ಮಂಗಳೂರು: ಪವಿತ್ರ ಗುರುವಾರದಂದು ಕ್ರೈಸ್ತ ಸಮುದಾಯದವರು ಚರ್ಚ್ ಗಳಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಯೇಸು ಕ್ರಿಸ್ತರ ಕೊನೆಯ ಭೋಜನದ ದಿನ ಸ್ಮರಿಸಿದರು. ಕ್ರೈಸ್ತ ಪ್ರಾರ್ಥನ ಮಂದಿರಗಳಲ್ಲಿ ಬಲಿಪೂಜೆ ಮತ್ತು ವಿಶೇಷ ಪ್ರಾರ್ಥನೆಗಳು ನಡೆದವು.
ಮಂಗಳೂರು ಬಿಷಪ್ ಡಾ. ಪೀಟರ್ ಪಾವ್ಲ್ ಸಲ್ಡಾನ್ಹಾ ಅವರು ನಗರದ ರೊಸಾರಿಯೋ ಕೆಥೆಡ್ರಲ್ನಲ್ಲಿ ಚರ್ಚ್ ನಲ್ಲಿ ವಿಶೇಷ ಪ್ರವಚನ ನೀಡಿ, ಪವಿತ್ರ ಗುರುವಾರದ ಆಚರಣೆಯ ಮೂಲಕ ವಿಶ್ವದ ಕೊನೆಯ ದಿನಗಳವರೆಗೂ ಇಂತಹ ಕೊನೆ ಭೋಜನದ ಆಚರಣೆಯನ್ನು ಮುಂದುವರಿಸಿಕೊಂಡು ಹೋಗೋಣ ಎನ್ನುವ ಸಂದೇಶವನ್ನು ನೀಡಿದರು.
ಎರಡು ಸಾವಿರ ವರ್ಷಗಳ ಹಿಂದೆ ಯೇಸು ಕ್ರಿಸ್ತರು ತಮ್ಮ ಕೊನೆಯ ಭೋಜನದ ಸಂದರ್ಭ 12 ಮಂದಿ ಶಿಷ್ಯರ ಪಾದ ತೊಳೆದು ಸೇವೆಯ ಸಂಸ್ಕಾರವನ್ನು ಪ್ರತಿಪಾದಿಸಿದ್ದು, ಅದರ ಸಂಕೇತವಾಗಿ ಬಿಷಪ್ ಹಾಗೂ ಇತರ ಚರ್ಚ್ಗಳಲ್ಲಿ ಸ್ಥಳೀಯ ಧರ್ಮಗುರುಗಳು 12 ಜನ ಕ್ರೈಸ್ತರ ಪಾದಗಳನ್ನು ತೊಳೆದರು.
ಶುಭ ಶುಕ್ರವಾರ ಆಚರಣೆ: ಯೇಸು ಕ್ರಿಸ್ತರನ್ನು ಶಿಲುಬೆಗೇರಿಸಿದ ದಿನದ ಪ್ರಯುಕ್ತ ಗುಡ್ ಫ್ರೈಡೆ ದಿನವನ್ನು ಆಚರಿಸಲಾಗುತ್ತದೆ. ಮಂಗಳೂರಿನ ಬಿಷಪ್ ಅವರು ಶಕ್ತಿನಗರದ ಮದರ್ ಆಫ್ ಗಾಡ್ ಚರ್ಚ್ನಲ್ಲಿ ಪ್ರಾರ್ಥನೆ ಮತ್ತು ಪ್ರವಚನ ನಡೆಸಲಿದ್ದಾರೆ. ಈಸ್ಟರ್ ಜಾಗರಣೆ ಬಲಿಪೂಜೆಯನ್ನು ನಗರದ ರೊಸಾರಿಯೋ ಕೆಥೆಡ್ರಲ್ನಲ್ಲಿ ನಡೆಸಿಕೊಡಲಿದ್ದಾರೆ. ಭಾನುವಾರ ಈಸ್ಟರ್ ಹಬ್ಬದ ಬಲಿಪೂಜೆ ನಡೆಯಲಿದೆ.