ಮಂಗಳೂರು: ದಾನವನ್ನು ನೀಡುವವರು ತಾವು ಶ್ರೇಷ್ಠರು ಎಂದು ಭಾವಿಸಿಕೊಳ್ಳಬಾರದು. ದಾನ ಮಾಡುವುದರಲ್ಲಿ ಧನ್ಯತೆಯನ್ನು ಕಾಣುವ ಗುಣ ನಮ್ಮದಾಗಬೇಕು. ಸಮಾಜದಿಂದ ಪಡೆದದನ್ನು ಸಮಾಜಕ್ಕೆ ನೀಡುವ ಶ್ರೇಷ್ಠ ಚಿಂತನೆ ನಮ್ಮದಾಗಬೇಕು ಎಂದು ಭಾರತೀಯ ಜೀವ ವಿಮಾ ನಿಗಮದ ಉಡುಪಿ ವಿಭಾಗಿಯ ಕಚೇರಿಯ ಹಿರಿಯ ಪ್ರಬಂಧಕ ರಾಜೇಶ್ ವಿ. ಮುದೋಳ್ ಹೇಳಿದರು.
ಮಂಗಳೂರಿನ ಶಕ್ತಿ ನಗರದಲ್ಲಿರುವ ಸಾನಿಧ್ಯಕ್ಕೆ ಎಲ್.ಐ.ಸಿ. ಗೋಲ್ಡನ್ ಜುಬಿಲಿ ಫೌಂಡೇಷನ್ ಮೂಲಕ ನೀಡಿದ ಲಿಫ್ಟ್ ಸೌಲಭ್ಯವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಾನಿಧ್ಯವು ಸಮಾಜಕ್ಕೆ ದೊಡ್ಡ ಸೇವೆಯನ್ನು ನೀಡುತ್ತಿದೆ. ಭಿನ್ನ ಸಾಮರ್ಥ್ಯದ ಮಕ್ಕಳನ್ನು ತರಬೇತು ಮಾಡುವಲ್ಲಿ ಹಾಗೂ ಅವರನ್ನು ಮುಖ್ಯವಾಹಿನಿಗೆ ತರುವಲ್ಲಿ ನಿರಂತರವಾಗಿ ಪ್ರಯತ್ನಿಸುತ್ತಿದೆ. ಸಾನಿಧ್ಯ ಸಂಸ್ಥೆಗೆ ಇನ್ನಷ್ಟು ಸೇವೆಯನ್ನು ಭಾರತೀಯ ಜೀವ ವಿಮಾ ನಿಗಮ ನೀಡಲು ಪ್ರಯತ್ನಿಸುತ್ತಿದೆ ಎಂದು ಹೇಳಿದರು.
ಭಾರತೀಯ ಜೀವ ವಿಮಾ ನಿಗಮದ ಮಾರುಕಟ್ಟೆ ಪ್ರಬಂಧಕ ರಮೇಶ್ ಭಟ್, ನಿಕಟ ಪೂರ್ವ ಸೇಲ್ಸ್ ಪ್ರಬಂಧಕ ಸದಾಶಿವ ಭಟ್, ಕ್ಲೈಮ್ಸ್ ಪ್ರಬಂಧಕ ರಾಘವೇಂದ್ರ ಎಂ. ಸಾಮುಗ, ಮಂಗಳೂರು 2 ನೇ ಶಾಖೆಯ ಪ್ರಬಂಧಕ ರಾಧಕೃಷ್ಣ ಹೆಗ್ಡೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಗಣೇಶಾ ಸೇವಾ ಟ್ರಸ್ಟಿನ ಅಧ್ಯಕ್ಷ ಮಹಾಬಲ ಮಾರ್ಲ ಅಧ್ಯಕ್ಷತೆ ವಹಿಸಿದ್ದರು. ಸಾನಿಧ್ಯದ ಆಡಳಿತಾಧಿಕಾರಿ ಡಾ. ವಸಂತ್ ಕುಮಾರ್ ಶೆಟ್ಟಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಎಲ್ಲರನ್ನು ಸ್ವಾಗತಿಸಿದರು.
ಸಾನಿಧ್ಯದ ವಿಶೇಷ ಮಕ್ಕಳು ಸ್ವಾಗತ ನೃತ್ಯದೊಂದಿಗೆ ಸ್ವಾಗತಿಸಿದರು. ಸಾನಿಧ್ಯದ ವಿಶೇಷ ಮಕ್ಕಳಿಂದ ಭಕ್ತ ಪ್ರಹ್ಲಾದ ಯಕ್ಷಗಾನ ಪ್ರದರ್ಶನ ನಡೆಯಿತು. ಲಿಫ್ಟಿ ಕಾಮಗಾರಿಗೆ ಸಹಕರಿಸಿದ ‘ಕೋನೆ’ ಸಂಸ್ಥೆಯ ಪ್ರತಿನಿಧಿ ಭರತ್, ಕಾಮಗಾರಿ ನೆರವೇರಿಸಿದ ಪ್ರಶಾಂತ್ ಶೆಣೈ ಅವರನ್ನು ಸನ್ಮಾನಿಸಲಾಯಿತು.
ಭಾರತೀಯ ಜೀವ ವಿಮಾ ನಿಗಮದ ಪ್ರತಿನಿಧಿಗಳ ಸಂಘದ ಮುಖ್ಯಸ್ಥ ಪುರುಷೋತ್ತಮ್ ಭಂಡಾರಿ, ದಕ್ಷಿಣ ಕನ್ನಡ ಜಿಲ್ಲಾ ಬಸ್ ಮಾಲೀಕರ ಸಂಘದ ಅಧ್ಯಕ್ಷ ಜಯಶೀಲ ಅಡ್ಯಂತಾಯ, ಗಣೇಶಾ ಸೇವಾ ಟ್ರಸ್ಟಿನ ಉಪಾಧ್ಯಕ್ಷ ದೇವದತ್ತ ರಾವ್, ಖಜಾಂಜಿ ಹಾಗೂ ಮಂಗಳೂರು ಮಹಾನಗರ ಪಾಲಿಕೆಯ ಕಾರ್ಪೊರೇಟರ್ ಜಗದೀಶ್ ಶೆಟ್ಟಿ, ಟ್ರಸ್ಟಿನ ಜೊತೆ ಕಾರ್ಯದರ್ಶಿ ಪ್ರೊ. ಕೆ. ರಾಧಾಕೃಷ್ಣ, ಟ್ರಸ್ಟಿ ನಿರ್ದೇಶಕ ಮೊಹಮ್ಮದ್ ಬಶೀರ್, ಸಲಹಾ ಸಮಿತಿ ಸದಸ್ಯ ಎ.ಜಿ. ಶರ್ಮ, ಶ್ಯಾಮ್ ಪ್ರಕಾಶ್, ಸಂತೋಷ್ ಶೆಟ್ಟಿ, ಯಕ್ಷಗಾನ ತರಬೇತಿದಾರರಾದ ಸುಚೇತ್ ಹಾಗೂ ದೀಕ್ಷಿತ್ ಇದ್ದರು. ಸಾನಿಧ್ಯದ ಮನಃಶಾಸ್ತ್ರಜ್ಞೆ ಅನಘಾ ಎಂ.ಎನ್. ಕಾರ್ಯಕ್ರಮ ನಿರೂಪಿಸಿದರು. ಸಾನಿಧ್ಯದ ಸಹಾಯಕ ಆಡಳಿತಾಧಿಕಾರಿ ಸುಮಾ ಡಿಸಿಲ್ವಾ ವಂದಿಸಿದರು.