ಮಂಗಳೂರು: ಕರಾವಳಿಯಲ್ಲಿ ಪವಿತ್ರ ರಂಜಾನ್ ಹಬ್ಬವನ್ನು ಮುಸ್ಲಿಮರು ಶನಿವಾರ ಸಡಗರ, ಸಂಭ್ರಮದಿಂದ ಈದ್ ಉಲ್ ಫಿತ್ರ್ ಆಚರಣೆ ಮಾಡಿದರು.
ದಕ್ಷಿಣ ಕನ್ನಡ ಮತ್ತು ಉಡುಪಿ ಹಾಗೂ ಕಾಸರಗೋಡು ಜಿಲ್ಲೆಯ ಎಲ್ಲಾ ಜುಮ್ಮಾ ಮಸೀದಿ, ಈದ್ಗಾಗಳಲ್ಲಿ ಸಾಮೂಹಿಕ ನಮಾಜ್, ಈದ್ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು.
ಚಿಕ್ಕ ಮಕ್ಕಳು, ಹಿರಿಯರ ಸೇರಿದಂತೆ ರಂಜಾನ್ ವ್ರತ ಮಾಡಿದವರು ಹೊಸ ಬಟ್ಟೆ ಧರಿಸಿ, ವಿಶಿಷ್ಟ ತರಹೇವಾರಿ ಖಾದ್ಯಗಳನ್ನು ತಯಾರಿಸಿದ್ದರು ಕುಟುಂಬ ಸಮೇತರಾಗಿ ಹಬ್ಬವನ್ನು ಸಂಭ್ರಮಿಸಿದರು. ಕುಟುಂಬಸ್ಥರು, ಸ್ನೇಹಿತರು, ಸಮೀಪದ ನಿವಾಸಿಗಳ ಮನೆಗೆ ತೆರಳಿ ಈದ್ ಶುಭಾಶಯ ಕೋರಿದರು.
ಜಿಲ್ಲೆಯ ಬಹುತೇಕ ಎಲ್ಲಾ ಮಸೀದಿ-ಈದ್ಗಾಗಳಲ್ಲಿ ವಿಶೇಷ ನಮಾಜ್, ಪ್ರವಚನ ಬಳಿಕ ಪರಸ್ಪರ ಹಸ್ತಲಾಘವ, ಆಲಿಂಗನದ ಮೂಲಕ ಹಬ್ಬದ ಶುಭಾಶಯ ವಿನಿಮಯ ಹಾಗೂ ಮನೆಗಳಲ್ಲಿ ಹಬ್ಬದ ಸಂಭ್ರಮ ಕಂಡು ಬಂತು.
ನಗರದ ಬಾವುಟಗುಡ್ಡದ ಈದ್ಗಾ ಜುಮ್ಮಾ ಮಸೀದಿಗಳಲ್ಲಿ ಬಂದರ್ ಝೀನತ್ ಬಕ್ಷ್ ಕೇಂದ್ರ ಜುಮಾ ಮಸೀದಿಯ ಖತೀಬ್ ಅಲ್ಹಾಜ್ ಅಬುಲ್ ಅಕ್ರಂ ಮುಹಮ್ಮದ್ ಬಾಖವಿ ನೇತೃತ್ವದಲ್ಲಿ ಮತ್ತು ಉಳ್ಳಾಲ ಕೇಂದ್ರ ಜುಮಾ ಮಸ್ಜಿದ್ನಲ್ಲಿ ಖತೀಬ್ ಇಬ್ರಾಹೀಂ ಸಅದಿ ನೇತೃತ್ವದಲ್ಲಿ ಈದ್ ನಮಾಝ್ ಮತ್ತು ಖುತ್ಬಾ ಪಾರಾಯಣ ನಡೆಯಿತು. ಕುದ್ರೋಳಿ ಸಲಫಿ ಮಸೀದಿ ಮೈದಾನದಲ್ಲಿ ಈದ್ ನಮಾಝ್ ಮತ್ತು ಖುತ್ಬಾ ಪಾರಾಯಣ ನಡೆಯಿತು.
ಮಂಗಳೂರು ಬಾವುಟಗುಡ್ಡದ ಈದ್ಗಾ ಮಸೀದಿಗೆ ಮಾಜಿ ಸಚಿವ ಯು.ಟಿ.ಖಾದರ್, ಮಾಜಿ ಶಾಸಕರಾದ ಜೆ.ಆರ್. ಲೋಬೊ, ಐವನ್ ಡಿಸೋಜ ಸೌಹಾರ್ದ ಭೇಟಿ ನೀಡಿದರು.
ಈದ್ಗಾ ಮಸೀದಿ ಅಧ್ಯಕ್ಷ ಯೆನೇಪೊಯ ಅಬ್ದುಲ್ಲಾ ಕುಂಞಿ ಈದ್ ಸಂದೇಶ ನೀಡಿದರು. ಮಾಜಿ ಮೇಯರ್ ಕೆ. ಅಶ್ರಫ್, ಈದ್ಗಾ ಮಸ್ಜಿದ್ ಕೋಶಾಧಿಕಾರಿ ಸೈಯದ್ ಬಾಷಾ ತಂಙಳ್, ಅದ್ದು ಹಾಜಿ, ಸಮದ್ ಹಾಜಿ ಇದ್ದರು.