ಭಟ್ಕಳ: ಪಕ್ಷದ ಕಾರ್ಯಕರ್ತರು, ಅಭಿಮಾನಿಗಳೊಂದಿಗೆ ಭಟ್ಕಳ ಹೊನ್ನಾವರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಾಂಕಾಳ್ ಎಸ್. ವೈದ್ಯ ಅವರು ಸೋಮವಾರ ನಾಮಪತ್ರ ಸಲ್ಲಿಸಿದರು.
ನಗರದ ಚೆನ್ನಪಣ್ಣ ಹನುಮಂತ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಸಾವಿರಾರು ಸಂಖ್ಯೆಯಲ್ಲಿ ಸೇರಿದ ಕಾರ್ಯಕರ್ತರೊಂದಿಗೆ ಮೆರವಣೆಗೆ ಮೂಲಕ ಹೆಜ್ಜೆ ಹಾಕಿದ ಮಾಂಕಾಳ್ ವೈದ್ಯ ಅವರು ಚುನಾವಣಾಧಿಕಾರಿಗಳಿಗೆ ನಾಮಪತ್ರ ಸಲ್ಲಿಸಿದರು. ಮಾಂಕಾಳ್ ಪುತ್ರಿ ಹಾಗೂ ಪತ್ನಿ ಸಾಥ್ ನೀಡಿದರು.
ಮಾತನಾಡಿದ ವೈದ್ಯ ಅವರು, ಈಗಾಗಲೆ ಭಟ್ಕಳಕ್ಕೆ ಮಾಂಕಾಳ ವೈದ್ಯ ಎಂದು ಜನ ತೀರ್ಮಾನ ಮಾಡಿದ್ದಾರೆ. ಶಿಕ್ಷಣ, ಆರೋಗ್ಯ, ಯುವ ಜನರಿಗೆ ಉದ್ಯೋಗ, ಕೃಷಿ ನೀರಾವರಿಗೆ ಆದ್ಯತೆ ನೀಡಲಾಗುವುದು. ಈ ಬಾರಿ ನಿಮ್ಮ ಸುಳ್ಳುಗಳು ಕೆಲಸ ಮಾಡಲ್ಲ. ನಿಮ್ಮ ಸುಳ್ಳು ಹಿಂದುತ್ವದ ಬಗ್ಗೆ ಜನರು ಜಾಗೃತರಾಗಿದ್ದಾರೆ. ದಯಮಾಡಿ ನೀವು ಹಿಂದುತ್ವದ ಹೆಸರು ಹೇಳಿಕೊಂಡು ಜನರ ಬಳಿ ಹೋಗಬೇಡಿ ಎಂದರು.
ನಾಮಧಾರಿ ಸಮಾಜದ ಹಿರಿಯ ಮುಖಂಡ ಎಲ್.ಎಸ್.ನಾಯ್ಕ ಸೇರಿದಂತೆ ಹಿರಿಯ ಮುಖಂಡರು, ಕಾರ್ಯಕರ್ತರು ಇದ್ದರು.