ಮಂಗಳೂರು: ರಾಜ್ಯದ ವಿಧಾನಸಭಾ ಚುನಾವಣೆ ಫಲಿತಾಂಶವು ಲೋಕಸಭಾ ಚುನಾವಣೆ ದಿಕ್ಸೂಚಿ ಫಲಿತಾಂಶವಾಗಲಿದೆ. ರಾಜ್ಯದ 40 ಪರ್ಸೆಂಟ್ ಸರಕಾರವನ್ನು ಕಿತ್ತು ಹಾಕಲು ಸಜ್ಜಾಗಿದ್ದು, ಸ್ಪಷ್ಟ ಬಹುಮತದ ಸರ್ಕಾರವು ಅಸ್ತಿತ್ವಕ್ಕೆ ಬರಲಿದೆ ಎಂದು ರಾಜ್ಯಸಭಾ ಸದಸ್ಯ ಹಾಗೂ ಕೆಪಿಸಿಸಿ ಉಪಾಧ್ಯಕ್ಷ ಎಲ್ ಹನುಮಂತಯ್ಯ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಚುನಾವಣಾ ಭಯೋತ್ಪಾದನೆಯ ಅಕ್ರಮದ ಮೂಲಕ ಬಿಜೆಪಿ ಚುನಾವಣೆಯಲ್ಲಿ ಗೆಲ್ಲಲು ಯತ್ನಿಸುತ್ತಿದೆ. ಬಿಜೆಪಿಯು ವಿರೋಧ ಪಕ್ಷದ ನಾಯಕರನ್ನು ಗುರಿಯಾಗಿ ಇಟ್ಟುಕೊಂಡು ಐಟಿ ಮತ್ತು ಇಡಿಗಳನ್ನು ಬಳಸಿಕೊಂಡು ದುರ್ಬಲಗೊಳಿಸುತ್ತಿದೆ. ಅಕ್ರಮದ ಮೂಲಕ ಚುನಾವಣೆ ಗೆಲ್ಲುವ ಬಿಜೆಪಿಯ ಷಡ್ಯಂತ್ರ ಕರ್ನಾಟಕದಲ್ಲಿ ನಡೆಯುವುದಿಲ್ಲ ಎಂದು ಆಕ್ರೋಶ ಹೊರ ಹಾಕಿದರು.
ರಾಜ್ಯದ ಜನರು ಭ್ರಷ್ಟ ಮತ್ತು ಜನರ ವಿರೋಧಿ ಸರ್ಕಾರದಿಂದ ಬೇಸತ್ತಿದ್ದಾರೆ. ಗೊಂದಲಮಯ ಒಳ ಮೀಸಲಾತಿ ನೀತಿಯ ವಿರುದ್ಧ ಎಲ್ಲ ಸಮುದಾಯಗಳು ಆಕ್ರೋಶ ಹೊರ ಹಾಕುತ್ತಿವೆ. ಮೀಸಲಾತಿ ನೀತಿಗೆ ಯಾವುದೇ ಸ್ಪಷ್ಟತೆ ಇಲ್ಲ. ರಾಜ್ಯದಲ್ಲಿನ ದುರಾಡಳಿತ ಹಾಗೂ ಭ್ರಷ್ಟಾಚಾರದಿಂದ ಜನ ರೋಷಿ ಹೋಗಿದ್ದು, ಕಾಂಗ್ರೆಸ್ಗೆ ಜನರು ಬಹುಮತ ನೀಡುವ ವಿಶ್ವಾಸವಿದೆ ಎಂದು ತಿಳಿಸಿದರು.
ಕಾಂಗ್ರೆಸ್ ಈಗಾಗಲೇ ಎರಡು ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಎರಡು ಮೂರು ದಿನಗಳಲ್ಲಿ ಮೂರನೇ ಪಟ್ಟಿ ಕೂಡ ಬಿಡುಗಡೆ ಆಲಿದೆ. ಬಿಜೆಪಿ ದುರದೃಷ್ಟವಶಾತ್ ಇನ್ನೂ ಕೂಡ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನೇ ಬಿಡುಗಡೆ ಮಾಡಿಲ್ಲ. ಬಂಡಾಯದ ಭೀತಿ ಅವರನ್ನು ಬಿಜೆಪಿಯನ್ನು ಕಾಡುತ್ತಿದೆ. ಬಿಜೆಪಿ ಶುದ್ಧ ರಾಜಕಾರಣದಲ್ಲಿ ನಂಬಿಕೆ ಇಲ್ಲದ ರಾಜಕೀಯ ಪಕ್ಷ. ಹೀಗಾಗಿ ಹಿಂಬಾಗಿಲ ಮೂಲಕ ಅಧಿಕಾರಕ್ಕೆ ಬಂದಿರುವುದು ರಾಜ್ಯದಲ್ಲಿ ಅವರ ಸಾಧನೆ. ಈ ಚುನಾವಣೆಯಲ್ಲಿ ಜನರು ಕುದುರೆ ವ್ಯಾಪಾರಕ್ಕೆ ಅವಕಾಶ ನೀಡಬಾರದು ಎಂದು ತಿಳಿಸಿದರು.
