರು.
ಎಐಸಿಸಿ ವಕ್ತಾರೆ ಡಾ. ಶಮಾ ಮುಹಮ್ಮದ್, ಜಾರ್ಖಂಡ್ ನ ಶಾಸಕ ಭುವನ್, ಪಕ್ಷದ ಧುರೀಣರಾದ ನವೀನ್ ಡಿ ಸೋಜ, ಶಾಲೆಂಟ್ ಪಿಂಟೊ , ಶಾಹುಲ್ ಹಮೀದ್, ಎ.ಸಿ.ವಿನಯರಾಜ್ ಇದ್ದರು.