ಬಿಜೆಪಿ ಸಂಸತ್ತಿನ ಚರ್ಚೆ ಮತ್ತು ಚರ್ಚೆಗಳಲ್ಲಿ ನಂಬಿಕೆಯಿಲ್ಲದ ಪಕ್ಷವಾಗಿದೆ. ಬಜೆಟ್ ಅಧಿವೇಶನದಲ್ಲಿ ಸಂಸತ್ ಕಲಾಪದಲ್ಲಿ ಯಾವುದೇ ಫಲಪ್ರದ ಚರ್ಚೆಗಳು ನಡೆಯಲಿಲ್ಲ ಮತ್ತು ದ್ವೇಷದ ರಾಜಕೀಯದಲ್ಲಿ ತೊಡಗಿದೆ. ರಾಹುಲ್ ಗಾಂಧಿ ಅವರ ಮೇಲೆ ದ್ವೇಷದ ರಾಜಕಾರಣ ಮಾಡುತ್ತಿರುವುದು ದೇಶಕ್ಕೆ ತಿಳಿದಿದೆ ಎಂದರು.
ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ ಬಂಡಾಯ ಅಭ್ಯರ್ಥಿಗಳೊಂದಿಗೆ ಮಾತುಕತೆ ನಡೆಸುತ್ತಿದ್ದು, ಶೀಘ್ರದಲ್ಲೇ ಸಮಸ್ಯೆಗಳು ಬಗೆಹರಿಯುವ ಸಾಧ್ಯತೆಯಿದೆ. ಸುಳ್ಯ ಮೀಸಲು ಕ್ಷೇತ್ರದಲ್ಲಿ ಹೊರಗಿನವರನ್ನು ಅಭ್ಯರ್ಥಿ ಎಂದು ಘೋಷಿಸಿರುವುದು ನಿಜ. ಅಭ್ಯರ್ಥಿಯನ್ನು ಘೋಷಿಸುವ ಮೊದಲು ಪಕ್ಷವು ಗೆಲುವಿನ ಮತ್ತು ಸಾಮಾಜಿಕ ನ್ಯಾಯದ ಮೇಲೆ ಇದನ್ನು ಘೋಷಣೆ ಮಾಡಿದೆ ಎಂದು ತಿಳಿಸಿದರು.
ವೈಎಸ್ ವಿ ದತ್ತ ಅವರು ಪಕ್ಷಕ್ಕೆ ಸೇರ್ಪಡೆಗೊಂಡಾಗ ಸ್ಪರ್ಧಿಸುವ ಭರವಸೆ ನೀಡಿರಲಿಲ್ಲ. ಆದರೆ, ಅವರಿಗೆ ಟಿಕೆಟ್ ಸಿಗುತ್ತದೆ ಎಂಬ ನಿರೀಕ್ಷೆಯಲ್ಲಿ ಇದ್ದರಷ್ಟೇ. ಅವರಿಗೆ ಟಿಕೆಟ್ ನೀಡುತ್ತೇವೆ ಎಂದು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡಿರಲಿಲ್ಲ ಎಂದರು.
ನಟ ಸುದೀಪ್ ಅವರು ಬಿಜೆಪಿ ಯಾವಕಾರಣಕ್ಕಾಗಿ ಬೆಂಬಲಿಸಿದರು ಎಂಬುದರ ಬಗ್ಗೆ ಸ್ಪಷ್ಟ ಪಡಿಸಬೇಕು. ಅವರು ಸ್ವಹಿತಾಸಕ್ತಿಗಾಗಿ ಬೆಂಬಲಿಸುತ್ತಿದ್ದಾರೆಯೇ? 40 ಪರ್ಸೆಂಟ್ ಭ್ರಷ್ಟ ಸರ್ಕಾರವನ್ನು ಹೇಗೆ ಸಮರ್ಥಿಸುತ್ತಾರೆ ಎಂಬುದರ ಕುರಿತು ಸುದೀಪ್ ಸ್ಪಷ್ಟಪಡಿಸಬೇಕು ಎಂದು ತಿಳಿಸಿದರು.
ಪಾಲಿಕೆಯ ವಿರೋಧ ಪಕ್ಷ ನಾಯಕ ನವೀನ್ ಡಿಸೋಜ, ಸಬ್ಬೀರ್ ಎಸ್, ನೀರಜ್ ಪಾಲ್, ಶುಭೋದಯ ಅಳ್ವ, ಹಬೀಬ್ ಕಣ್ಣೂರು, ನಜೀರ್ ಬಜಾಲ್ ಇದ್ದರು.